ಸುದೀಪ್ 'ಈಗ' ನಟನೆಗೆ ರಜನಿ, ಪ್ರಿನ್ಸ್ ಹೇಳಿದ್ದೇನು?
ಎಸ್ ಎಸ್ ರಾಜಮೌಳಿ ನಿರ್ದೇಶನ, ಕನ್ನಡದ ಕಿಚ್ಚ ಸುದೀಪ್ ನಟನೆಯ ಈಗ ಚಿತ್ರ ಜಗತ್ತಿನಾದ್ಯಂತ ಸುಮಾರು 1200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಅದೇ ರೀತಿ ಚಿತ್ರವನ್ನು ನೋಡಿದ ಪ್ರತಿಯೊಬ್ಬರಿಂದಲೂ ಕಿಚ್ಚ ಸುದೀಪ್ ಅಭಿನಯ ಬಹಳಷ್ಟು ಪ್ರಶಂಸೆ ಗಿಟ್ಟಿಸಿದೆ.
ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಸಾಮಾನ್ಯ ಪ್ರೇಕ್ಷಕರಲ್ಲದೇ, ತಮಿಳು, ತೆಲುಗಿನ ಬಹಳಷ್ಟು ಸೂಪರ್ ಸ್ಟಾರ್ ಗಳೂ ಕೂಡ ನೋಡಿದ್ದಾರೆ. ಅವರೆಲ್ಲಾ ಚಿತ್ರವನ್ನು ಮೆಚ್ಚಿದ್ದಲ್ಲದೇ 'ಈಗ' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಸುದೀಪ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ರಾಜಮೌಳಿ ಜೊತೆ ಸ್ಪೆಷಲ್ ಶೋ ವೀಕ್ಷಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರವನ್ನು ಬಹುವಾಗಿ ಮೆಚ್ಚಿದ್ದಲ್ಲದೇ, ಎಂದಿನ ತಮ್ಮ ಶೈಲಿಯಲ್ಲಿ ಸುದೀಪ್ ಬಗ್ಗೆ "ಇಂದಿನವರೆಗೂ ನಾನೇ ಬೆಸ್ಟ್ ವಿಲನ್ ಅಂದುಕೊಂಡಿದ್ದೆ. ಆದರೆ ನೀನು ನನ್ನನ್ನೂ ಈ ಚಿತ್ರದಲ್ಲಿ ಮೀರಿಸಿದ್ದೀಯೆ" ಎಂದಿದ್ದಾರಂತೆ. ಈ ವಿಷಯವನ್ನು ಸ್ವತಃ ರಾಜಮೌಳಿ ತಮ್ಮ ಟ್ವೀಟ್ಟರ್ ನಲ್ಲಿ ಬರೆದಿದ್ದಾರೆ.
ಅಷ್ಟೇ ಅಲ್ಲ, ಚಿತ್ರ ನೋಡಿ ಬಹುವಾಗಿ ಮೆಚ್ಚಿರುವ ತೆಲುಗು ಪ್ರಿನ್ಸ್ ಮಹೇಶ್ ಬಾಬು ಇಡೀ ಚಿತ್ರತಂಡವನ್ನು ತಮ್ಮ ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದಾರೆ. ಮುಂದುವರಿದ ಅವರು "ತೆಲುಗು ಚಿತ್ರರಂಗದಲ್ಲಿ ಬಂದಿರುವ ಅತ್ಯಮೂಲ್ಯ ಚಿತ್ರಗಳ ಸಾಲಿಗೆ ಈಗ ಚಿತ್ರ ಸೇರಲಿದೆ. ರಾಜಮೌಳಿಗೆ ಪ್ರಣಾಮಗಳು. ಜೊತೆಗೆ ಅಮೋಘವಾಗಿ ನಟಿಸಿರುವ ಸುದೀಪ್ ಅವರಿಗೆ ಸ್ಪೆಷಲ್ ಹೊಗಳಿಕೆ ಸಲ್ಲಲೇಬೇಕು" ಎಂದು ಪ್ರಿನ್ಸ್ ಮಹೇಶ್ ಬಾಬು ತಮ್ಮ ಸಮಕಾಲೀನ ನಟ ಸುದೀಪ್ ರನ್ನು ಹೊಗಳಿ ದೊಡ್ಡತನ ಮೆರೆದಿದ್ದಾರೆ.
ಇವರಿಬ್ಬರಲ್ಲದೇ ತೆಲುಗು-ತಮಿಳಿನ ಘಟಾನಿಘಟಿಗಳಾದ ವಿಕ್ರಮ್, ಸೂರ್ಯ, ಕಾರ್ತಿ, ಧನುಷ್, ರವಿತೇಜ, ವೆಂಕಟೇಶ್, ನಾಗಾರ್ಜುನ, ಸಿದ್ಧಾರ್ಥ, ಪ್ರಭಾಸ್, ತಾರಕ್ ರತ್ನ, ರಾಣಾ ದಗ್ಗುಬಾಟಿ, ರವಿಚಂದ್ರನ್, ರಾಮ್ ಗೋಪಾಲ್ ವರ್ಮಾ, ವಿವಿ ವಿನಾಯಕ್, ಪುರಿ ಜಗನ್ನಾಥ್, ಹರೀಶ್ ಶಂಕರ್ ಮತ್ತು ಶಂಕರ್ ಕೂಡ ಚಿತ್ರವನ್ನು ಮೆಚ್ಚಿ ಪ್ರಶಂಸೆ ನೀಡಿದ್ದಾರೆ. ಜೊತೆಗೆ, ಚಿತ್ರದಲ್ಲಿನ ಸುದೀಪ್ ಅಭಿನಯವನ್ನು ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ.
ಒಟ್ಟಿನಲ್ಲಿ, ಕನ್ನಡದ ನಟ ಕಿಚ್ಚ ಸುದೀಪ್ ಸೌತ್ ಇಂಡಿಯಾ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆಂಬ ಮಾತು ನಿಜವಾಗುತ್ತಿದೆ. ನೆರೆಭಾಷೆಗಳ ಸೂಪರ್ ಸ್ಟಾರ್ ಗಳೇ ಸುದೀಪ್ ಅವರನ್ನು ಹೊಗಳಿರುವುದು ಸುದೀಪ್ ನಟನೆಗೆ ಸಂದ ಗೌರವ. ಸುದೀಪ್ ಅಭಿಮಾನಿಗಳು ಹಾಗೂ ಕನ್ನಡಿಗರು ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ. ಸುದೀಪ್ ಕೂಡ ಸಖತ್ ಖುಷಿಯನ್ನು ಮಾಧ್ಯಮದ ಮೂಲಕ ಜನರ ಜೊತೆ ಹಂಚಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











