ಪ್ರತಿ ಸಿನಿಮಾದಲ್ಲಿ ದೇವರ ಜಪ ಮಾಡುವ ರಾಜಮೌಳಿ ಮಹಾನ್ ನಾಸ್ತಿಕ ಎನ್ನುವುದು ಗೊತ್ತಾ?
ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ಆಕ್ರೋಶ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. 'ವಾರಣಾಸಿ' ಚಿತ್ರದ ಈವೆಂಟ್ನಲ್ಲಿ ದೇವರ ಬಗ್ಗೆ ಜಕ್ಕಣ್ಣ ಆಡಿದ ಮಾತುಗಳು ಕೆಲವರನ್ನು ಕೆರಳಿಸಿದೆ. ನನಗೆ ದೇವರಲ್ಲಿ ನಂಬಿಕೆ ಇಲ್ಲ ಎಂದು ಈ ಹಿಂದೆ ಕೂಡ ರಾಜಮೌಳಿ ಹೇಳಿದ್ದು ಉಂಟು.
ಅರೇ ರಾಜಮೌಳಿ ದೇವರನ್ನು ನಂಬುವುದಿಲ್ಲವೇ? ತಮ್ಮ ಪ್ರತಿ ಸಿನಿಮಾಗಳಲ್ಲಿ ದೇವರ ವಿಚಾರಗಳನ್ನು ಬಹಳ ಸೊಗಸಾಗಿ ತೋರಿಸುತ್ತಾರೆ. 'ಬಾಹುಬಲಿ' ಚಿತ್ರದಲ್ಲಿ ಶಿವುಡು ಲಿಂಗ ಹೊತ್ತು ಬರುವುದು, ಕ್ಲೈಮ್ಯಾಕ್ಸ್ನಲ್ಲಿ ಕೂಡ ಶಿವಲಿಂಗದ ದರ್ಶನ ಮಾಡಿಸಿದ್ದರು. 'ಯಮದೊಂಗ' ಚಿತ್ರದ ನರಸಿಂಹ ಸ್ವಾಮಿ ವಿಚಾರಗಳನ್ನು ತಂದಿದ್ದರು. 'ಆರ್ಆರ್ಆರ್' ಚಿತ್ರದಲ್ಲಿ ಸ್ವತಃ ರಾಮರಾಜುನನ್ನು ಶ್ರೀರಾಮ ಎಂದು ಭಾಸವಾಗುವಂತೆ ತೋರಿಸಿದ್ದರು. ಸದ್ಯ 'ವಾರಣಾಸಿ' ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು ದರ್ಶನ ಮಾಡಿಸಲಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ಹೀಗೆ ಸದಾ ದೇವರ ಜಪ ಮಾಡುವ ರಾಜಮೌಳಿ ನಿಜ ಜೀವನದಲ್ಲಿ ದೇವರನ್ನು ನಂಬುವುದಿಲ್ಲವೇ? ಎಂದು ಸಾಕಷ್ಟು ಜನ ಅಚ್ಚರಿ ವ್ಯಕ್ತಪಡುಸುತ್ತಿದ್ದಾರೆ. ಕೆಲವರಿಗೆ ಈ ವಿಚಾರ ಗೊತ್ತಿತ್ತು. ಗ್ಲೋಬ್ ಟ್ರಾಟರ್ ಈವೆಂಟ್ ಬಳಿಕ ಸಾಕಷ್ಟು ಜನರಿಗೆ ಇದು ಅರಿವಿಗೆ ಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಈ ಹಿಂದೆ ದೇವರ ವಿಚಾರದಲ್ಲಿ ತಮ್ಮ ನಂಬಿಕೆಗಳ ಬಗ್ಗೆ ಜಕ್ಕಣ್ಣ ಆಡಿದ್ದ ಮಾತುಗಳು ವೈರಲ್ ಆಗುತ್ತಿದೆ.
'ವಾರಣಾಸಿ' ಸಿನಿಮಾ ಕಾರ್ಯಕ್ರಮದಲ್ಲಿ ಹನುಮಂತನ ಬಗ್ಗೆ ರಾಜಮೌಳಿ ಹೇಳಿದ್ದ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದ್ದು ಸಿನಿಮಾ ಬಾಯ್ಕಾಟ್ ಮಾಡಬೇಕು ಎನ್ನುತ್ತಿದ್ದಾರೆ. ಶನಿವಾರ(ನವೆಂಬ್ 15) ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ದೊಡ್ಡ ಎಲ್ಇಡಿ ಸ್ಕ್ರೀನ್ನಲ್ಲಿ ಟೀಸರ್ ಪ್ರದರ್ಶನ ತಡವಾಗಿತ್ತು. ಈ ಬಗ್ಗೆ ರಾಜಮೌಳಿ ಬೇಸರದಿಂದ ವೇದಿಕೆಯಲ್ಲಿ ಮಾತನಾಡಿದ್ದರು. ಸಮಸ್ಯೆಗೆ ಒಂದರ್ಥದಲ್ಲಿ ದೇವರನ್ನು ದೂರಿದ್ದರು.

ರಾಜಮೌಳಿ ಮಾತನಾಡಿ "ನನಗೆ ದೇವರ ಮೇಲೆ ಅಷ್ಟು ನಂಬಿಕೆ ಇಲ್ಲ. ಆದರೆ ನಮ್ಮ ತಂದೆ ಈಗಷ್ಟೆ ಹೇಳ್ತಿದ್ರು, ಹನುಮಂತ ಎಲ್ಲವ್ನು ಮುನ್ನಡೆಸುತ್ತಾನೆ ಅಂತ. ಈ ರೀತಿ ಆದಾಗ, ಇದೇನಾ ಹನುಮಂತ ಮಾಡೋದು ಅನಿಸಿತು, ನನ್ನ ಪತ್ನಿಗೂ ಹನುಮ ಅಂದ್ರೆ ಭಕ್ತಿ, ಸ್ನೇಹಿತನ ರೀತಿ ಆತನೊಟ್ಟಿಗೆ ಮಾತನಾಡುತ್ತಿರುತ್ತಾಳೆ. ಹನುಮಂತ ಹೀಗೆನಾ ಮಾಡೋದು ಅಂತ ಆಕೆ ಮೇಲೆ ಕೂಡ ಕೋಪಬಂತು" ಎಂದಿದ್ದರು. ತಾಂತ್ರಿಕವಾಗಿ ಏನೋ ಸಮಸ್ಯೆ ಆಗಿದ್ದಕ್ಕೆ ದೇವರನ್ನು ದೂರುವುದು ಯಾಕೆ? ಹಾಗಿದ್ದರೆ ದುಡ್ಡಿಗಾಗಿ ರಾಜಮೌಳಿ ತಮ್ಮ ಸಿನಿಮಾಗಳಲ್ಲಿ ದೇವರನ್ನು ತೋರಿಸುತ್ತಾರಾ? ವೇದಿಕೆಗಳಲ್ಲಿ ರಾಮಾಯಣ, ಮಹಾಭಾರತದ ಬಗ್ಗೆ ಅದರಲ್ಲಿನ ಪಾತ್ರಗಳ ಬಗ್ಗೆ ಭಾಷಣ ಬಿಗಿಯೋದು ಯಾಕೆ? ಎಂದು ಕೆಲವರು ಟೀಕಿಸುತ್ತಿದ್ದಾರೆ.
'RRR' ಚಿತ್ರದ ಪ್ರಮೋಷನ್ ವೇಳೆ ಕೂಡ ದೇವರ ಮೇಲಿನ ತಮ್ಮ ನಂಬಿಕೆ ಬಗ್ಗೆ ಜಕ್ಕಣ್ಣ ಮಾತನಾಡಿದ್ದರು. "ನಾನು ದೇವರು ಅಥವಾ ಧರ್ಮವನ್ನು ಯಾವ ರೀತಿ ಬಿಂಬಿಸಲಾಗಿದೆಯೋ ಅದನ್ನು ನಂಬುವುದಿಲ್ಲ. ದೇವರನ್ನು ಒಪ್ಪುತ್ತೀರಾ ಅಂದ್ರೆ ಗೊತ್ತಿಲ್ಲ. ನಮ್ಮನ್ನೆಲ್ಲಾ ಮೀರಿದ ಶಕ್ತಿವೊಂದಿದೆ, ಅದೇ ದೇವರು ಎಂದು ತಿಳಿದವರು ಹೇಳ್ತಾರೆ. ಆ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದ್ದರು. 'ಡ್ರನ್ ಮಾಸ್ಟರ್ಸ್: ರಾಜಮೌಳಿ' ವೆಬ್ ಸೀರಿಸ್ನಲ್ಲಿ ಮಾತನಾಡಿದ್ದ ಜಕ್ಕಣ್ಣ "ದೇವರನ್ನು ತಲುಪಲು 4 ಮಾರ್ಗಗಳಿವೆ. ಜ್ಞಾನಯೋಗ, ರಾಜಯೋಗ, ಭಕ್ತಿಯೋಗ ಹಾಗೂ ಕರ್ಮಯೋಗ. ಭಕ್ತಿಯೋಗ ಬಿಟ್ಟು ಉಳಿದ ಮೂರರಲ್ಲಿ ದೇವರ ಉಲ್ಲೇಖ ಇಲ್ಲ" ಎಂದಿದ್ದರು.
ಅಂದಹಾಗೆ ರಾಜಮೌಳಿ ಮನೆಯಲ್ಲಿ ಎಲ್ಲರೂ ದೇವರ ಭಕ್ತರು. ತಂದೆ ವಿಜಯೇಂದ್ರ ಪ್ರಸಾದ್, ಪತ್ನಿ ರಮಾ ಕೂಡ ದೇವರಲ್ಲಿ ನಂಬಿಕೆ ಉಳ್ಳವರು. ತಮ್ಮ ಮಗನ ವಾದದ ಬಗ್ಗೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ಒಬ್ಬ ವ್ಯಕ್ತಿಯು ನಾಸ್ತಿಕನಾಗಬೇಕಾದರೆ, ಆತನಲ್ಲಿ ಉನ್ನತ ನೈತಿಕತೆ ಇರಬೇಕು. ಆ ಅರ್ಥದಲ್ಲಿ ನಾಸ್ತಿಕತೆಯನ್ನು ಪಾಲಿಸುವ ವ್ಯಕ್ತಿಯ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ" ಎಂದು ಹೇಳಿದ್ದರು.


Click it and Unblock the Notifications











