ಹಾಲಿವುಡ್ ಆಫರ್ ಬಗ್ಗೆ ನಿರ್ದೇಶಕ ರಾಜಮೌಳಿ ಉತ್ತರ
ಅಬ್ಬಾ ಎನ್ನುವಂಥ ದೃಶ್ಯ ಸಂಯೋಜನೆ, ಕಣ್ಣ ರೆಪ್ಪೆ ಹಾರಿದಂತೆ ನೋಡುವಂತೆ ಮಾಡುವ ಬಿಗಿಯಾದ ನಿರೂಪಣೆ, ದೃಶ್ಯ ಸಂಯೋಜನೆಯಲ್ಲಿನ ತಂತ್ರಗಾರಿಕೆ ಇವುಗಳು ರಾಜಮೌಳಿಯನ್ನು ಭಾರತದ ಹಾಲಿ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಎನ್ನುವಂತೆ ಮಾಡಿದೆ.
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ದೊಡ್ಡ ಹಿಟ್ ಆಗಿತ್ತು. ವಿದೇಶಿ ಮಂದಿಯೂ ರಾಜಮೌಳಿ ಸೃಷ್ಟಿಸಿ ಕೊಟ್ಟ ದೃಶ್ಯ ವೈಭವ ಕಂಡು ಬೆಕ್ಕಸ ಬೆರಗಾಗಿದ್ದರು.
ರಾಜಮೌಳಿ ನಿರ್ದೇಶನ ಕೌಶಲ ಹಾಲಿವುಡ್ ನಿರ್ದೇಶಕರನ್ನು ಮೀರಿಸುವಂತಿದೆ ಎಂದು ಹಲವರು ಈಗಾಗಲೇ ಹೊಗಳಿದ್ದಾರೆ. ಅದಕ್ಕೆ ತಕ್ಕಂತೆ ರಾಜಮೌಳಿಗೆ ಹಾಲಿವುಡ್ ಆಫರ್ಗಳು ಬಂದಿವೆ ಎಂಬ ಸುದ್ದಿಯೂ 'ಬಾಹುಬಲಿ' ನಂತರ ಹರಿದಾಡಲು ಆರಂಭಿಸಿತ್ತು. ಆ ಸುದ್ದಿಗಳಿಗೆ ಸ್ವತಃ ರಾಜಮೌಳಿಯವರೇ ಸ್ಪಷ್ಟನೆ ನೀಡಿದ್ದಾರೆ. ಬಿಡುಗಡೆ ಆಗಲಿರುವ ತಮ್ಮ 'ಆರ್ಆರ್ಆರ್' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತಮ್ಮ ಹಾಲಿವುಡ್ ಎಂಟ್ರಿ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.

ಹಾಲಿವುಡ್ ಅವಕಾಶದ ಬಗ್ಗೆ ರಾಜಮೌಳಿ ಮಾತು
''ನಾನು ಹಾಲಿವುಡ್ಗೆ ಹೋಗುತ್ತೇನೆ ಎನ್ನುವುದು ಸುಳ್ಳು ನನಗೆ ಭಾರತೀಯ ಸಿನಿಮಾರಂಗದ ಮೇಲೆಯೇ ಹೆಚ್ಚು ಆಸಕ್ತಿ. ನನಗೆ ಇಲ್ಲಿನ ಕತೆಗಳನ್ನು ಇಲ್ಲಿನವರಿಗೆ ಹೇಳಬೇಕಿದೆ. ಒಂದೊಮ್ಮೆ ಹಾಲಿವುಡ್ಗೆ ಹೋದರೂ ಅಲ್ಲಿಯೂ ಭಾರತದ ಕತೆಗಳನ್ನೇ ಹೇಳುತ್ತೇನೆ'' ಎಂದಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ವಿಷಯದ ಬಗ್ಗೆ ಮಾತನಾಡುತ್ತಾ, ''ಹಾಲಿವುಡ್ ಸಿನಿಮಾ ನಿರ್ಮಾಣ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡಿದ್ದೇನೆ. ಅದು ಬೇರೆಯದ್ದೇ ರೀತಿ. ಅದು ಬೇರೆಯದ್ದೇ ಲೋಕ, ನಾನು ಇಲ್ಲಿರುವುದೇ ಕ್ಷೇಮ'' ಎಂದಿದ್ದರು.

ಡಿಸ್ನಿ ಮೂವೀಸ್ಗಾಗಿ ಅನಿಮೇಷನ್ ಸಿನಿಮಾ?
ರಾಜಮೌಳಿಯನ್ನು ಜಗದ್ವಿಖ್ಯಾತ ಡಿಸ್ನಿ ಮೂವೀಸ್ನವರು ಸಂಪರ್ಕಿಸಿ ಅನಿಮೇಷನ್ ಸಿನಿಮಾ ಮಾಡಿಕೊಡುವಂತೆ ಆಫರ್ ನೀಡಿದ್ದಾರೆಂಬ ಬಗ್ಗೆ ಸುದ್ದಿ ಹರಿದಾಡಿತ್ತು. ರಾಜಮೌಳಿ ತಂದೆ ವಿಜಯಪ್ರಕಾಶ್ ಸಹ ಈ ಸುದ್ದಿ ನಿಜವೆಂದು ಹೇಳಿದ್ದರು. ಡಿಸ್ನಿಯವರಿಗಾಗಿ ಭಾರತೀಯ ಪುರಾಣ, ಇತಿಹಾಸ ಆಧರಿಸಿ ಕತೆಯೊಂದನ್ನು ರಚಿಸುತ್ತಿದ್ದು, ಅದನ್ನು ಅನಿಮೇಟೆಡ್ ಸಿನಿಮಾ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆ ಪ್ರಾಜೆಕ್ಟ್ ಸದ್ಯಕ್ಕೆ ನಿಂತಿದೆ.

'ಆರ್ಆರ್ಆರ್' ಬಿಡುಗಡೆಗೆ ತಯಾರು
ರಾಜಮೌಳಿ ನಿರ್ದೇಶಿಸಿರುವ 'ಆರ್ಆರ್ಆರ್' ಸಿನಿಮಾ ಬಿಡುಗಡೆ ಹಂತದಲ್ಲಿದೆ. ಸಿನಿಮಾವು ಜನವರಿ 07ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ. 'ಆರ್ಆರ್ಆರ್' ಸಿನಿಮಾವು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಜೀವನ ಆಧರಿಸಿದ ಕತೆಯಾಗಿದ್ದು, ರಾಮ್ ಚರಣ್ ತೇಜ ಹಾಗೂ ಜೂ ಎನ್ಟಿಆರ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುವುದು ಎಂಎಂ ಕೀರವಾಣಿ, ಬಂಡವಾಳ ಹೂಡಿರುವುದು ಡಿವಿವಿ ದಯಾನಂದ.

'ಆರ್ಆರ್ಆರ್' ನಂತರವೂ ರಾಜಮೌಳಿ ಬ್ಯುಸಿ
'ಆರ್ಆರ್ಆರ್' ಬಿಡುಗಡೆ ಬಳಿಕ ರಾಜಮೌಳಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ನಟ ಮಹೇಶ್ ಬಾಬು ಜೊತೆಗೆ ಹೊಸ ಸಿನಿಮಾ ಮಾಡಲಿದ್ದಾರೆ. ಅರಣ್ಯದಲ್ಲಿ ನಡೆವ ಕತೆಯನ್ನು ಸಿನಿಮಾ ಹೊಂದಿದ್ದು, ಸಿನಿಮಾದ ಚಿತ್ರೀಕರಣವನ್ನು ಅಮೆಜಾನ್ ಕಾಡುಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾಕ್ಕೂ ಸಹ ರಾಜಮೌಳಿ ತಂದೆಯವರೇ ಕತೆ ರಚಿಸಿದ್ದಾರೆ. ಮಹೇಶ್ ಬಾಬು ಜೊತೆಗಿನ ಸಿನಿಮಾ ಮುಗಿದ ಬಳಿಕ ರಾಜಮೌಳಿ ಮತ್ತೆ ಪ್ರಭಾಸ್ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











