ನರ್ತನ್- ರಾಮ್ಚರಣ್ ಕ್ರೇಜಿ ಪ್ರಾಜೆಕ್ಟ್ಗೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯುವಿ ಕ್ರಿಯೇಷನ್ಸ್ ಬಂಡವಾಳ
ಬ್ಲಾಕ್ಬಸ್ಟರ್ 'ಮಫ್ತಿ' ನಂತರ 5 ವರ್ಷ ನರ್ತನ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಇತ್ತೀಚೆಗೆ 'ಮಫ್ತಿ' ಪ್ರೀಕ್ವೆಲ್ 'ಬೈರತಿ ರಣಗಲ್' ಘೋಷಿಸಿದ್ದರು. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಶುರು ಮಾಡುವ ಲೆಕ್ಕಾಚಾರದಲ್ಲಿರುವ ನರ್ತನ್ ಟಾಲಿವುಡ್ಗೂ ಎಂಟ್ರಿ ಕೊಡ್ತಿದ್ದಾರೆ. ರಾಮ್ಚರಣ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಚರ್ಚೆ ನಡೀತಿದೆ. ಇತ್ತೀಚೆಗೆ ಮೆಗಾ ಪವರ್ ಸ್ಟಾರ್ ಬರ್ತ್ಡೇ ಪಾರ್ಟಿಗೂ ಹಾಜರಾಗಿದ್ದರು.
ಬಹಳ ದಿನಗಳಿಂದ ನರ್ತನ್ ಟಾಲಿವುಡ್ ಎಂಟ್ರಿ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಇದೀಗ ಈ ವಿಚಾರವನ್ನು ಅವರು ಖಚಿತಪಡಿಸಿದ್ದಾರೆ. ಮೆಗಾಪವರ್ ಸ್ಟಾರ್ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿರೋದು ನಿಜ ಎಂದು ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ. 'RRR' ರಾಮರಾಜು ಆಗಿ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ರಾಮ್ಚರಣ್ 'ಮಫ್ತಿ' ಸಾರಥಿ ಜೊತೆ ಸಿನಿಮಾ ಮಾಡಲು ಒಲವು ತೋರಿಸಿರುವುದು ವಿಶೇಷ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣವಾಗಲಿದೆ.

'ರಂಗಸ್ಥಳಂ', 'RRR' ಸಿನಿಮಾಗಳಿಂದ ರಾಮ್ಚರಣ್ ಕ್ರೇಜ್ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನರ್ತನ್ ಹಾಗೂ ರಾಮ್ಚರಣ್ ಚಿತ್ರ ಕೂಡ 150 ಕೋಟಿ ರೂ. ಬಜೆಟ್ನಲ್ಲಿ ತಯಾರಾಗುವ ಸಾಧ್ಯತೆಯಿದೆ. ಕನ್ನಡದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ತೆಲುಗಿನ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಈ ಮೆಗಾ ಪ್ರಾಜೆಕ್ಟ್ಗಾಗಿ ಕೈ ಜೋಡಿಸಲಿವೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯುವಿ ಕ್ರಿಯೇಷನ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿವೆ.

ಕಳೆದ ವಾರ ರಾಮ್ಚರಣ್ ಬರ್ತ್ಡೇ ಪಾರ್ಟಿಗೆ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೋನಂಕಿ ಜೊತೆ ನರ್ತನ್ ಹೋಗಿದ್ದರು. 'ಮಿರ್ಚಿ', 'ಸಾಹೋ', 'ರಾಧೆಶ್ಯಾಮ್' ರೀತಿಯ ಅದ್ಧೂರಿ ಸಿನಿಮಾಗಳನ್ನು ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಬಾಹುಬಲಿ ಪ್ರಭಾಸ್ ಸ್ನೇಹಿತರ ಸಿನಿಮಾ ನಿರ್ಮಾಣ ಸಂಸ್ಥೆ ಇದು. ಪ್ರಭಾಸ್ ಕೂಡ ಸಂಸ್ಥೆಯ ಪಾಲುದಾರರು ಎನ್ನುವ ಮಾತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸದ್ಯ ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿಗೆ ಕೈ ಹಾಕಿದೆ. ಧ್ರುವ ಸರ್ಜಾ ನಟನೆಯ 'KD' ಚಿತ್ರವನ್ನು ಇದೇ ಸಂಸ್ಥೆ ನಿರ್ಮಿಸ್ತಿದೆ.
ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರವನ್ನು ಕೂಡ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತೆ ಎನ್ನಲಾಗ್ತಿದೆ. ನರ್ತನ್- ರಾಮ್ಚರಣ್ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ 2 ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೈಜೋಡಿಸುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಸದ್ಯ ರಾಮ್ಚರಣ್ 'ಗೇಮ್ ಚೇಂಜರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಸ್ಟಾರ್ ಡೈರೆಕ್ಟರ್ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಲಿದೆ. ನಂತರ ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಚರಣ್ ನಟಿಸಲಿದ್ದಾರೆ.
'ಗೇಮ್ ಚೇಂಜರ್' ರಾಮ್ಚರಣ್ ನಟನೆಯ 15ನೇ ಸಿನಿಮಾ. 16ನೇ ಚಿತ್ರಕ್ಕೆ ಬುಚ್ಚಿಬಾಬು ಸಾರಥ್ಯ ವಹಿಸಿಕೊಳ್ಳಲಿದ್ದು, 17ನೇ ಚಿತ್ರ ನರ್ತನ್ ಪಾಲಾಗುವ ಸಾಧ್ಯತೆಯಿದೆ. ಅತ್ತ ರಾಮ್ಚರಣ್, ಬುಚ್ಚಿಬಾಬು ಸಿನಿಮಾ ಮುಗಿಸುವಷ್ಟರಲ್ಲಿ ಇತ್ತ ನರ್ತನ್ 'ಬೈರತಿ ರಣಗಲ್' ಸಿನಿಮಾ ತೆರೆಗೆ ತರಲಿದ್ದಾರೆ. ನಂತರ ಇಬ್ಬರು ಒಂದು ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ಜೊತೆಯಾಗಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ.
'ಬೈರತಿ ರಣಗಲ್' ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ಶಿವಣ್ಣ ನಿರ್ಮಾಣ ಮಾಡಲಿದ್ದಾರೆ. ಬಹಳ ಹಿಂದೆಯೇ ಸಿನಿಮಾ ಶುರುವಾಗಬೇಕಿತ್ತು ಕಾರಣಾಂತರಗಳಿಂದ ತಡವಾಗಿತ್ತು. ಮುಂದಿನ ತಿಂಗಳು ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗ್ತಿದೆ. ಚಿತ್ರದಲ್ಲಿ ಬೈರತಿ ರಣಗಲ್ ಹಿನ್ನಲೆ ಏನು? ಅನ್ನುವುದರ ಕಥೆ ಹೇಳಲಾಗುತ್ತಿದೆ.


Click it and Unblock the Notifications











