Ram Charan: ಬರಿಗಾಲಿನಲ್ಲಿ ಮುಂಬೈಗೆ ಬಂದ ನಟ ರಾಮ್ ಚರಣ್, ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ
ಈ ಮೊದಲು ಜಂಜೀರ್ ಸಿನಿಮಾ ಮೂಲಕ ಬಾಲಿವುಡ್ ಗಮನ ಸೆಳೆದಿದ್ದ ನಟ ರಾಮ್ ಚರಣ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವುದು ಆರ್ಆರ್ಆರ್ ಸಿನಿಮಾ ಬಳಿಕ. ಈ ಚಿತ್ರದ ಮೂಲಕ ದೇಶದ ಹಲವೆಡೆ ರಾಮ್ ಚರಣ್ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯ ಮುಂಬೈಗೆ ಭೇಟಿ ನೀಡಿದ್ದಾರೆ. ಅದು ವಿಶೇಷ ಕಾರಣಕ್ಕೆ.
ನಟ ರಾಮ್ ಚರಣ್ ಪ್ರತಿ ವರ್ಷ ತಮ್ಮ 48 ದಿನಗಳ ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಾರೆ. ಇದೇ ಕಾರಣಕ್ಕೆ ಅಕ್ಟೋಬರ್ 3 ರಂದು, ಸಂಪೂರ್ಣವಾಗಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಾ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸೇರಿ ಹಲವರು ಆಶ್ಚರ್ಯಗೊಂಡಿದ್ದು, ಅವರ ಸರಳತೆಯನ್ನು ಮೆಚ್ಚಿದ್ದಾರೆ. ಜೊತೆಗೆ ಅವರ ಆಧ್ಯಾತ್ಮಿಕ ಮನೋಭಾವವನ್ನು ಶ್ಲಾಘಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಂಡ ರಾಮ್ ಚರಣ್
ರಾಮ್ ಚರಣ್ ಸದ್ಯ ನಿರ್ದೇಶಕ ಶಂಕರ್ ಅವರ ಬಹುನಿರೀಕ್ಷಿತ 'ಗೇಮ್ ಚೇಂಜರ್' ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಕೆಲವು ನಟರ ಅಲಭ್ಯತೆಯಿಂದಾಗಿ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ರಾಮ್ ಚರಣ್ ಕಪ್ಪು ಕುರ್ತಾ ಮತ್ತು ಪೈಜಾಮಾ, ಕಪ್ಪು ಅಂಗವಸ್ತ್ರದೊಂದಿಗೆ ಮುಂಬೈಗೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಅವರು ಬರಿಗಾಲಿನಲ್ಲಿ ನಡೆದಿದ್ದು ನೋಡಿ ಜನರಲ್ಲಿ ಕುತೂಹಲ ಮೂಡಿಸಿತ್ತು.
ನಟ ರಾಮ್ ಚರಣ್ ತೇಜ ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿದ್ದರು. ಅದೇ ಕಾರಣಕ್ಕೆ ಕಪ್ಪು ಬಣ್ಣದ ಸರಳ ಉಡುಗೆ ಧರಿಸಿ, ನಿಯಮದಂತೆ ಬರಿಗಾಲಲ್ಲಿ ಓಡಾಡುತ್ತಿದ್ದರು. ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿದ್ದ ಅವರು, ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 48 ದಿನಗಳ ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಿದ್ದು, ದೀಕ್ಷೆ ಮುಗಿದ ಬಳಿಕ ನಟ ಶಬರಿಮಲೆಗೆ ಭೇಟಿ ನೀಡಲಿದ್ದಾರೆ.
ಈ ಹಿಂದೆಯೂ ರಾಮ್ ಚರಣ್ 'ಆರ್ಆರ್ಆರ್' ಸಕ್ಸಸ್ ಮೀಟ್ಗೆ ಬರಿಗಾಲಿನಲ್ಲಿ ಬಂದು ಜನರ ಹುಬ್ಬೇರುವಂತೆ ಮಾಡಿದ್ದರು. ಅವರು ಬರಿಗಾಲಿನಲ್ಲಿಯೇ 2023 ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ತೆರಳಿದ್ದರು. ನಟ ರಾಮ್ ಚರಣ್ ತಮ್ಮ ಬೇರುಗಳಿಗೆ ಅಂಟಿಕೊಂಡಿರುವುದು ಮತ್ತು ಧಾರ್ಮಿಕ ಕೆಲಸಗಳನ್ನು ಇಷ್ಟು ಶ್ರದ್ಧೆಯಿಂದ ಮಾಡುವುದಕ್ಕೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ.

ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್'
ರಾಮ್ ಚರಣ್ ತನ್ನ ಮಗಳು ಕ್ಲಿನ್ ಕಾರಾ ಜೊತೆಗೆ ಸಮಯ ಕಳೆಯುವುದರಲ್ಲಿ ನಿರತರಾಗಿದ್ದಾರೆ. ಶಂಕರ್ ಅವರ ಬಹುನಿರೀಕ್ಷಿತ ಗೇಮ್ ಚೇಂಜರ್ ಚಿತ್ರೀಕರಣ ಪ್ರಾರಂಭವಾಗದಿರುವ ಕಾರಣ ಮಗಳಿಗಾಗಿ ಸಮಯ ನೀಡುತ್ತಿದ್ದಾರೆ. ಅಕ್ಟೋಬರ್ನಲ್ಲಿ ಗೇಮ್ ಚೇಂಜರ್ ಮತ್ತೊಂದು ಶೆಡ್ಯೂಲ್ ಆರಂಭವಾಗಲಿದೆ.
'ಗೇಮ್ ಚೇಂಜರ್' ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ಜೆ ಸೂರ್ಯ, ಜಯರಾಮ್, ನಾಸರ್ ಮತ್ತು ಇತರರು ನಟಿಸಿದ್ದಾರೆ. ಇದು ಮುಂದಿನ ವರ್ಷ ಚಿತ್ರಮಂದಿರಗಳಿಗೆ ಬರಲಿದೆ. 'ಗೇಮ್ ಚೇಂಜರ್' ನಂತರ, ರಾಮ್ ಚರಣ್ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದದಾರೆ.
ಮಗಧೀರ, ಆರೆಂಜ್, ನಾಯಕ್, ಜಂಜೀರ್, ಏವಡು, ಧ್ರುವ, ರಂಗಸ್ಥಳಂನಂತಹ ಸಿನಿಮಾಗಳನ್ನು ನೀಡಿರುವ ರಾಮ್ ಚರಣ್ ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಇದಕ್ಕಾಗಿ ಅವರ ಪತ್ನಿ ಉಪಾಸನಾ ಕೊನಿಡೇಲ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ರಾಮ್ ಅವರ ಚಲನಚಿತ್ರಗಳನ್ನು ಹಂಚಿಕೊಂಡಿದ್ದರು, ಇದಕ್ಕೆ 'ಸ್ವೀಟ್ ಸಿಕ್ಸ್ಸ್ಟೀನ್' ಎಂದು ಬರೆದು ಶುಭಾಶಯ ಕೋರಿದ್ದರು.


Click it and Unblock the Notifications










