'ದೃಶ್ಯಂ-2' ನೋಡಿ ನಿರ್ದೇಶಕ ರಾಜಮೌಳಿ ಹೇಳಿದ್ದೇನು?
ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 2013ರಲ್ಲಿ ರಿಲೀಸ್ ಆಗಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಜಾರ್ಜ್ ಕುಟ್ಟಿಯ ಚಾಕಚಕ್ಯತೆಗೆ ಅಭಿಮಾನಿಗಳು ಮನಸೋತಿದ್ದಾರೆ.
ಫೆಬ್ರವರಿ 19ರಂದು ಒಟಿಟಿಯಲ್ಲಿ ರಿಲೀಸ್ ಆಗಿರುವ ದೃಶ್ಯಂ-2ಗೆ ಮಲಯಾಳಂ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕ ಜೀತು ಜೋಸೆಫ್ ಅವರಿಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೀಗ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಹ ದೃಶ್ಯಂ-2 ನೋಡಿ ಹಾಡಿಹೊಗಳಿದ್ದಾರೆ. ನಿರ್ದೇಶಕ ಜೀತು ಜೋಸೆಫ್ ಅವರಿಗೆ ಸಂದೇಶ ಕಳುಹಿಸಿದ ರಾಜಮೌಳಿ, ಮೋಹನ್ ಲಾಲ್ ಅಭಿನಯದ ಸಿನಿಮಾವನ್ನು ಮಾಸ್ಟರ್ ಪೀಸ್ ಎಂದು ಬಣ್ಣಿಸಿದ್ದಾರೆ. ರಾಜಮೌಳಿ ಸಂದೇಶವನ್ನು ನಿರ್ದೇಶಕ ಜೀತು ಜೋಸೆಫ್ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಹಾಯ್ ಜೀತು..ಇದು ರಾಜಮೌಳಿ, ಚಿತ್ರ ನಿರ್ದೇಶಕ. ಕೆಲವು ದಿನಗಳ ಹಿಂದೆ ದೃಶ್ಯಂ-2 ಸಿನಿಮಾ ವೀಕ್ಷಿಸಿದೆ. ಮತ್ತೆ ದೃಶ್ಯಂ ಮೊದಲ ಭಾಗ ನೋಡಲು ಹಿಂತಿರುಗಿದೆ. (ದೃಶ್ಯಂ ತೆಲುಗಿನಲ್ಲಿ ಬಿಡುಗಡೆಯಾದಾಗ ನೋಡಿದ್ದೆ) ನಿರ್ದೇಶನ, ಚಿತ್ರಕತೆ, ಎಡಿಟಿಂಗ್ ನಟನೆ ಪ್ರತಿಯೊಂದು ನಿಜಕ್ಕೂ ಅದ್ಭುತ. ಮೊದಲ ಭಾಗ ಮಾಸ್ಟರ್ ಪೀಸ್. ಹಿಡಿತದ ನಿರೂಪಣೆ ಪ್ರತಿಯೊಂದು ಅದ್ಭುತ. ನಿಮ್ಮಿಂದ ಇನ್ನು ಅನೇಕ ಮಾಸ್ಟರ್ ಪೀಸ್ ನೋಡಲು ಬಯಸುತ್ತೇನೆ' ಎಂದು ಹೇಳಿದ್ದಾರೆ.
ರಾಜಮೌಳಿ ಸಂದೇಶವನ್ನು ಜೀತು ಜೋಸೆಫ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು, ರಾಜಮೌಳಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ನಟ ಮೋಹನ್ ಲಾಲ್ ಕೂಡ ಇತ್ತೀಚಿಗೆ ಎಲ್ಲರಿಗೂ ಧನ್ಯವಾದ ತಿಳಿಸಿ ಪತ್ರ ಬರೆದಿದ್ದರು. ಸಿನಿಮಾ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದರು. ಅಂದಹಾಗೆ ದೃಶ್ಯಂ-2 ಈಗಾಗಲೇ ಬೇರೆ ಬೇರೆ ಭಾಷೆಗೆ ರಿಮೇಕ್ ಮಾಡುವ ಪ್ಲಾನ್ ಮಾಡಲಾಗುತ್ತಿದೆ.
ತೆಲುಗಿನಲ್ಲಿ ದೃಶ್ಯಂ-2 ಸೆಟ್ಟೇರಿದ್ದು, ವೆಂಕಟೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ತೆಲುಗಿನಲ್ಲೂ ಮೂಲ ನಿರ್ದೇಶಕರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಯಾವೆಲ್ಲ ಭಾಷೆಗೆ ದೃಶ್ಯಂ-2 ರಿಮೇಕ್ ಆಗಲಿದೆ ಎನ್ನುವುದನ್ನು ಕಾದುನೋಡ ಬೇಕು.


Click it and Unblock the Notifications











