'RRR' ಸಿನಿಮಾ ನನಗೆ ಜೆಮಿನಿ ಸರ್ಕಸ್ ನೋಡಿದಂತಾಯ್ತು: ರಾಮ್ ಗೋಪಾಲ್ ವರ್ಮಾ
ಭಾರತೀಯ ಚಿತ್ರರಂಗದಲ್ಲಿ ಟ್ಯಾಲೆಂಟೆಂಡ್ ಡೈರೆಕ್ಟರ್ ರಾಮ್ಗೋಪಾಲ್ ವರ್ಮಾ. ಒಂದ್ಕಾಲದಲ್ಲಿ ವಿಭಿನ್ನ ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ವರ್ಮಾ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಆದರೆ ತಮ್ಮ ನೇರ ನಡೆ ನುಡಿಯಿಂದ ಯಾವಾಗ ವರ್ಮಾ ಸುದ್ದಿಯಲ್ಲಿ ಇರುತ್ತಾರೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವುದು ವರ್ಮಾ ಸ್ಟೈಲ್. ಪಾಲಿಟಿಕ್ಸ್, ಸಿನಿಮಾ ಯಾವುದೇ ವಿಷಯ ಆದರೂ ಯಾರಿಗೂ ಹೆದರದೇ ತಮ್ಮದೇ ದೃಷ್ಟಿಕೋನದಲ್ಲಿ ಎಲ್ಲವನ್ನು ವಿಶ್ಲೇಷಣೆ ಮಾಡುತ್ತಿರುತ್ತಾರೆ. ಯಾರಿಗೂ ಭಯಪಡುವ ಜಾಯಮಾನ ಆರ್ಜಿವಿದ್ದಲ್ಲ. ಇದೀಗ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾ ಬಗ್ಗೆ ಆರ್ಜಿವಿ ಕೊಟ್ಟಿರುವ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕೆಲ ತಿಂಗಳ ಹಿಂದೆ ತೆರೆಗಪ್ಪಳಿಸಿದ್ದ ಈ ಮೆಗಾ ಮಲ್ಟಿಸ್ಟಾರರ್ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹಾಲಿವುಡ್ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ರಾಜಮೌಳಿಗೆ ಬಹುಪರಾಕ್ ಎಂದಿದ್ದರು. ಆದರೆ 'ಆರ್ಆರ್ಆರ್' ನೋಡಿದರೆ ನನಗೆ ಯಾವುದೋ ಸರ್ಕಸ್ ನೋಡಿದಂತೆ ಭಾಸವಾಯಿತು ಎಂದು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ.
ಇತ್ತೀಚೆಗೆ ಸಿನಿಮಾ ಮ್ಯಾಗಜೀನ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವರ್ಮಾ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ರಾಮ್ ಚರಣ್ ತೇಜಾ ಹಾಗೂ ಜ್ಯೂ. ಎನ್ಟಿಆರ್ ನಟನೆಯ ಮೆಗಾ ಆಕ್ಷನ್ ಡ್ರಾಮಾ 'ಆರ್ಆರ್ಆರ್' ಸಿನಿಮಾ ಕುರಿತು ಆರ್ಜಿವಿ ಕಾಮೆಂಟ್ಸ್ ಸಖತ್ ವೈರಲ್ ಆಗಿದೆ. "ಆರ್ಆರ್ಆರ್' ಸಿನಿಮಾ ನನಗೆ ಸರ್ಕಸ್ ನೋಡಿದ ಅನುಭವ ನೀಡಿತು. ಅದರಲ್ಲೂ ಬ್ರಿಡ್ಜ್ ಬಳಿ ಬಾಲಕನನ್ನು ಕಾಪಾಡುವ ಸೀನ್ನಲ್ಲಿ ಚರಣ್- ತಾರಕ್ ಮಾಡಿದ ಸಾಹಸ ನನಗೆ ಜೆಮಿನಿ ಸರ್ಕಸ್ ಕಲಾವಿದರು ಮಾಡಿದ ಸಾಹಸದಂತೆ ಭಾಸವಾಯಿತು" ಎಂದಿದ್ದಾರೆ. ಮತ್ತೊಂದ್ಕಡೆ ನನ್ನ ಹೇಳಿಕೆಯನ್ನು ತಪ್ಪಾಗಿ ಭಾವಿಸಬೇಡಿ ಎಂದು ವರ್ಮಾ ಮನವಿ ಮಾಡಿಕೊಂಡಿದ್ದಾರೆ. "ಸರ್ಕಸ್ ನೋಡಿದಾಗ ಎಂತಹ ಜೋಶ್ ಬರುತ್ತದೋ ಅದೇ ಜೋಶ್ ಆರ್ಆರ್ಆರ್' ಸಿನಿಮಾ ನೋಡಿದಾಗಲೂ ಬಂತು" ಎಂದು ವಿವರಿಸಿದ್ದಾರೆ.
ಕಾಲೇಜು ದಿನಗಳಲ್ಲಿ ನನಗೆ ಕಮ್ಯುನಿಷ್ಟ್ ಮನಸ್ಥಿತಿ ಇತ್ತು. ಆದರೆ ಅಯಾನ್ ರ್ಯಾಂಡ್ ಪುಸ್ತಕಗಳನ್ನು ಓದಿದ ಬಳಿಕ ನನ್ನಲ್ಲಿ ಬದಲಾವಣೆ ಆಯಿತು. ಫೆಮಿನಿಸಂ ಅಂದರೆ ಸ್ತ್ರೀಯರಿಗಾಗಿ ಹೋರಾಟ ಮಾಡುವುದಲ್ಲ. ಸ್ತ್ರೀಯರನ್ನು ಪ್ರೇಮಿಸುವುದು. ತೆರೆಮೇಲೆ ನನ್ನಷ್ಟು ಚೆನ್ನಾಗಿ ನಟಿಯರನ್ನು ಯಾರು ತೋರಿಸಿಲ್ಲ ಎಂದಿದ್ದಾರೆ. ಇನ್ನು ಮಣಿರತ್ನಂ ನಿರ್ದೇಶನದ ಸಿನಿಮಾಗಳ ಬಗ್ಗೆ ಮಾತನಾಡಿರುವ ಆರ್ಜಿವಿ "ಆತನ ಸಿನಿಮಾಗಳು ನನಗೆ ಇಷ್ಟವಾಗುವುದಿಲ್ಲ. ನನ್ನ ಸಿನಿಮಾಗಳು ಅವರಿಗೂ ಇಷ್ಟವಾಗುವುದಿಲ್ಲ. ಒಮ್ಮೆ ಇಬ್ಬರೂ ಸ್ಕ್ರಿಪ್ಟ್ ಕೆಲಸದಲ್ಲಿ ಕೂತಿದ್ದೆವು. ನನ್ನ ಮಾತು ಅವರು ಕೇಳಲಿಲ್ಲ. ಅವರ ಮಾತು ನಾನು ಕೇಳಲಿಲ್ಲ. ಕೊನೆಗೆ ಸಿನಿಮಾ ರಿಲೀಸ್ ಆಯಿತು. ಆ ಸಿನಿಮಾಗಳು ಅಂದರೆ 'ದೊಂಗ ದೊಂಗ' ಹಾಗೂ 'ಗಾಯಂ'. ಆ ಎರಡೂ ಸಿನಿಮಾಗಳಲ್ಲಿ ನಮ್ಮಿಬ್ಬರ ಹೆಸರುಗಳನ್ನು ಹಾಕಿಕೊಂಡಿದ್ದೇವೆ" ಎಂದಿದ್ದಾರೆ.

"ನನ್ನ ಕರಿಯರ್ನಲ್ಲಿ 'ಸರ್ಕಾರ್' ಹಾಗೂ 'ಕ್ಷಣಂ ಕ್ಷಣಂ' ಸಿನಿಮಾಗಳನ್ನು ಮಾತ್ರವೇ ಪಕ್ಕಾ ಸ್ಟ್ರಿಪ್ಟ್ ಮಾಡಿ, ಅದಕ್ಕೆ ತಕ್ಕ ನಟರನ್ನು ಬಳಸಿಕೊಂಡು ಮಾಡಿದ್ದು. ಉಳಿದ ಸಿನಿಮಾಗಳಲ್ಲಿ ಇಂತಹವರನ್ನೇ ಹಾಕಿಕೊಂಡು ಮಾಡಬೇಕು ಎಂದು ಮಾಡಿದಲ್ಲ" ಎಂದು ಹೇಳಿದ್ದಾರೆ. ಸದ್ಯ ರಾಮ್ಗೋಪಾಲ್ ವರ್ಮಾ ಕಾಮೆಂಟ್ಸ್ ಭಾರೀ ಸದ್ದು ಮಾಡುತ್ತಿದ್ದು ಇದಕ್ಕೆ ಯಾರು ಏನು ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.


Click it and Unblock the Notifications











