ಹಿಂದುಗಳು ಮುಸ್ಲೀಮರ ಬಳಿ ಕ್ಷಮೆ ಕೇಳಬೇಕು: ರಾಮ್ ಗೋಪಾಲ್ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಿನಿಮಾಗಳಿಂದಲ್ಲದೆ ತಮ್ಮ ವಿವಾದಾತ್ಮಕ ಟ್ವೀಟ್ಗಳಿಂದ ಇತ್ತೀಚೆಗೆ ಹೆಚ್ಚು ಖ್ಯಾತರಾಗಿದ್ದಾರೆ. ವರ್ಮಾ ಇಂದು ಮಾಡಿರುವ ಟ್ವೀಟ್ ಸಹ ವಿವಾದಕ್ಕೆ ಗುರಿಯಾಗಿದೆ.
'ಹಿಂದುಗಳು ಮುಸ್ಲೀಮರ ಬಳಿ ಕ್ಷಮೆ ಕೇಳಬೇಕು' ಎಂದಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದಕ್ಕೆ ಕಾರಣವನ್ನೂ ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಇಂದು ಕುಂಭ ಮೇಳ ನಡೆಯುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು, ಸಾಧುಗಳು ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಆದರೆ ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಈ ಸಮಯದಲ್ಲಿ ಕುಂಭ ಮೇಳಕ್ಕೆ ಅವಕಾಶ ನೀಡಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದೇ ವಿಷಯದ ಬಗ್ಗೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಕುಂಭಮೇಳ 'ಬಾಹುಬಲಿ, ಜಮಾತ್ ಕಿರುಚಿತ್ರ: ವರ್ಮಾ
'ಕಳೆದ ವರ್ಷ ದೆಹಲಿಯ 'ಜಮಾತ್' ಕಾರ್ಯಕ್ರಮ ಕೊರೊನಾ ಹಬ್ಬಿಸುವುದರಲ್ಲಿ ಕೇವಲ ಕಿರುಚಿತ್ರವಾಗಿತ್ತು ಆದರೆ ಇಂದಿನ ಕುಂಭ ಮೇಳ ಬಾಹುಬಲಿ ಮಾದರಿಯ ಸಿನಿಮಾ ಆಗಿದೆ. ಎಲ್ಲ ಹಿಂದುಗಳು ಮುಸ್ಲೀಮರ ಬಳಿ ಕ್ಷಮೆ ಕೇಳಬೇಕು. ಅವರು ಗೊತ್ತಿಲ್ಲದೆ ಜಮಾತ್ ಮಾಡಿದ್ದರು, ಆದರೆ ನಾವು ಗೊತ್ತಿದ್ದೂ ಸಹ ಮಾಡಿದ್ದೇವೆ (ಕುಂಭ ಮೇಳ)' ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.

ಕುಂಭ ಮೇಳದಲ್ಲಿ ಲಕ್ಷಾಂತರ ಜನ ಸೇರಿದ್ದಾರೆ
ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿರುವ ಕುಂಭ ಮೇಳದ ಇಂದಿನ ಚಿತ್ರ ಹಾಗೂ ಕಳೆದ ವರ್ಷದ ಜಮಾತ್ನ ಚಿತ್ರಗಳನ್ನು ಒಟ್ಟಿಗೆ ಪ್ರಕಟಿಸಿರುವ ರಾಮ್ ಗೋಪಾಲ್ ವರ್ಮಾ, 'ಅಂತರಿಕ್ಷಕ್ಕೆ ಅಂತ್ಯ ಇದೆಯೊ ಇಲ್ಲವೊ ಗೊತ್ತಿಲ್ಲ ಆದರೆ ಮೂರ್ಖತನಕ್ಕೆ ಖಂಡಿತ ಇಲ್ಲ' ಎಂಬ ಆಲ್ಬರ್ಟ್ ಐನ್ಸ್ಟೈನ್ ಅವರ ಹೇಳಿಕೆಯನ್ನು ಕೋಟ್ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದಿದ್ದ ತಬ್ಲಿಗಿ ಜಮಾತ್
ಕಳೆದ ವರ್ಷ ಮಾರ್ಚ್ನಲ್ಲಿ ದೆಹಲಿಯಲ್ಲಿ ತಬ್ಲಿಗಿ ಜಮಾತ್ ಕಾರ್ಯಕ್ರಮ ನಡೆದಿತ್ತು ಅದೇ ಸಮಯದಲ್ಲಿ ಲಾಕ್ಡೌನ್ ಮಾಡಲಾಯಿತು. ಜಮಾತ್ಗೆ ವಿದೇಶದಿಂದಲೂ ಅತಿಥಿಗಳು ಆಗಮಿಸಿದ್ದರು. ಜಮಾತ್ನಲ್ಲಿ ಭಾಗವಹಿಸಿದ್ದ ಹಲವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮುಸಲ್ಮಾನರ ವಿರುದ್ಧ ದೂಷಿಸಿ ದ್ವೇಷ ಕಾರಲಾಗಿತ್ತು. ಈಗ ಲಕ್ಷಾಂತರ ಮಂದಿಯನ್ನು ಸೇರಿಸಿ ಕುಂಭ ಮೇಳ ಮಾಡಲಾಗುತ್ತಿದೆ.
Recommended Video

ಸೋನಿ ರಜ್ದಾನ್ ಸಹ ಪ್ರಶ್ನೆ ಮಾಡಿದ್ದಾರೆ
ರಾಮ್ ಗೋಪಾಲ್ ವರ್ಮಾ ಮಾತ್ರವೇ ಅಲ್ಲದೆ ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಹಾಗೂ ಇನ್ನೂ ಹಲವಾರು ಮಂದಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗುತ್ತಿರುವ ಕುಂಭ ಮೇಳವನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಕುಂಭಮೇಳವು ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿ ನಡೆಯುತ್ತಿದೆ.


Click it and Unblock the Notifications











