ರಾಮ್ ಗೋಪಾಲ್ ವರ್ಮಾ ನಾನು ತಿಂದು ಬಿಸಾಕಿದ ಚಿಕನ್ ಮೂಳೆಗಳನ್ನು ಕಡಿಯುತ್ತಿದ್ದ!
ಭಾರತೀಯ ಚಿತ್ರರಂಗ ಕಂಡ ಪ್ರತಿಭಾನ್ವಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ಆರ್ಜಿವಿ ಈಗ ಬರೀ ವಿವಾದಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಾ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ.
ಅಮಿತಾಬ್ ಬಚ್ಚನ್ ಸೇರಿ ಸ್ಟಾರ್ ನಟರ ಜೊತೆಗೆ ಹಿಟ್ ಸಿನಿಮಾಗಳನ್ನು ಕೊಟ್ಟ ವರ್ಮಾ ಈಗ ವಿಚಿತ್ರ ಸಿನಿಮಾಗಳನ್ನು ಮಾಡುತ್ತಾ ಚೀಪ್ ಪಬ್ಲಿಸಿಟಿ ಗಿಮಿಕ್ ಮಾಡುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಅಂತಹ ಅದ್ಭುತ ನಿರ್ದೇಶಕ ಯಾಕೆ ಹೀಗೆಲ್ಲಾ ಮಾಡುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ. ಆರ್ಜಿವಿ ಬಗ್ಗೆ ತೆಲುಗು ಸಿನಿಮಾ ಬರಹಗಾರ, ನಿರ್ದೇಶಕ ಕೋನ ವೆಂಕಟ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ವರ್ಮಾ ಸಿನಿಮಾಗಳಲ್ಲಿ ಬರಹಗಾರರಾಗಿ ವೆಂಕಟ್ ಗುರ್ತಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಸ್ನೇಹವಿದೆ. ಒಮ್ಮೆ ನಾನು ತಿಂದು ಬಿಸಾಕಿದ ಚಿಕನ್ ಮೂಳೆಗಳನ್ನು ಆರ್ಜಿವಿ ತಿಂದಿದ್ದ ಎಂದು ವಿಚಿತ್ರ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ. iDream ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ನಾವು ನೀವು ಯೋಚಿಸುವಂತೆ ವರ್ಮಾ ಯೋಚಿಸುವುದಿಲ್ಲ, ಆತನ ಆಲೋಚನೆ ಬೇರೆ, ಪ್ರಪಂಚವೇ ಬೇರೆ ಎಂದು ವೆಂಕಟ್ ತಿಳಿಸಿದ್ದಾರೆ.
"ವರ್ಮಾ ಬೆಳಗ್ಗೆಯಿಂದ ರಾತ್ರಿವರೆಗೂ ಸೈಕೊದಲ್ಲೇ ಇರ್ತಾನೆ. ಆತನ ಮಾತು, ನಡೆ, ಆಲೋಚನೆ ಎಲ್ಲವೂ ವಿಚಿತ್ರ, ನಾರ್ಮಲ್ ಆಗಿ ಇರುವುದಿಲ್ಲ. ನಮಗೆಲ್ಲಾ ಒಂದು ದಿನಚರಿ ಇರುತ್ತದೆ. ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ, ಏನು ತಿನ್ನಬೇಕು, ತಿನ್ನಬಾರದು, ಯಾವುದು ಇಷ್ಟ ಹೀಗೆ ನಾನಾ ಲೆಕ್ಕಾಚಾರ ಇರುತ್ತದೆ. ಆದರೆ ಆತನ ದಿನಚರಿಯೇ ಬೇರೆ. ಯಾವುದನ್ನು ಗಂಭೀರವಾಗಿ ಪರಿಗಣಿಸಲ್ಲ. ಸಿನಿಮಾ, ಅದು, ಇದು ಅಂತ ತನ್ನದೇ ಪ್ರಪಂಚ ಸೃಷ್ಟಿಸಿಕೊಂಡು ಅದರಲ್ಲೇ ಬದುಕುತ್ತಾನೆ. ಆತನ ಪ್ರಪಂಚಕ್ಕೇ ಆತನೇ ರಾಜ" ಎಂದು ಕೋನ ವೆಂಕಟ್ ಹೇಳಿದ್ದಾರೆ.

ಆತ ಎಷ್ಟು ವಿಚಿತ್ರ ಎನ್ನುವುದಕ್ಕೆ ಒಂದು ಘಟನೆ ಹೇಳ್ತೀನಿ ಎಂದು ಕೋನ ವೆಂಕಟ್ ನೆನಪಿಸಿಕೊಂಡಿದ್ದಾರೆ. "ಆರ್ಜಿವಿ ಪ್ರಕಾರ ಹಸಿವಿಗೆ ಊಟ ಒಂದು ಮೆಡಿಸಿನ್ ಅಷ್ಟೆ. ಏನೋ ತಿಂದ್ರೆ ಆಗುತ್ತೆ. ಇಂಥದ್ದೇ ತಿನ್ನಬೇಕು ಎನ್ನುವುದೆಲ್ಲಾ ಇಲ್ಲ. ಒಮ್ಮೆ ಇಬ್ಬರೂ ಮಾತನಾಡುತ್ತಾ ಕೂತಿದ್ದೆವು. ನನಗೆ ಹಸಿವಾಯಿತು. ನಿನಗೆ ಏನಾದರೂ ಬೇಕಾ ಅಂತ ಕೇಳ್ದೆ. ಬೇಡ ಅಂದ. ಸರಿ ನಾನು ಚಿಕನ್ ತಂದೂರಿ ಏನೋ ಆರ್ಡರ್ ಮಾಡಿ ತರಿಸಿ ತಿಂದೆ. ರಾತ್ರಿ 12 ಗಂಟೆ ಸುಮಾರಿಗೆ ಆತನಿಗೆ ಹಸಿವಾಗಿದೆ. ನಾನು ತಿಂದು ಬಿಸಾಕಿದ ಚಿಕನ್ ಮೂಳೆ ಕಡಿಯಲು ಆರಂಭಿಸಿದ. ರಾಮು ನಾನು ತಿಂದು ಬಿಟ್ಟಿರುವುದು ಅಂದೆ. ಅದಕ್ಕೆ ಏನು ಈಗ ಎಂದ. ಹಸಿವಾದರೆ ತಿನ್ನಬೇಕು. ಅಷ್ಟೆ ಎನ್ನುವುದು ಆತನ ಆಲೋಚನೆ" ಎಂದು ವೆಂಕಟ್ ವಿವರಿಸಿದ್ದಾರೆ.
ರಾಮು ಬಳಿ ಹಣ ಇರುವುದಿಲ್ಲ. ಆತ ತನ್ನ ಜೇಬಿನಲ್ಲಿ ನಯಾ ಪೈಸೆ ಇಟ್ಟುಕೊಳ್ಳಲ್ಲ. ಕಾರ್ಡ್, ಪರ್ಸು ಏನು ಇರಲ್ಲ. ಕಾರ್ ಡ್ರೈವರ್ ಬಳಿ ಕೊಂಚ ಹಣ ಇರುತ್ತೆ. ಹಣ ನಿರ್ವಹಣೆ ಮಾಡುವುದು ವರ್ಮಾಗೆ ಗೊತ್ತಿಲ್ಲ. ನನಗೆ ನನಗೆ ದೊಡ್ಡ ಕಾರ್ ಬೇಕು, ಅದು ಇದು ಏನು ಕೇಳಲ್ಲ. ಹಣ ಎನ್ನುವುದು ಕೇವಲ ಬ್ಯಾಂಕ್ ಅಕೌಂಟ್ನಲ್ಲಿರುವ ನಂಬರ್ ಅಷ್ಟೆ, ಅದು ಹೆಚ್ಚಾಗುತ್ತದೆ, ಕಮ್ಮಿ ಆಗುತ್ತದೆ ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುತ್ತಿರುತ್ತಾನೆ ಎಂದು ರಾಮ್ಗೋಪಾಲ್ ವರ್ಮಾ ಆಲೋಚನೆಗಳ ಬಗ್ಗೆ ಕೋನ ವೆಂಕಟ್ ಹೇಳಿರುವುದು ವೈರಲ್ ಆಗ್ತಿದೆ.


Click it and Unblock the Notifications











