ಮುಂಬೈಗೆ ವಾಸ್ತವ್ಯ ಬದಲಿಸಿದ ರಾಮ್ ಚರಣ್ ತೇಜ: ಕಾರಣ ಬಾಲಿವುಡ್ ಅಲ್ಲ
ನಟ ರಾಮ್ ಚರಣ್ ತೇಜ ತೆಲುಗು ಚಿತ್ರರಂಗದ ನಂಬರ್ 1 ನಟರಲ್ಲೊಬ್ಬರು. ಅವರ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿರುವ ರಾಮ್ ಚರಣ್ ಇದ್ದಕ್ಕಿದ್ದಂತೆ ತಮ್ಮ ವಾಸ್ತವ್ಯವನ್ನು ಮುಂಬೈಗೆ ಬದಲಿಸಿದ್ದಾರೆ!
ದಕ್ಷಿಣ ಭಾರತದ ಹಲವು ನಟ-ನಟಿಯರು ಬಾಲಿವುಡ್ನಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರಭಾಸ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಇನ್ನೂ ಹಲವರು ಈಗಾಗಲೇ ಬಾಲಿವುಡ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ರಶ್ಮಿಕಾ ಅಂತೂ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಇದೇ ಕಾರಣಕ್ಕೆ ರಾಮ್ ಚರಣ್ ತೇಜ ಮುಂಬೈಗೆ ಹಾರಿದ್ದಾರಾ ಎಂದು ಅನುಮಾನಿಸಲಾಗಿದೆ.
ಆದರೆ ಅದು ಸತ್ಯವಲ್ಲ. ಬಾಲಿವುಡ್ ಸಿನಿಮಾ ಅವಕಾಶಕ್ಕಾಗಿ ರಾಮ್ ಚರಣ್ ತೇಜ ಮುಂಬೈಗೆ ಹಾರಿಲ್ಲ. ಅವರಿಗೆ ಬಾಲಿವುಡ್ ಸಿನಿಮಾಗಳ ಅಗತ್ಯವೂ ಇಲ್ಲ, ತೆಲುಗಿನಲ್ಲಿಯೇ ಅವರ ಸಿನಿಮಾಗಳು ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತವೆ. ಆದರೆ ರಾಮ್ ಚರಣ್ ತೇಜ ಮುಂಬೈಗೆ ವಾಸ್ತವ್ಯ ಬದಲಾಯಿಸಿರುವುದು ಬ್ಯುಸಿನೆಸ್ ಕಾರಣಕ್ಕೆ.
ರಾಮ್ ಚರಣ್ ತೇಜ ಒಳ್ಳೆಯ ನಟ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ. ಈಗಾಗಲೇ ಹಲವು ಪ್ರಮುಖ ಬ್ರ್ಯಾಂಡ್ಗಳಲ್ಲಿ ಬಂಡವಾಳವನ್ನು ರಾಮ್ ಚರಣ್ ತೇಜ ತೊಡಗಿಸಿದ್ದಾರೆ. ರಿಯಲ್ ಎಸ್ಟೇಟ್ನಲ್ಲೂ ಸಾಕಷ್ಟು ಹಣ ಹೂಡಿಕೆಯನ್ನು ರಾಮ್ ಚರಣ್ ಮಾಡಿದ್ದಾರೆ. ಈಗ ಮುಂಬೈನಲ್ಲಿ ಹೊಸ ಉದ್ಯಮ ಸ್ಥಾಪಿಸಲು ರಾಮ್ ಚರಣ್ ನಿಶ್ಚಯಿಸಿದ್ದು ಅದೇ ಕಾರಣಕ್ಕೆ ಕೆಲವು ವಾರಗಳಿಂದ ರಾಮ್ ಚರಣ್ ಮುಂಬೈನಲ್ಲಿದ್ದಾರೆ.

ಸಹೋದರಿಗೆ ಉಸ್ತುವಾರಿ ನೀಡಲಿರುವ ರಾಮ್ ಚರಣ್
ಕೆಲ ತಿಂಗಳ ಹಿಂದೆ ಮುಂಬೈನ ಜುಹು ಪ್ರದೇಶದಲ್ಲಿ ಮನೆ ಕರೀದಿಸಿರುವ ರಾಮ್ ಚರಣ್ ಈಗ ಕೆಲವು ಬ್ರ್ಯಾಂಡ್ಗಳೊಂದಿಗೆ ಸತತ ಸಭೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಈ ಸಭೆಗಳಲ್ಲಿ ರಾಮ್ ಚರಣ್ ತೇಜ ಜೊತೆಗೆ ಅವರ ಸಹೋದರಿ ಶ್ರೀಜಾ ಸಹ ಭಾಗವಹಿಸಿದ್ದಾರೆ. ಮುಂಬೈನ ಉದ್ಯಮಗಳನ್ನು ಶ್ರೀಜಾ ಉಸ್ತುವಾರಿಗೆ ನೀಡುವ ಯೋಜನೆ ರಾಮ್ ಚರಣ್ ಅವರದ್ದು.

ಎರಡನೇ ಪತಿಯಿಂದ ದೂರವಾಗಿರುವ ಶ್ರೀಜಾ
ಶ್ರೀಜಾ ಇದೀಗ ತಮ್ಮ ಎರಡನೇ ಪತಿಯಿಂದಲೂ ದೂರವಾಗಿದ್ದಾರೆ. ಶ್ರೀಜಾ ಕಲ್ಯಾಣ್ ಎಂದಿದ್ದ ಹೆಸರನ್ನು ಶ್ರೀಜಾ ಕೋನಿಡೇಲ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಪೋಷಕರ ಒಪ್ಪಿಗೆಯ ವಿರುದ್ಧವಾಗಿ ಪ್ರೇಮ ವಿವಾಹವಾಗಿದ್ದ ಶ್ರೀಜಾ ಬಳಿಕ ಮೊದಲ ಪತಿಗೆ ವಿಚ್ಛೇಧನ ನೀಡಿ ಎರಡನೇ ಮದುವೆಯಾದರು. ಆದರೆ ಆ ಮದುವೆಯೂ ಈಗ ಮುರಿಯುವ ಹಂತದಲ್ಲಿದೆ. ಹಾಗಾಗಿ ಸಹೋದರಿಗೆ ಸಹಾಯ ಮಾಡಲೆಂದು ರಾಮ್ ಚರಣ್ ತೇಜ ಆಕೆಗೆ ತಮ್ಮ ಹೊಸ ಉದ್ಯಮಗಳ ಉಸ್ತುವಾರಿ ನೀಡುತ್ತಿದ್ದಾರೆ. ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯ ಉಸ್ತುವಾರಿಯನ್ನೂ ಶ್ರೀಜಾ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.

ಹಲವು ಉದ್ಯಮ ಹೊಂದಿರುವ ರಾಮ್ ಚರಣ್
ರಾಮ್ ಚರಣ್ ತೇಜ ಏರ್ಲೈನ್ ಸಂಸ್ಥೆಯೊಂದನ್ನು ನಡೆಸುತ್ತಾರೆ. ಜನಪ್ರಿಯ ಹೋಟೆಲ್ ಫ್ರಾಂಚೈಸ್ ಅನ್ನು ಹೊಂದಿದ್ದು ಈ ಪ್ರಾಂಚೈನ್ನ ಹಲವು ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಕುದುರೆ ಟರ್ಫ್ ಹೊಂದಿದ್ದಾರೆ. ಗಾಲ್ಫ್ ಕೋರ್ಸ್ ಹೊಂದಿದ್ದಾರೆ. ಹೈದರಾಬಾದ್, ನೆಲ್ಲೂರು ಸೇರಿದಂತೆ ತೆಲಂಗಾಣ, ಆಂಧ್ರದ ಹಲವು ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿದ್ದಾರೆ. ಖಾಸಗಿ ಆಸ್ಪತ್ರೆಯನ್ನೂ ಕಟ್ಟಿಸಿದ್ದಾರೆ. ಶಿಕ್ಷಣ ಸಂಸ್ಥೆ ಸಹ ಇದೆ. ಇದೆಲ್ಲದರ ಜೊತೆಗೆ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಅಪೋಲೊ ಆಸ್ಪತ್ರೆ ಚೈನ್ನ ಮಾಲೀಕರ ಏಕೈಕ ಮಗಳು.

ಎರಡು ಸಿನಿಮಾಗಳು ಬಿಡುಗಡೆಗೆ ರೆಡಿ
ರಾಮ್ ಚರಣ್ ತೇಜ ನಟಿಸಿರುವ ಎರಡು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. 'RRR' ಹಾಗೂ 'ಆಚಾರ್ಯ' ಸಿನಿಮಾಗಳು ಶೀಘ್ರದಲ್ಲಿಯೇ ತೆರೆಗೆ ಬರಲಿವೆ. ರಾಜಮೌಳಿ ನಿರ್ದೇಶಿಸಿರುವ 'RRR' ಸಿನಿಮಾವು ಮಾರ್ಚ್ 25 ಕ್ಕೆ ತೆರೆಗೆ ಬರಲಿದೆ. ಇನ್ನು 'ಆಚಾರ್ಯ' ಸಿನಿಮಾದಲ್ಲಿ ತಂದೆ ಚಿರಂಜೀವಿ ಜೊತೆಗೆ ರಾಮ್ ಚರಣ್ ನಟಿಸಿದ್ದು ಈ ಸಿನಿಮಾಕ್ಕೆ ನಿರ್ಮಾಪಕರು ಅವರೇ. ಇದರ ಜೊತೆಗೆ ತಮಿಳಿನ ನಿರ್ದೇಶಕ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











