ನಾನು ಶ್ರೀದೇವಿನ ರಿಜೆಕ್ಟ್ ಮಾಡಿದ್ದೆ.. ಮದುವೆಗೂ ಮುನ್ನ ನಮ್ಮಿಬ್ಬರ ಸಂಸಾರ ಶುರುವಾಗಿತ್ತು; ರಾಜಶೇಖರ್
ತೆಲುಗು ನಟ ರಾಜಶೇಖರ್ ಮತ್ತೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. 80-90ರ ದಶಕದಲ್ಲಿ ತೆಲುಗಿನ ಸ್ಟಾರ್ ನಟನಾಗಿ ಅವರು ಗುರ್ತಿಸಿಕೊಂಡಿದ್ದರು. ಬಳಿಕ ಕೆಲ ವರ್ಷ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಬಂದ 'ಬೈಕರ್' ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜಶೇಖರ್ ನಟಿಸಿ ಗಮನ ಸೆಳೆದಿದ್ದಾರೆ.
'ಬೈಕರ್' ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ರಾಜಶೇಖರ್ ಭಾಗಿ ಆಗ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿ ತಂದೆ ಹಾಗೂ ನಮ್ಮ ತಂದೆ ಆತ್ಮೀಯ ಸ್ನೇಹಿತರು. ದೂರದ ಸಂಬಂಧ ಕೂಡ. ಹಾಗಾಗಿ ನಾನು ಚಿತ್ರರಂಗಕ್ಕೆ ಬರುವ ಮುನ್ನ ಆಕೆಯನ್ನು ಮದುವೆ ಆಗುವಂತೆ ಕೇಳಿದ್ದರು. ಆದರೆ ನಾನು ಒಪ್ಪಿರಲಿಲ್ಲ, ಶ್ರೀದೇವಿ ತಾಯಿಗೆ ನಾನು ಅಂದ್ರೆ ಬಹಳ ಇಷ್ಟ. ಹಾಗಾಗಿ ಅಳಿಯನಾಗಿ ಮಾಡಿಕೊಳ್ಳಬೇಕು ಎಂದು ಬಯಸಿದ್ದರು ಎಂದು ರಾಜಶೇಖರ್ ಸಂದರ್ಶಗಳಲ್ಲಿ ಹೇಳಿರುವುದು ವೈರಲ್ ಆಗ್ತಿದೆ.

35 ವರ್ಷಗಳ ಹಿಂದೆ ರಾಜಶೇಖರ್ ಹಾಗೂ ನಟಿ ಜೀವಿತಾ ಮದುವೆ ನಡೆದಿತ್ತು. ಮದುವೆ ಬಳಿಕ ಕೂಡ ಇಬ್ಬರೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ದಂಪತಿ ಇಬ್ಬರು ಮಕ್ಕಳಿದ್ದಾರೆ. ಹಳೇ ಸಂದರ್ಶನವೊಂದರಲ್ಲಿ ಇಬ್ಬರೂ ತಮ್ಮ ಲವ್ ಸ್ಟೋರಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗಲ್ಲ ಎಂದು ಜೀವಿತಾ ಹೇಳಿದ್ದನ್ನು ರಾಜಶೇಖರ್ ನೆನಪಿಸಿಕೊಂಡಿದ್ದರು.
ಎಂಬಿಬಿಎಸ್ ಮುಗಿಸಿದ್ದ ರಾಜಶೇಖರ್ ವೈದ್ಯರಾಗಬೇಕಿತ್ತು. ಆದರೆ ಪೋಷಕರ ವಿರೋಧದ ನಡುವೆಯೂ ಚಿತ್ರರಂಗ ಪ್ರವೇಶಿಸಿದ್ದರು. 'ತಲಂಬ್ರಾಲು' ಚಿತ್ರದಲ್ಲಿ ರಾಜಶೇಖರ್ ಹಾಗೂ ಜೀವಿತಾ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಶುರುವಾದ ಸ್ನೇಗ ಪ್ರೀತಿಗೆ ತಿರುಗಿತ್ತು. ಚಿತ್ರರಂಗಕ್ಕೆ ಹೋದ ಬಳಿಕ ಲವ್ವು ಗಿವ್ವು ಅಂತ ಆಡಬೇಡ, ನಾವು ಹೇಳಿದ ಹುಡುಗಿ ಜೊತೆಗೆ ಮದುವೆ ಆಗಬೇಕು ಎಂದು ಪೋಷಕರು ಹೇಳಿದ್ದರಂತೆ. ಆದರೂ ಪ್ರೀತಿ ಮೂಡಿತ್ತು. ರಾಜಶೇಖರ್ ಸರಳತೆ, ಒಳ್ಳೆತನಕ್ಕೆ ನಾನು ಮಾರು ಹೋಗಿದ್ದೆ ಎಂದು ಜೀವಿತಾ ಹೇಳಿದ್ದರು.

ಒಮ್ಮೆ ಅಪಘಾತದಲ್ಲಿ ರಾಜಶೇಖರ್ ಗಂಭೀರವಾಗಿ ಗಾಯಗೊಂಡು ಎರಡು ಶಸ್ತ್ರಚಿಕಿತ್ಸೆ ನಡೆದಿತ್ತು. ಆಗ ಜೀವಿತಾ ಪಕ್ಕದಲ್ಲೇ ಇದ್ದು ಯೋಗಕ್ಷೇಮ ವಿಚಾರಿಸಿದ್ದರು. ಅದನ್ನು ನೋಡಿ ರಾಜಶೇಖರ್ ಪೋಷಕರು ಕೂಡ ಇಬ್ಬರ ಮದುವೆಗೆ ಒಪ್ಪಿದ್ದರಂತೆ. ಈ ವಿಚಾರವನ್ನು ರಾಜಶೇಖರ್ ವಿವರಿಸಿದ್ದರು. ನಾನು ಆಸ್ಪತ್ರೆಯಲ್ಲಿ ಇದ್ದಾಗ ಜೀವಿತಾ ಬಂದು ನೋಡಿಕೊಳ್ಳುತ್ತಿದ್ದರು. ನಮ್ಮ ಕುಟುಂಬಸ್ಥರು ಬರುವುದು ತಡವಾಗಿತ್ತು. ಬಂದು ನೋಡಿದಾಗ ಅವರು ಮಾಡಬೇಕಿದ್ದ ಕೆಲಸಗಳನ್ನೆಲಲಾ ಜೀವಿತಾ ಮಾಡುತ್ತಿದ್ದಳು. ಹಾಗಾಗಿ ಏನು ಹೇಳದೇ ಸುಮ್ಮನಾಗಿದ್ದರು ಎಂದಿದ್ದರು.
ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ನನ್ನ ಜೊತೆ ಜೀವಿತಾ ಕೂಡ ಮನೆಗೆ ಬಂದಳು. ಏಳೆಂಟು ತಿಂಗಳು ನಮ್ಮ ಮನೆಯಲ್ಲೇ ಇದ್ದಳು. ಆಗ ಮದುವೆ ನಿಶ್ಚಯವಾಯಿತು. ಮನೆಗೆ ಯಾರಾದರೂ ಬಂದ್ರೆ ಅಪ್ಪ, ಮಗನ ಮದುಬೆ ನಿಶ್ಚಯವಾಗಿದೆ ಎನ್ನುತ್ತಿದ್ದರು. ಹುಡುಗಿ ಯಾರು ಎಂದು ಕೇಳಿದ್ರೆ, ಕೂಡಲೇ ಜೀವಿತಾ ಎಂದು ಕರೆದು, ನೋಡಿ ಈ ಹುಡುಗಿ ಜೊತೆ ಎನ್ನುತ್ತಿದ್ದರು. ಹೀಗೆ ಕೆಲ ತಿಂಗಳು ನಡೆಯಿತು. ಬಳಿಕ ನಮ್ಮ ಮದುವೆ ಆಯಿತು. ಅಂದ್ರೆ ಮದುವೆಗೂ ಮುನ್ನ ನಮ್ಮ ಸಂಸಾರ ಶುರುವಾಗಿಬಿಟ್ಟಿತ್ತು ಎಂದು ರಾಜಶೇಖರ್ ಹೇಳಿದ್ದರು.
ನಾನು ಜೀವಿತಾಳನ್ನು ಪ್ರೀತಿಸುತ್ತಿದ್ದೀನಿ ಎಂದಾಗ ಅಮ್ಮ ಒಪ್ಪಲಿಲ್ಲ. ಅವ್ರು ನನಗಾಗಿ ಬೇರೆ ಹುಡುಗಿಯನ್ನು ನೋಡಿದ್ದರು. ಒಮ್ಮೆ ಜೀವಿತಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಆ ಹುಡುಗಿಯನ್ನು ಭೇಟಿ ಮಾಡಿದ್ದರು. ಅಚ್ಚರಿ ಅಂದ್ರೆ ಜೀವಿತಾ ಹಾಗೂ ಆ ಹುಡುಗಿ ಶಾಲಾ ಸಹಪಾರ್ಟಿಗಳಾಗಿದ್ದರಂತೆ. ನೀವು ಬೇರೆ ಮದುವೆ ಆಗುವಂತಿದ್ದರೆ ನಿಮ್ಮ ಇಷ್ಟ. ನಾನು ಮಾತ್ರ ನಿಮ್ಮನ್ನು ಬಿಟ್ಟು ಬೇರೆ ಯಾರನ್ನು ಮದುವೆ ಆಗಲ್ಲ, ಒಂಟಿಯಾಗಿಯೇ ಇದ್ದುಬಿಡ್ತೀನಿ ಎಂದು ಜೀವಿತಾ ಹೇಳಿದ್ದಳು. ಹಾಗಾಗಿ ಕೊನೆಗೆ ನಾನು ಒಪ್ಪಿ ಮದುವೆಯಾದೆ ಎಂದು ರಾಜಶೇಖರ್ ವಿವರಿಸಿದ್ದಾರೆ.


Click it and Unblock the Notifications