ತೆಲುಗಿನಲ್ಲಿ ಬದಲಾಯ್ತು 'ವಾರಣಾಸಿ' ಸಿನಿಮಾ ಟೈಟಲ್; ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ?
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆಲ ವಿವಾದಗಳಿಂದ ಕೂಡ ಸಿನಿಮಾ ಸುದ್ದಿಯಲ್ಲಿದೆ. ಹನುಮಂತನ ಬಗ್ಗೆ ಟೀಸರ್ ಲಾಂಚ್ ಈವೆಂಟ್ನಲ್ಲಿ ಜಕ್ಕಣ್ಣ ಆಡಿದ ಮಾತುಗಳು ಚರ್ಚೆ ಹುಟ್ಟಾಕ್ಕಿತ್ತು. ಇನ್ನು ಟೈಟಲ್ ವಿಚಾರ ಕೂಡ ವಿವಾದಕ್ಕೆ ಕಾರಣವಾಗಿದೆ.
ಅಂದಾಜು 1200 ಕೋಟಿ ರೂ. ಬಜೆಟ್ನಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. 2027ರ ಸಮ್ಮರ್ನಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸ್ತಿದ್ದಾರೆ. 'ವಾರಣಾಸಿ' ಟೈಟಲ್ನಲ್ಲಿ ಮತ್ತೊಂದು ತಂಡ ಸಿನಿಮಾ ನಿರ್ಮಾಣ ಮಾಡ್ತಿದೆ. ಈಗಾಗಲೇ ಫಿಲ್ಮ್ ಚೇಂಬರ್ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿ ಪೋಸ್ಟರ್ ಬಿಟ್ಟಿದ್ದಾರೆ. ಅವರೊಟ್ಟಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಲು ಸಾಧ್ಯವಾಗಿಲ್ಲ.

'ವಾರಣಾಸಿ' ಟೈಟಲ್ ಸಿಗದ ಕಾರಣ ತಮ್ಮ ಚಿತ್ರದ ಹೆಸರು ಬದಲಿಸಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗ್ತಿದೆ. ಇದೇ ಈಗ ಟಾಲಿವುಡ್ ಟಾಕ್ ಆಫ್ ದ ಟೌನ್ ಆಗಿದೆ. ದೇಶ ವಿದೇಶದ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲಾ ಭಾಷೆಗೂ ಸೂಕ್ತವಾಗಿರುವಂತೆ 'ವಾರಣಾಸಿ' ಎಂಬ ಟೈಟಲ್ ಫಿಕ್ಸ್ ಮಾಡಿದ್ದರು ರಾಜಮೌಳಿ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.
ವಾರಣಾಸಿಯಲ್ಲಿ ಪ್ರಾರಂಭವಾಗುವ ರುದ್ರನ ಕಥೆ ದೇಶ ವಿದೇಶಗಳಲ್ಲಿ ಮುಂದುವರೆಯುತ್ತದೆ. ತ್ರೇತಾಯುಗದವರೆಗೂ ಪ್ರೇಕ್ಷಕರನ್ನು ಕರೆದುಕೊಂಡು ಹೋಗಿ ಬರಲಿದೆ. ಆದರೆ ಮೂಲ ವಾರಣಾಸಿಯೇ ಆಗಿರುತ್ತದೆ. ಸದ್ಯ ಚಿತ್ರದ ಟೈಟಲ್ ಅನ್ನು 'ರಾಜಮೌಳಿ ವಾರಣಾಸಿ' ಎಂದು ಬದಲಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದು ಹೊಸದೇನು ಅಲ್ಲ, ಈ ರೀತಿ ಟೈಟಲ್ ಸಮಸ್ಯೆ ಉದ್ಭವಿಸಿದಾಗ ಕೊಂಚ ಬದಲಿಸಿ ಅದೇ ಟೈಟಲ್ ಉಳಿಸಿಕೊಳ್ಳಲಾಗುತ್ತದೆ.

ಅಂದಹಾಗೆ ತೆಲುಗಿನಲ್ಲಿ ಮಾತ್ರ 'ರಾಜಮೌಳಿ ವಾರಣಾಸಿ' ಎಂದು ಟೈಟಲ್ ಬದಲಿಸಲಿದ್ದು ಇನ್ನುಳಿದ ಭಾಷೆಗಳಲ್ಲಿ 'ವಾರಣಾಸಿ' ಎಂದು ಇರಲಿದೆ. ಕನ್ನಡದಲ್ಲಿ ದರ್ಶನ್ ನಟಿಸಿದ್ದ ಶಾಸ್ತ್ರಿ 'ಚಿತ್ರಕ್ಕೆ' 'ದರ್ಶನ್ ಶಾಸ್ತ್ರಿ', ಸುದೀಪ್ ನಟಿಸಿದ್ದ 'ವಿಷ್ಣುವರ್ಧನ' ಚಿತ್ರಕ್ಕೆ 'ವೀರ ವಿಷ್ಣುವರ್ಧನ' ಎಂದು ಕೊಂಚ ಬದಲಿಸಿ ಟೈಟಲ್ ಫಿಕ್ಸ್ ಮಾಡಿದ್ದರು. ಆದರೆ ಟೈಟಲ್ಗಳಲ್ಲಿ ದರ್ಶನ್ ಹಾಗೂ ವೀರ ಎನ್ನುವುದನ್ನು ಸಣ್ಣದಾಗಿ ಹಾಕಲಾಗಿತ್ತು. ಈಗ 'ರಾಜಮೌಳಿ ವಾರಣಾಸಿ' ಟೈಟಲ್ ವಿಚಾರದಲ್ಲೂ ಇದೇ ರೀತಿ ಮಾಡುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ನಾಯಕನ ಹೆಸರನ್ನು ಹೀಗೆ ಸಿನಿಮಾ ಟೈಟಲ್ ಜೊತೆ ಸೇರಿಸಿ ಇಡುತ್ತಾರೆ. ಆ ಅರ್ಥದಲ್ಲಿ 'ಮಹೇಶ್ ಬಾಬು ವಾರಣಾಸಿ' ಎಂದು ಟೈಟಲ್ ಬದಲಿಸಬೇಕಿತ್ತು. ಆದರೆ ಮಹೇಶ್ ಬಾಬು ಒಪ್ಪದ ಕಾರಣ 'ರಾಜಮೌಳಿ ವಾರಣಾಸಿ' ಎಂದು ಬದಲಿಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ 'ಮಹೇಶ್ ಬಾಬು ಖಲೇಜಾ' ಹೆಸರಿನಲ್ಲಿ ಸಿನಿಮಾ ಬಂದಿತ್ತು.
ಅಂದಾಜು 20 ಕೋಟಿ ರೂ. ಬಜೆಟ್ನಲ್ಲಿ 'ವಾರಣಾಸಿ' ಚಿತ್ರದ ಟೈಟಲ್ ರಿವೀಲ್ ಮಾಡಿದ್ದರು. ಆದರೆ ಎಲ್ಲವೂ ಹೊಳೆಯಲ್ಲಿ ಹುಣಸೆ ಹಿಂಡಿದಂತಾಗಿತ್ತು. ಜಿಯೋ ಹಾಟ್ಸ್ಟರ್ನಲ್ಲಿ ಈವೆಂಟ್ ಸ್ಟ್ರೀಮಿಂಗ್ ಆಗಿತ್ತು. ಶೋ ಫ್ಲಾಪ್ ಆಗಿತ್ತು. ಸಾಲದ್ದಕ್ಕೆ ರಾಜಮೌಳಿ ವೇದಿಕೆಯಲ್ಲಿ ಆಡಿದ ಮಾತೊಂದು ವಿವಾದ ಸೃಷ್ಟಿಸಿ ದೂರು ದಾಖಲಾಗುವಂತಾಯಿತು. 'RRR' ಬಳಿಕ ಬಹಳ ಗ್ಯಾಪ್ ತಗೊಂಡು ಜಕ್ಕಣ್ಣ ಈ ಸಿನಿಮಾ ಆರಂಭಿಸಿದ್ದಾರೆ.
15 ವರ್ಷಗಳ ಹಿಂದೆಯೇ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದಾಗಿ ರಾಜಮೌಳಿ ಹೇಳಿದ್ದರು. ಆದರೆ ಬಳಿಕ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿ ಒಟ್ಟಿಗೆ ಕೈ ಜೋಡಿಸುವುದು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಒರಿಸ್ಸಾ, ಆಫ್ರಿಕಾ ಹಾಗೂ ಹೈದರಾಬಾದ್ನಲ್ಲಿ ಸಿನಿಮಾ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.


Click it and Unblock the Notifications











