ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ಚರಣ್ ಪತ್ನಿ ಉಪಾಸನಾ; ಸಿಹಿಸುದ್ದಿ ಹಂಚಿಕೊಂಡ ಚಿರಂಜೀವಿ
ತೆಲುಗು ನಟ ರಾಮ್ಚರಣ್ ಮತ್ತೆ ತಂದೆ ಆಗಿದ್ದಾರೆ. ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಿನ್ನೆ(ಜನವರಿ 31) ಎಂದು ಉಪಾಸನಾಗೆ ಡೆಲಿವರಿ ಡೇಟ್ ಕೊಟ್ಟಿದ್ದರು. ತಮ್ಮದೇ ಅಪೋಲೊ ಆಸ್ಪತ್ರೆಯಲ್ಲಿ ಆಕೆಗೆ ಹೆರಿಗೆಯಾಗಿದೆ. ಈ ಬಗ್ಗೆ ಮಾವ ಚಿರಂಜೀವಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಮೆಗಾ ಫ್ಯಾಮಿಲಿಗೆ ವಾರಸ್ದಾರ ಬೇಕು ಎಂದು ಚಿರಂಜೀವಿ ಹೇಳುತ್ತಾ ಬಂದಿದ್ದರು. ಅದೇ ರೀತಿ ಕೊನೆಗೂ ಮೆಗಾ ವಾರಸ್ದಾರ ಬಂದ ಎಂದು ಮೆಗಾ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಎರಡೂವರೆ ವರ್ಷದ ಹಿಂದೆ ಹೆಣ್ಣು ಮಗುವಿಗೆ ರಾಮ್ಚರಣ್-ಉಪಾಸನಾ ದಂಪತಿ ಜನ್ಮ ನೀಡಿದ್ದರು. ಎರಡನೇ ಬಾರಿ ಗರ್ಭಿಯಾಗಿದ್ದ ಉಪಾಸನಾ ಇದೀಗ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿರುವುದಾಗಿ ಚಿರಂಜೀವಿ ಸಂಭ್ರಮ ಹಂಚಿಕೊಂಡಿದ್ದಾರೆ.

ಚಿರಂಜೀವಿ ಟ್ವೀಟ್ ಮಾಡಿ "ರಾಮ್ಚರಣ್ ಹಾಗೂ ಉಪಾಸನಾ ಗಂಡು ಮತ್ತು ಹೆಣ್ಣು ಮಗು ಸೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಅಪಾರ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ. ಮಕ್ಕಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ. ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುವುದು ಅಜ್ಜ, ಅಜ್ಜಿಯಾಗಿ ನಮಗೆ ಸಂತೋಷ ತಂದಿದೆ. ಇದು ದೈವಿಕ ಆಶೀರ್ವಾದದ ಕ್ಷಣವಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಉಪಸನಾ ಗರ್ಭಿಣಿ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮನೆಯಲ್ಲಿ ಸೀಮಂತ ಮಾಡಿ ಕುಟುಂಬ ಸದಸ್ಯರು ಹಾಗೂ ಆಪ್ತರು ಸಂಭ್ರಮಿಸಿದ್ದರು. ನಟ ನಾಗಾರ್ಜುನ, ನಟಿ ನಯನತಾರ ಸೇರಿ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಮೊದಲ ಮಗುವಿಗೆ ಕ್ಲಿಂಕಾರ ಎಂದು ಚರಣ್ ಹಾಗೂ ಉಪಾಸನಾ ದಂಪತಿ ನಾಮಕರಣ ಮಾಡಿದ್ದಾರೆ. ಆದರೆ ಈವರೆಗೆ ಮಗಳ ಫೋಟೊವನ್ನು ಹಂಚಿಕೊಂಡಿಲ್ಲ.
ಮನೆಯಲ್ಲಿ ಬರೀ ಹೆಣ್ಣು ಮಕ್ಕಳೇ ಇದ್ದಾರೆ, ವಂಶೋದ್ದಾರಕ್ಕೆ ಒಂದು ಗಂಡು ಮಗು ಬೇಕು ಎಂದು ನಟ ಚಿರಂಜೀವಿ ಕೆಲ ದಿನಗಳ ಹಿಂದೆ ಬಹಿರಂಗವಾಗಿ ವೇದಿಕೆಯಲ್ಲಿ ಆಸೆ ತೋಡಿಕೊಂಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು. ಅಂತೂ ಇಂತೂ ಚಿರು ಆಸೆ ಈಡೇರಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಮದುವೆಯಾಗಿ 10 ವರ್ಷಗಳ ಬಳಿಕ ಉಪಾಸನಾ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದರು. ಮದುವೆ ಸಮಯದಲ್ಲೇ ಸದ್ಯಕ್ಕೆ ಮಗು ಎಂದು ದಂಪತಿ ನಿರ್ಧರಿಸಿದ್ದಾರೆ ಆಕೆ ಹೇಳಿಕೊಂಡಿದ್ದರು. ಕರಿಯರ್ ಮುಖ್ಯ, ಮಗುವಿಗೆ ಒಳ್ಳೆ ಜೀವನ ಕಟ್ಟಿಕೊಡಲು ನಾವು ಸದೃಢರಾಗಿರಬೇಕು. ಆ ಬಳಿಕ ಮಕ್ಕಳ ಬಗ್ಗೆ ಯೋಚಿಸಬೇಕು. ಅದೇ ಕಾರಣಕ್ಕೆ ಇಷ್ಟು ತಡವಾಗಿ ಮಗು ಪ್ಲ್ಯಾನ್ ಮಾಡಿಕೊಂಡೆವು ಎಂದು ಉಪಾಸನಾ ಹೇಳಿದ್ದರು.
ಇತ್ತೀಚೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೊದಲು ಕರಿಯರ್, ನಿಮ್ಮ ಕಾಲಿನ ಮೇಲೆ ನಿಂತುಕೊಳ್ಳಿ. ಬಳಿಕ ಮದುವೆ ಬಗ್ಗೆ ಆಲೋಚಿಸಿ, ಬೇಕಿದ್ದರೆ ಅಂಡಾಣು ಸಂರಕ್ಷಣೆ ಮಾಡಿಟ್ಟುಕೊಳ್ಳಿ ಎಂದು ಎಂದು ಉಪಾಸನಾ ಸಲಹೆ ನೀಡಿದ್ದರು. ಈ ವಿಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೀತು. ಎಲ್ಲರಿಗೂ ಇಂತಹ ಸಲಹೆ ನೀಡುವುದು ತಪ್ಪಾಗುತ್ತದೆ ಎಂದು ಕೆಲವರು ವಾದಿಸಿದ್ದರು. ಸಾಕಷ್ಟು ಜನ ಆಕೆಯ ಬೆಂಬಲಕ್ಕೆ ನಿಂತಿದ್ದರು.
ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಕಂಡು ಪ್ರೇಕ್ಷಕರ ಮನಗೆದ್ದಿದೆ. ಈ ಸಂಭ್ರಮದಲ್ಲೇ ಮೆಗಾ ಫ್ಯಾಮಿಲಿಯಲ್ಲಿ ಹೊಸ ಅತಿಥಿಗಳ ಆಗಮನದ ಸಂಭ್ರಮ ಮನೆ ಮಾಡಿದೆ. ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.


Click it and Unblock the Notifications











