ಬುಮ್ರಾ ಬಗ್ಗೆ ಬಾಯ್ತಪ್ಪಿ ಮಾತಾಡಿ ರಾಮ್ಚರಣ್ ಕ್ಷಮೆ; ನಡುವೆ ಯಶ್ ಹೆಸರು ಯಾಕೆ ಬಂತು?
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವಾರ ಸಿನಿಮಾ ವಿಶ್ವದಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಬುಚ್ಚಿಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಶಿವರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಗಮನ ಸೆಳೆದಿದೆ. ಭೋಪಾಲ್ನಲ್ಲಿ ಚಿತ್ರದ ಆಡಿಯೋ ಲಾಂಚ್ ನಡೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಮ್ಚರಣ್ ಎಡವಟ್ಟು ಮಾಡಿದ್ದಾರೆ. ಖ್ಯಾತ ಕ್ರಿಕೆಟಿಗ ಜಸ್ಪ್ರಿತ್ ಬುಮ್ರಾ ಓರ್ವ ಫುಟ್ಬಾಲ್ ಆಟಗಾರ ಎಂದು ಹೇಳಿ ಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ. ವೇದಿಕೆಯಲ್ಲಿ ರಾಮ್ಚರಣ್ ಬಳಿ ನಿರೂಪಕ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಕ್ರಿಕೆಟಿಗರ ಹೆಸರುಗಳನ್ನು ಹೇಳಿದ್ದು ಅವರ ಬಗ್ಗೆ ರಾಮ್ಚರಣ್ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಸಚಿನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಧೋನಿ ಹೀಗೆ ಒಬ್ಬೊಬ್ಬರ ಹೆಸರು ಹೇಳಿದಾಗ ಅವರ ಬಗ್ಗೆ ಪ್ರತಿಕ್ರಿಯಿಸಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ದಾರೆ. ಅಂತಿಮವಾಗಿ ಜಸ್ಪ್ರಿತ್ ಬುಮ್ರಾ ಹೆಸರು ಹೇಳಿದ್ದಾಗ ಎಡವಟ್ಟು ಮಾಡಿಬಿಟ್ಟಿದ್ದಾರೆ. "ನಾನು ಬುಮ್ರಾ ಅವರ ದೊಡ್ಡ ಅಭಿಮಾನಿ. ಅವರು ಅದ್ಭುತವಾಗಿ ಫುಟ್ಬಾಲ್ ಆಡಿ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ" ಎಂದುಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮಾಡಿ ರಾಮ್ಚರಣ್ ಕ್ಷಮೆ ಕೇಳಿದ್ದಾರೆ.
"ಅಯ್ಯಯ್ಯೋ... ನಾನು ಕೆಲವೊಮ್ಮೆ ಹೆಸರುಗಳು ಮರೆತುಬಿಡ್ತೀನಿ. ಈ ಗೊಂದಲಕ್ಕೆ ಜಸ್ಪ್ರಿತ್ ಬುಮ್ರಾ ಅವರಿಗೆ ಕ್ಷಮೆ ಕೋರುತ್ತೇನೆ. ಭಾರೀ ಉತ್ಸಾಹ ಹಾಗೂ ಜನಸಮೂಹದ ನಡುವೆ ಆಗಿರುವ ದೊಡ್ಡ ತಪ್ಪು ಇದು. ನಾನು ನಿಮ್ಮನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನು ನಿಮ್ಮ ಆಟಕ್ಕೆ ದೊಡ್ಡ ಅಭಿಮಾನಿ" ಎಂದು ಟ್ವೀಟ್ ಮಾಡಿದ್ದಾರೆ. ಇದೇ ಮೊದಲಲ್ಲ ಈ ಹಿಂದೆ ಕೂಡ ಕೆಲ ಸಂದರ್ಶನಗಳಲ್ಲಿ ಇದೇ ರೀತಿ ರಾಮ್ಚರಣ್ ಹೆಸರುಗಳನ್ನು ಮರೆತ ಉದಾಹರಣೆಗಳಿವೆ.
ರಾಮ್ಚರಣ್ ತಂದೆ ಚಿರಂಜೀವಿ ಕೂಡ ವೇದಿಕೆಗಳಲ್ಲಿ ಮಾತನಾಡುವಾಗ ಕೆಲವೊಮ್ಮೆ ಹೆಸರುಗಳನ್ನು ಮರೆತಿರುವುದು, ತಪ್ಪಾಗಿ ಹೆಸರುಗಳನ್ನು ಸಂಭೋದಿಸಿರುವುದು ಇದೆ. ಅದನ್ನೆಲ್ಲಾ ಲಿಂಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. "ಪರವಾಗಿಲ್ಲ ಬಿಡಿ ಯಶ್ ಭಾಯ್, ನಾನು ನಿಮ್ಮ ದೊಡ್ಡ ಅಭಿಮಾನಿ, ಟಾಕ್ಸಿಕ್ ಚಿತ್ರಕ್ಕಾಗಿ ಕಾಯ್ತಿದ್ದೀನಿ" ಎಂದು ಜಸ್ಪ್ರಿತ್ ಬುಮ್ರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವಂತೆ ಫೇಕ್ ಸ್ಕ್ರೀನ್ಶಾಟ್ ವೈರಲ್ ಆಗ್ತಿದೆ.
ಯಶ್ ಹಾಗೂ ರಾಮ್ಚರಣ್ ಕೆಲವು ಕೋನಗಳಲ್ಲಿ ನೋಡಲು ಒಂದೇ ರೀತಿ ಕಾಣುತ್ತಾರೆ. ಈ ಹಿಂದೆ ಮುಂಬೈನಲ್ಲಿ ರಾಮ್ಚರಣ್ ನೋಡಿ ಯಶ್.. ಯಶ್ ಎಂದು ಪಾಪರಾಜಿಗಳು ಕೂಗಿದ್ದ ವೀಡಿಯೋ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಹೀಗೆ ಕೆಲವರು ರಾಮ್ಚರಣ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಬೇಕೆಂದೇ ರಾಮ್ಚರಣ್ ಟಾರ್ಗೆಟ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯ ಪಂದ್ಯಗಳಲ್ಲಿ ಜಸ್ಪ್ರಿತ್ ಬುಮ್ರಾ ನುರಿತ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಯಾಕೋ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಅವರ ಪ್ರದರ್ಶನ ನಿರಾಸೆ ಮೂಡಿಸಿದೆ. ಒಟ್ಟು 13 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಕಬಳಿಸಿದ್ದಾರೆ. ಮೊದಲ 5 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ ಪಡೆಯಲಿಲ್ಲ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಚ್ಚರಿ ಮೂಡಿಸಿದೆ. ಭಾರತ ಪರ ಟೆಸ್ಟ್ನಲ್ಲಿ 234 ವಿಕೆಟ್, ಏಕದಿನದಲ್ಲಿ 149 ವಿಕೆಟ್ ಹಾಗೂ ಟಿ-20 ಪಂದ್ಯಗಳಲ್ಲಿ 121 ವಿಕೆಟ್ ಕಬಳಿಸಿದ್ದಾರೆ.
'ಪೆದ್ದಿ' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದು. ಚಿತ್ರದಲ್ಲಿ ರಾಮ್ಚರಣ್ ಕ್ರಿಕೆಟ್ ಆಟಗಾರನಾಗಿ ಕುಸ್ತಿ ಪೈಲ್ವಾನ್ ಆಗಿ ದರ್ಶನ ಕೊಟ್ಟಿದ್ದಾರೆ. ಸಣ್ಣ ಹಳ್ಳಿಯಿಂದ ಪ್ಯಾರಾ ಒಲಂಪಿಕ್ಸ್ವರೆಗೆ ಪೆದ್ದಿರಾಜು ಜೀವನದ ಪಯಣದ ಕಥೆ ಚಿತ್ರದಲ್ಲಿದೆ.


Click it and Unblock the Notifications