ರಾಜಮೌಳಿ 'ವಾರಣಾಸಿ' ಸೈನ್ಸ್ ಫಿಕ್ಷನ್ ಸಿನಿಮಾ ಅಲ್ವಾ? ಚಿತ್ರದ ಕಾಲಾವಧಿ ಎಷ್ಟು ಗಂಟೆ?
ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ 'ವಾರಣಾಸಿ' ಸಿನಿಮಾ ಮೇಕಿಂಗ್ ಹಂತದಲ್ಲೇ ಹೈಪ್ ಕ್ರಿಯೇಟ್ ಮಾಡ್ತಿದೆ. 1300 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರಾಜಮೌಳಿ ಮತ್ತೊಂದು ಕನಸಿನ ಸಿನಿಮಾ ಇದು. ಈಗಾಗಲೇ ಶೇ. 50ರಷ್ಟು ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.
ನವೆಂಬರ್ನಲ್ಲಿ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಅದ್ಧೂರಿ ಕಾರ್ಯಕ್ರಮದಲ್ಲಿ ಮಹೇಶ್ ಹಾಗೂ ರಾಜಮೌಳಿ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಟೀಸರ್ ನೋಡಿ ಕಥೆಯನ್ನು ಊಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಿನಿಂದಲೇ ಜಕ್ಕಣ್ಣ ಪ್ರಚಾರ ಆರಂಭಿಸಿದ್ದಾರೆ.

ರಾಜಮೌಳಿ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದ ಬಹುತೇಕ ತಂಡ 'ವಾರಣಾಸಿ' ಚಿತ್ರಕ್ಕೂ ಜೊತೆಯಾಗಿದ್ದಾರೆ. TheWrap ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಜಕ್ಕಣ್ಣ ಚಿತ್ರದ ಕಥೆ, ಜಾನರ್, ಕಾಲಾವಧಿ ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಮೌಳಿ ಮೊದಲಿನಿಂದ ಇದು ಗ್ಲೋಬ್ಟ್ರಾಟರ್ ಸಿನಿಮಾ ಎಂದು ಹೇಳ್ತಾ ಬರ್ತಿದ್ದಾರೆ. ಟೀಸರ್ ನೋಡಿ ಕೆಲವರು ಸೈನ್ಸ್ ಫಿಕ್ಷನ್ ಸಿನಿಮಾ ಎಂದುಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದು ಸೈನ್ಸ್ ಫಿಕ್ಷನ್ ಸಿನಿಮಾ ಅಲ್ವಾ? ಎನ್ನುವ ಪ್ರಶ್ನೆಗೆ "ಸೈಫೈ ಫೀಲ್ ಇದ್ದರೂ ಆ ಜಾನರ್ ಸಿನಿಮಾ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಇದು ಫ್ಯಾಂಟಸಿ ಪೌರಾಣಿಕ ಚಿತ್ರ ಎಂದು ತಿಳಿಸಿದ್ದಾರೆ. ಹೆಚ್ಚು ಕಮ್ಮಿ 3 ಗಂಟೆ ಕಾಲಾವಧಿ ಸಿನಿಮಾ ಇದು ಎಂದು ಹೇಳಿದ್ದಾರೆ. ಚಿತ್ರದಲ್ಲಿ 'ರಾಮಾಯಣ'ದ ಸನ್ನಿವೇಶಗಳು ಇರಲಿದೆ. 25 ನಿಮಿಷ ರಾಮಾಯಣ ಚಿತ್ರಣ ಇರಲಿದೆ ಎಂದಿದ್ದಾರೆ.
ಚಿತ್ರದಲ್ಲಿ 'ರುದ್ರ' ಎನ್ನುವ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಆತನ ಜರ್ನಿ ಕಥೆ ಚಿತ್ರದಲ್ಲಿದೆ. ರುದ್ರ ಯಾಕೆ ತ್ರೇತಾಯುಗ, ಕಲಿಯುಗದ ನಡುವೆ ಸೇತುವೆ ಆಗುತ್ತಾನೆ? ಎನ್ನುವುದನ್ನು ತೆರೆಮೇಲೆ ನೋಡಬೇಕು. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹಾಗೂ ಸೋದರ ಸಂಬಂಧಿ ಕಂಚಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಕೆ. ಎಲ್ ನಾರಾಯಣ ಜೊತೆ ಸೇರಿ ರಾಜಮೌಳಿ ಮಗ ಕಾರ್ತಿಯೇಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ರಾಜಮೌಳಿ ಹಾಗೂ ಮಹೇಶ್ ಬಾಬು 15 ವರ್ಷಗಳ ಹಿಂದೆಯೇ ಸಿನಿಮಾ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಜಕ್ಕಣ್ಣ 'ಈಗ', 'ಬಾಹುಬಲಿ' ಸರಣಿ ಹಾಗೂ 'RRR' ರೀತಿಯ ದೊಡ್ಡ ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದರು. ಹಾಗಾಗಿ ಕಾಂಬಿನೇಷನ್ ಬಹಳ ತಡವಾಗಿತ್ತು. ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು ಅವರನ್ನು ತೋರಿಸುತ್ತಿದ್ದಾರೆ.
ಚಿತ್ರದಲ್ಲಿ ಕುಂಭ ಎಂಬ ವಿಲನ್ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಮಿಂಚುತ್ತಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಈಗಾಗಲೇ ತಮ್ಮ ದೃಶ್ಯಗಳ ಚಿತ್ರೀಕರಣವನ್ನು ಪ್ರಿಯಾಂಕ ಮುಗಿಸಿದ್ದಾರೆ ಎನ್ನಲಾಗ್ತಿದೆ. ಈ ಮೂವರ ಜೊತೆಗೆ ಮತ್ತಷ್ಟು ಘಟಾನುಘಟಿ ಕಲಾವಿದರು 'ವಾರಣಾಸಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿನೋದ್ ಛಾಯಾಗ್ರಹಣ ಹಾಗೂ ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ.
ವರ್ಷಕ್ಕೂ ಮುನ್ನ ರಾಜಮೌಳಿ 'ವಾರಣಾಸಿ' ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟಿಕೊಂಡು ಸಿನಿಮಾ ಮಾಡಲಾಗ್ತಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಚಿತ್ರವನ್ನು ಕಟ್ಟಿಕೊಡುತ್ತಿರುವುದಾಗಿ ಹೇಳಲಾಗ್ತಿದೆ. ಈ ಸಿನಿಮಾ ಮುಗಿಯುವರೆಗೆ ಬೇರೆ ಸಿನಿಮಾಗಳಲ್ಲಿ ನಟಿಸದಿರಲು ಮಹೇಶ್ ಬಾಬು ನಿರ್ಧರಿಸಿದ್ದಾರೆ. ಬಹಳ ತಯಾರಿ ನಡೆಸಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಶ್ರೀರಾಮನಾಗಿ ತೆರೆಮೇಲೆ ಮಹೇಶ್ ಬಾಬು ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











