ಬಾಡಿಗೆ ಕಟ್ಟಲಾಗದ ಸ್ಥಿತಿಯಲ್ಲಿದ್ದಾಗ ಬೆಂಬಲ ನೀಡಿದ ವ್ಯಕ್ತಿಗೆ ರಾಜಮೌಳಿ ಪತ್ರ
ತೆಲುಗು ಚಿತ್ರರಂಗದ ಜನಪ್ರಿಯ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿನ್ನೆ ನಿಧನ ಹೊಂದಿದ್ದಾರೆ. ಸೀತಾರಾಮಶಾಸ್ತ್ರಿಯವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಶೋಕ ವ್ಯಕ್ತಪಡಿಸಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸೀತಾರಾಮ ಶಾಸ್ತ್ರಿಯವರನ್ನು ನೆನಪು ಮಾಡಿಕೊಂಡಿದ್ದಾರೆ.
ಜನಪ್ರಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಸಹ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರನ್ನು ನೆನಪು ಮಾಡಿಕೊಂಡು ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
''1996 ರಲ್ಲಿ ನಾವು ನಿರ್ಮಿಸಿದ 'ಅರ್ಧಾಂಗಿ' ಸಿನಿಮಾದಿಂದ ಇದ್ದ ಹಣ, ಹೆಸರು ಎಲ್ಲವನ್ನೂ ಕಳೆದುಕೊಂಡೆವು. ಬಾಡಿಗೆ ಸಹ ಕಟ್ಟಲಾರದ ಸ್ಥಿತಿ ತಲುಪಿದೆವು. ಆಗ ನನಗೆ ಧೈರ್ಯ ನೀಡಿದ್ದು ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ. ಹಾಗೂ ಅವರ 'ಎಪ್ಪುಡು ಒಪ್ಪುಕೋವೊದ್ದುರಾ ಓಟಮಿ, ಎಪ್ಪುಡು ಒದಲುಕೋವದ್ದುರಾ ಓರಿಮಿ' (ಎಂದಿಗೂ ಸೋಲೊಪ್ಪಿಕೊಳ್ಳಬೇಡ) ಎಂಬ ಸಾಲುಗಳು. ಈಗಲೂ ಭಯವಾದಾಗ, ಹಿಂಜರಿಕೆ ಎನಿಸಿದಾಗ ಆ ಹಾಡು ನೆನಪು ಬರುತ್ತದೆ, ಮನಸ್ಸಿಗೆ ಧೈರ್ಯ ಬರುತ್ತದೆ'' ಎಂದಿದ್ದಾರೆ ರಾಜಮೌಳಿ.

ಹಾಡು ಬರೆಸಿಕೊಂಡು ಅಪ್ಪನಿಗೆ ಉಡುಗೊರೆ ನೀಡಿದ್ದೆ: ರಾಜಮೌಳಿ
''ನನಗೆ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ಆಗ ಹೆಚ್ಚು ಪರಿಚಯವಿರಲಿಲ್ಲ. ಆ ಸಮಯದಲ್ಲಿಯೇ ಮದ್ರಾಸ್ನಲ್ಲಿ ನಾನು ಅವರ ಮನೆಗೆ ಹೋಗಿದ್ದೆ. ಅಂದು ಡಿಸೆಂಬರ್ 31ರ ರಾತ್ರಿ. 'ಏನು ಬೇಕು ನಂದಿ?' ಎಂದು ಕೇಳಿದರು. ನಾನು ಹೊಸ ಖಾಲಿ ನೋಟ್ಪುಸ್ತಕ ಅವರ ಕೈಗೆ ಕೊಟ್ಟು ಹಾಡು ಬರೆದುಕೊಡಿ ಎಂದೆ. ಅವರು ಬರೆದುಕೊಟ್ಟರು. ಆ ಹಾಡನ್ನು ನಾನು ಹೊಸ ವರ್ಷಕ್ಕೆಂದು ನನ್ನ ತಂದೆಗೆ ಉಡುಗೊರೆಯಾಗಿ ನೀಡಿದ್ದೆ. ಅದನ್ನು ಕಂಡು ನನ್ನ ತಂದೆಗಾಗಿದ್ದ ಖುಷಿ ಹೇಳತೀರದು. ಆ ಹಾಡು ಕಂಡು ಅವರಿಗೆ ಹೊಸ ವಿಶ್ವಾಸ ಮೂಡಿತ್ತು'' ಎಂದಿದ್ದಾರೆ ರಾಜಮೌಳಿ.

ಬೈದರೂ, ಸವಾಲಾಗಿ ಸ್ವೀಕರಿಸಿ ಹಾಡು ಬರೆದರು: ರಾಜಮೌಳಿ
ಸಿಂಹಾದ್ರಿ ಸಿನಿಮಾದ 'ಅಮ್ಮೈನ, ನಾನ್ನೈನ' ಹಾಡು, ಮರ್ಯಾದಾ ರಾಮನ್ನ ಸಿನಿಮಾದ 'ಪರುಗುಲು ತೀಯ' ಹಾಡು ಬರೆಸಿದಾಗ, ''ಅಪ್ಪ ಅಮ್ಮ ಇಲ್ಲದಿದ್ದರೆ ಸುಖವೆಂದು, ಓಡಿಹೋಗುವುದು ಒಳ್ಳೆಯದೆಂದು ಹೇಗೆ ಬರೆಯಲಿ" ಎಂದು ಬೈದಿದ್ದರು. ಆದರೂ ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎನ್ನುತ್ತಲೇ ಹಾಡು ಬೆರದು ಕೊಟ್ಟರು. ಪ್ರತಿ ಬಾರಿ ಭೇಟಿಯಾದಾಗಲೂ ಆ ಸಾಲುಗಳನ್ನು ನೆನಪು ಮಾಡಿಕೊಂಡು, ಆ ಸಾಲುಗಳನ್ನು ಒಡೆದು ಅವುಗಳ ಅರ್ಥ ತಿಳಿಸಿ, ಸಾಲುಗಳನ್ನು ಸವಿದು ಸವಿದು ಮಾತನಾಡುತ್ತಿದ್ದರು, ತಮ್ಮದೇ ಆದ ಶೈಲಿಯಲ್ಲಿ ನಗುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.

RRR ಗಾಗಿ ಹಾಡು ಬರೆದುಕೊಟ್ಟಿದ್ದ ಸೀತಾರಾಮ ಶಾಸ್ತ್ರಿ
RRR ಸಿನಿಮಾದಲ್ಲಿಯೂ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಹಾಡೊಂದನ್ನು ಬರೆದಿದ್ದಾರೆ. ಅವರು ಬರೆದಿರುವ ಕೊನೆಯ ಹಾಡದು. ಈ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ರಾಜಮೌಳಿ, ''RRR ಸಿನಿಮಾದ ಮ್ಯೂಸಿಕ್ ವಿಡಿಯೋ 'ದೋಸ್ತಿ' ಹಾಡಿಗಾಗಿ ಅವರು ಸಾಹಿತ್ಯ ಬರೆದುಕೊಟ್ಟಿದ್ದರು. ಸಾಹಿತ್ಯ ಬರೆದ ಹಾಳೆಯ ಮೇಲೆ ಅವರ ಸಹಿ ಹಾಕುತ್ತಿರುವ ವಿಡಿಯೋ ಪಡೆಯಬೇಕೆಂದು ಬಹಳ ಪ್ರಯತ್ನ ಪಟ್ಟೆವು. ಆದರೆ, ಆ ವೇಳೆಗಾಗಲೆ ಅವರ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ನಮಗೆ ಅದು ಸಾಧ್ಯವಾಗಲಿಲ್ಲ. ಒಂದೊಮ್ಮೆ ಆ ವಿಡಿಯೋ ನಮಗೆ ಸಿಕ್ಕಿದ್ದಿದ್ದರೆ ಅದೊಂದು ನೆನಪಾಗಿ ಉಳಿಯುತ್ತಿತ್ತು'' ಎಂದಿದ್ದಾರೆ ರಾಜಮೌಳಿ.

ಜನಪ್ರಿಯ ಗೀತರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ
ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ತೆಲುಗು ಚಿತ್ರರಂಗದ ಅಪ್ರತಿಮ ಗೀತ ರಚನೆಕಾರ. 1986ರಿಂದಲೂ ತೆಲುಗು ಚಿತ್ರಗಳಿಗೆ ಗೀತ ರಚನೆ ಮಾಡುತ್ತಿದ್ದಾರೆ. ಈವರೆಗೆ ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ಹಾಡು ಬರೆಯದ ನಾಯಕ ನಟ, ನಾಯಕಿ ತೆಲುಗು ಚಿತ್ರರಂಗದಲ್ಲಿಯೇ ಇಲ್ಲ. ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿದ್ದ ಸಿರಿವೆನ್ನೆಲ ಸೀತಾರಾಮಶಾಸ್ತ್ರಿಯವರು ನಿನ್ನೆ (ನವೆಂಬರ್ 30) ರಂದು ನಿಧನ ಹೊಂದಿದ್ದಾರೆ. ಅವರ ಅಗಲಿಕೆಗೆ ತೆಲುಗು ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











