'ಕಣ್ಣಪ್ಪ' ಫಸ್ಟ್ ರಿವ್ಯೂ ಬಂದೇ ಬಿಡ್ತು; ಸಿನಿಮಾ ನೋಡಿ ಸೂಪರ್ ಸ್ಟಾರ್ ಖುಷ್
ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿತ್ತು. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಫಸ್ಟ್ ರಿವ್ಯೂ ಬಂದಿದೆ.
ಮೋಹನ್ ಬಾಬು ನಿರ್ಮಾಣದ ಈ ಪೌರಾಣಿಕ ಕಥಾಹಂದರದ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. 200 ಕೋಟಿ ರೂ. ಬಜೆಟ್ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಬೇಡರ ಕಣ್ಣಪ್ಪನ ಕಥೆ ಈ ಚಿತ್ರದಲ್ಲಿದೆ. 'ಕಣ್ಣಪ್ಪ'ನಾಗಿ ಮಂಚು ವಿಷ್ಣು ನಟಿಸಿದ್ದಾರೆ. ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗೆ ಬರಲಿದೆ. ಶರತ್ಕುಮಾರ್, ಮಧೂ, ಬ್ರಹ್ಮಾನಂದಂ, ಬ್ರಹ್ಮಾಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಕನ್ನಡ ನಟ ಸುದೀಪ್, ಹಿರಿಯ ನಟಿ ಸುಮಲತಾ ಕೂಡ 'ಕಣ್ಣಪ್ಪ' ಟ್ರೈಲರ್ ಮೆಚ್ಚಿ ಶೇರ್ ಮಾಡಿದ್ದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಫ್ಯಾಮಿಲಿ ಸಮೇತ ಸಿನಿಮಾ ನೋಡಿದ್ದಾರೆ. ಚಿತ್ರತಂಡದ ಶ್ರಮವನ್ನು ಮೆಚ್ಚಿ ಕೊಂಡಾಡಿದ್ದಾರೆ. ತಲೈವಾಗಾಗಿ ಮೋಹನ್ ಬಾಬು 'ಕಣ್ಣಪ್ಪ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. "ನಿನ್ನೆ ರಾತ್ರಿ ರಜನಿಕಾಂತ್ ಅಂಕಲ್ ಸಿನಿಮಾ ನೋಡಿ ಮೆಚ್ಚಿದ್ದರು. ನನ್ನನ್ನು ಬಿಗಿದಪ್ಪಿಕೊಂಡರು" ಎಂದು ಮಂಚು ವಿಷ್ಣು ಟ್ವೀಟ್ ಮಾಡಿದ್ದಾರೆ.
ರಜನಿಕಾಂತ್ ಹಾಗೂ ಮೋಹನ್ ಬಾಬು ಫ್ಯಾಮಿಲಿ ನಡುವೆ ಆತ್ಮೀಯ ಒಡನಾಟವಿದೆ. ಬಹಳ ಹಿಂದೆ ಮೋಹನ್ ಬಾಬು ನಟಿಸಿದ್ದ 'ಪೆದ್ದರಾಯುಡು' ಚಿತ್ರದಲ್ಲಿ ತಲೈವಾ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಭಾನುವಾರ ಈ ಸಿನಿಮಾ 30 ವರ್ಷ ಕಂಪ್ಲೀಟ್ ಮಾಡಿತ್ತು. ಈ ಸಂಭ್ರಮವನ್ನು ಇಬ್ಬರೂ ಸೇರಿ ಆಚರಿಸಿದ್ದಾರೆ. ಇದೇ ವೇಳೆ 'ಕಣ್ಣಪ್ಪ' ಚಿತ್ರ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಜೂನ್ 27ಕ್ಕೆ 'ಕಣ್ಣಪ್ಪ' ಸಿನಿಮಾ ತೆರೆಗೆ ಬರಲಿದೆ. ಪೋಸ್ಟರ್, ಟೀಸರ್ ನೋಡಿ ಕೆಲವರು ಬೇಸರಗೊಂಡಿದ್ದರು. ಆದರೆ ಟ್ರೈಲರ್ ಸಿನಿಮಾ ಮೇಲೆ ಕೊಂಚ ಭರವಸೆ ಮೂಡಿಸಿದೆ. 'ಕಣ್ಣಪ್ಪ' ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕೆಲವೇ ಆಪ್ತರು ಸಿನಿಮಾ ನೋಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಸಹ ವೈರಲ್ ಆಗುತ್ತಿದೆ.
"ರಜನಿಕಾಂತ್ ಅಂಕಲ್ ಸಿನಿಮಾ ನೋಡಿ ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡರು. ಸಿನಿಮಾ ಚೆನ್ನಾಗಿದೆ ಎಂದರು. 22 ವರ್ಷಗಳಿಂದ ಈ ಅಪ್ಪುಗೆಗೆ ಕಾಯುತ್ತಿದ್ದೆ. ಇವತ್ತು ಸಂತೋಷವಾಯಿತು. ಜೂನ್ 27ಕ್ಕೆ ಸಿನಿಮಾ ಬರ್ತಿದೆ. ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ಉತ್ಸುಕನಾಗಿದ್ದೇನೆ" ಎಂದು ಮಂಚು ವಿಷ್ಣು ಬರೆದುಕೊಂಡಿದ್ದಾರೆ.
ಬೇಡರ ಕಣ್ಣಪ್ಪನ ಕಥೆ ನಾಟಕವಾಗಿ ಬಹಳ ಜನಪ್ರಿಯವಾಗಿತ್ತು. ಡಾ. ರಾಜ್ಕುಮಾರ್ ಇದೇ ಚಿತ್ರದ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಸೂಪರ್ ಸ್ಟಾರ್ ಆಗಿದ್ದರು. ಇದೇ ಕಥೆಯನ್ನು ಕೊಂಚ ಬದಲಿಸಿ 'ಶಿವ ಮೆಚ್ಚಿನ ಕಣ್ಣಪ್ಪ' ಸಿನಿಮಾ ಮಾಡಿದ್ದರು. ಶಿವರಾಜ್ಕುಮಾರ್ ನಟಿಸಿದ್ದರು. ತೆಲುಗಿನಲ್ಲಿ 'ಭಕ್ತ ಕನ್ನಪ್ಪ' ಹೆಸರಿನಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಕೃಷ್ಣಂ ರಾಜು ಬಣ್ಣ ಹಚ್ಚಿದ್ದರು. ಅದೇ ಕಥೆ ಇದೀಗ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದೊಂದು ಸಿನಿಮಾ ಬಿಡುಗಡೆಯಾಗಿ ಬಹಳ ದಿನಗಳಾಯಿತು. 'ಕಣ್ಣಪ್ಪ' ಆ ಬರವನ್ನು ನೀಗಿಸಲು ಬರ್ತಿದ್ದಾನೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೂಡ ಸುದ್ದಿಗೋಷ್ಠಿ ನಡೆಸಿ ತಂಡ ಮಾತನಾಡಿತ್ತು. ಆದರೂ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಲು ವಿಫಲವಾಗಿದೆ. ಪ್ರಭಾಸ್ ಅತಿಥಿ ಪಾತ್ರ ನೋಡಲು ಕೆಲವರು ಉತ್ಸುಕರಾಗಿದ್ದಾರೆ.


Click it and Unblock the Notifications











