ಒಂದು 'ಪುಷ್ಪ' ಹತ್ತು 'ಕೆಜಿಎಫ್'ಗೆ ಸಮ ಎಂದಿದ್ದ ನಿರ್ದೇಶಕ ಚಾಮುಂಡಿ ಬೆಟ್ಟಕ್ಕೆ ಭೇಟಿ
ನಾಡದೇವತೆ ಚಾಮುಂಡಿ ದೇವಿ ಬಗ್ಗೆ ಅಸಂಖ್ಯಾತ ಜನರಿಗೆ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇದೆ. ದೇಶ ವಿದೇಶಗಳಿಂದ ಪ್ರವಾಸಿಗರು, ಭಕ್ತರು ಪ್ರತಿದಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ತಾಯಿ ಬಳಿ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎನ್ನುವ ನಂಬಿಕೆಯಿದೆ.
ಸಾಕಷ್ಟು ಜನ ಸಿನಿಮಾ ತಾರೆಯರು ಆಗಾಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ನಟರಾದ ದರ್ಶನ್, ಸುದೀಪ್, ಶಿವರಾಜ್ಕುಮಾರ್ ಆಗಾಗ್ಗೆ ಶಕ್ತಿದೇವತೆಯ ದರ್ಶನ ಪಡೆದು ಬರುತ್ತಾರೆ. ಇದೀಗ ತೆಲುಗು ನಿರ್ದೇಶಕರೊಬ್ಬರು ಚಾಮುಂಡಿ ತಾಯಿ ಸನ್ನಿಧಿಯಲ್ಲಿ ತಮ್ಮ ಸಿನಿಮಾ ಸ್ಕ್ರಿಪ್ಟ್ ಪೂಜೆ ಮಾಡಿಸಿ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ರಾಮ್ಚರಣ್ ಹಾಗೂ ಜಾನ್ವಿ ಕಪೂರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ತೆಲುಗು ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಮೆಗಾಪವರ್ ಸ್ಟಾರ್ ಜೊತೆ ಮೆಗಾ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಇನ್ನು ಹೆಸರಿಡದ ಚಿತ್ರವನ್ನು ಸದ್ಯಕ್ಕೆ RC16(ರಾಮ್ಚರಣ್ 16ನೇ ಸಿನಿಮಾ) ಎಂದು ಕರೆಯಲಾಗುತ್ತಿದೆ. ಬುಚ್ಚಿಬಾಬು ಇದಕ್ಕೂ ಮುನ್ನ 'ಉಪ್ಪೆನ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು.
2 ವರ್ಷಗಳ ಹಿಂದೆ ಕನ್ನಡ ಸಿನಿರಸಿಕರು ನಿರ್ದೇಶಕ ಬುಚ್ಚಿಬಾಬು ಮೇಲೆ ಕೊಂಚ ಬೇಸರಗೊಂಡಿದ್ದರು. ಅದಕ್ಕೆ ಕಾರಣ ಆತ ಕೊಟ್ಟಿದ್ದ ಒಂದು ಹೇಳಿಕೆ. ತಮ್ಮ ಗುರುಗಳಾದ ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾವನ್ನು ಕೊಂಡಾಡುವ ಭರದಲ್ಲಿ ಕನ್ನಡದ 'ಕೆಜಿಎಫ್' ಚಿತ್ರದ ಬಗ್ಗೆ ಒಂದು ಮಾತು ಹೇಳಿದ್ದರು. ಒಂದು 'ಪುಷ್ಪ' ಹತ್ತು 'ಕೆಜಿಎಫ್' ಸಿನಿಮಾಗೆ ಸಮ ಎಂದಿದ್ದರು. ಆ ಬಳಿಕ ಎರಡೂ ಸಿನಿಮಾಗಳನ್ನು ಹೋಲಿಸಿ ನೋಡುವ ಪ್ರಯತ್ನ ಸಾಕಷ್ಟು ಜನ ಮಾಡಿದರು.
'ಪುಷ್ಪ' ಹಾಗೂ 'ಕೆಜಿಎಫ್' ಚಿತ್ರದ ಕಥೆಗಳು ಒಂದೇ ತರ ಕಾಣುಸುತ್ತದೆ. ಪೋಸ್ಟರ್ಗಳನ್ನು ಕೂಡ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಮಟ್ ಮಾಡುತ್ತಿದ್ದಾರೆ. ಇದೆಲ್ಲವನ್ನು ಪಕ್ಕಕ್ಕಿಟ್ಟರೆ 'ಪುಷ್ಪ' ಚಿತ್ರ ಯಾವುದೇ ವಿಧದಲ್ಲೂ 'ಕೆಜಿಎಫ್'ಗೆ ಸಮವಾಗಲ್ಲ ಎಂದು ಯಶ್ ಫ್ಯಾನ್ಸ್ ತಿರುಗೇಟು ನೀಡಿದ್ದರು. ಇದೇ ಕಾರಣಕ್ಕೆ ಬುಚ್ಚಿಬಾಬು ಹೆಸರು ಸ್ಯಾಂಡಲ್ವುಡ್ನಲ್ಲಿ ಕೂಡ ಸದ್ದು ಮಾಡಿತ್ತು.
ಇನ್ನು ಬುಚ್ಚಿಬಾಬು 2ನೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕನ್ನಡ ನಟ ಶಿವರಾಜ್ಕುಮಾರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೆದಿದೆ. ಮೈಸೂರಿನಲ್ಲೇ RC16 ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ. ಹಾಗಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಸ್ಕ್ರಿಪ್ಟ್ ಪೂಜೆ ಮಾಡಿಸಿ ನಿರ್ದೇಶಕರು ಫೋಟೊ ಹಂಚಿಕೊಂಡಿದ್ದಾರೆ. ಸ್ಕ್ರಿಪ್ಟ್ ಸಮೇತ ದೇವಸ್ಥಾನದ ಮುಂಭಾಗದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
"ಇದು ಬಹಳ ವಿಶೇಷವಾದ ದಿನ... ಬಹು ನಿರೀಕ್ಷಿತ ಕ್ಷಣ. ಮೈಸೂರಿನ ಚಾಮುಂಡೇಶ್ವರಿ ತಾಯಿ ಆಶೀರ್ವಾದದೊಂದಿಗೆ ಆರಂಭವಾಯಿತು. ನಿಮ್ಮ ಆಶೀರ್ವಾದ ಅಗತ್ಯವಿದೆ" ಎಂದು ಬುಚ್ಚಿಬಾಬು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಜಗಪತಿ ಬಾಬು ಸಹ ನಟಿಸುವುದು ಖಚಿತವಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇದು ಹಳ್ಳಿ ಹಿನ್ನೆಲೆಯ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಎನ್ನುವ ಮಾತುಗಳು ಕೇಳಿಬರ್ತಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕೆ ಇರಲಿದೆ. ಬಹಳ ದೊಡ್ಡಮಟ್ಟದಲ್ಲಿ 5 ಭಾಷೆಗಳಲ್ಲಿ RC16 ಸಿನಿಮಾ ನಿರ್ಮಾಣ ಆಗಲಿದೆ. ಭಾರೀ ಬಜೆಟ್, ದೊಡ್ಡ ಸ್ಕೇಲ್ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದೇ ಮೊದಲ ಬಾರಿಗೆ ರಾಮ್ಚರಣ್ ಜೊತೆ ಜಾನ್ವಿ ಕಪೂರ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











