'ಪೆದ್ದಿ' ಶೂಟಿಂಗ್ ವೇಳೆ ರಾಮ್ಚರಣ್ಗೆ ಪೆಟ್ಟು; ಸಿನಿಮಾ ರಿಲೀಸ್ ಪೋಸ್ಟ್ಪೋನ್ ಆಗುತ್ತಾ?
ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಕೊನೆ ಹಂತದಲ್ಲಿ ಸಿನಿಮಾ ಚಿತ್ರೀಕರಣದ ವೇಗ ಹೆಚ್ಚಿಸಲಾಗಿದೆ. ಇಂತಹ ಸಮಯದಲ್ಲೇ ಸೆಟ್ನಲ್ಲಿ ನಟ ರಾಮ್ಚರನ್ ಹಣೆಗೆ ಪೆಟ್ಟಾಗಿದೆ. ವೈದ್ಯರು 4 ಹೊಲಿಗೆ ಹಾಕಿ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಿದ್ದರೆ ಸಿನಿಮಾ ರಿಲೀಸ್ ತಡವಾಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಸ್ಟಾರ್ ನಟರಿಗೆ ಪೆಟ್ಟಾದರೆ ಕೊಂಚ ಚೇತರಿಸಿಕೊಳ್ಳಬೇಕು. ಕೂಡಲೇ ಬಂದು ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ರಾಮ್ಚರಣ್ ಹಣೆಗೆ ಕಣ್ಣಿನ ಪಕ್ಕದಲ್ಲಿ ಪೆಟ್ಟಾಗಿದ್ದು ಕೂಡಲೇ ಚಿಕಿತ್ಸೆ ನೀಡಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗ್ತಿದೆ. ಏಪ್ರಿಲ್ 30ರಂದು ಶತಾಯಗತಾಯ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

ಮಾರ್ಚ್ 27ಕ್ಕೆ ರಾಮ್ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಚಿತ್ರೀಕರಣ ತಡವಾಗಿ ಸಿನಿಮಾ ಬಿಡುಗಡೆ 30 ದಿನ ಮುಂದೂಡಲಾಗಿತ್ತು. ಹುಟ್ಟುಹಬ್ಬಕ್ಕೆ ಸಿನಿಮಾ ಬದಲು ಸಣ್ಣ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಇದೆಲ್ಲದರ ನಡುವೆ ಹುಟ್ಟುಹಬ್ಬದ ಹೊತ್ತಲ್ಲೇ ಚರಣ್ ಹಣೆಗೆ ಪೆಟ್ಟಾಗಿರುವುದು ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ.
ಹೈದರಾಬಾದ್ನಲ್ಲಿ ಸದ್ಯ 'ಪೆದ್ದಿ' ಸಿನಿಮಾ ಚಿತ್ರೀಕರಣ ನಡೀತಿದೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಸೆರೆ ಹಿಡಿಯುವ ವೇಳೆ ರಾಮ್ಚರಣ್ ಗಾಯಗೊಂಡಿದ್ದಾರೆ. ಆದರೆ ಇದು ಗಂಭೀರ ಪೆಟ್ಟು ಅಲ್ಲ, ಸಣ್ಣ ಪೆಟ್ಟು ಮಾತ್ರ ಎಂದು ವರದಿಯಾಗಿದೆ. ವೈದ್ಯರು ಹೊಲಿಗೆ ಹಾಕಿದ್ದು ಕೊಂಚ ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮೆಗಾ ಪವರ್ ಸ್ಟಾರ್ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಆಕ್ಷನ್ ಸನ್ನಿವೇಶದ ಜೊತೆಗೆ ಒಂದು ಸ್ಪೆಷಲ್ ಸಾಂಗ್ ಶೂಟಿಂಗ್ ಪ್ಲ್ಯಾನ್ ನಡೀತಿದೆ. ಮೃಣಾಲ್ ಠಾಕೂರ್ ಚಿತ್ರದ ಡ್ಯಾನ್ಸಿಂಗ್ ನಂಬರ್ಗೆ ಕುಣಿಯುತ್ತಾರೆ ಎನ್ನವ ಚರ್ಚೆ ನಡೀತಿದೆ. ಹಾಗಾಗಿ ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಹೊಸದೇನು ಅಲ್ಲ. ಮೊದಲೆಲ್ಲಾ ಒಂದೆರಡು ತಿಂಗಳು ಸಿನಿಮಾ ತಡವಾಗುತ್ತದೆ ಎನ್ನುವದೇ ದೊಡ್ಡ ಸುದ್ದಿ ಆಗ್ತಿತ್ತು. ಅಭಿಮಾನಿಗಳು ಬೇಸರಗೊಳ್ಳುತ್ತಿದ್ದರು. ಆದರೆ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಬಳಿಕ ಒಂದು ಚಿತ್ರಕ್ಕೆ ಎರಡ್ಮೂರು ವರ್ಷ ಕಾಯುವುದು ಪ್ರೇಕ್ಷಕರಿಗೆ ಅಭ್ಯಾಸವಾಗಿಬಿಟ್ಟಿದೆ. ರಾಮ್ಚರಣ್ ಹುಟ್ಟುಹಬ್ಬದ ವಿಶೇಷವಾಗಿ ಬರುವ ಟೀಸರ್ನಲ್ಲಿ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಸ್ಪಷ್ಟನೆ ಸಿಗಲಿದೆ.
'ಉಪ್ಪೆನ' ಬಳಿಕ ಬುಚ್ಚಿಬಾಬು 'ಪೆದ್ದಿ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಚಿತ್ರದಲ್ಲಿ ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಕನ್ನಡ ನಟ ಶಿವರಾಜ್ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎ. ಆರ್ ರಹಮಾನ್ ಸಂಗೀತದಲ್ಲಿ ಚಿತ್ರದ ಹಾಡುಗಳು ಒಂದೊಂದಾಗಿ ಹಿಟ್ ಆಗುತ್ತಿದೆ.
ಚಿತ್ರದಲ್ಲಿ 80-90ರ ದಶಕದ ಕಥೆಯನ್ನು ಹೇಳಲಾಗ್ತಿದೆ. ಅಂದಹಾಗೆ ರಾಮ್ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಗಡ್ ಅವತಾರದಲ್ಲಿ ಪ್ರೇಕ್ಷಕರ ಮನಗೆಲ್ಲಲು ಬರ್ತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟ ಚರನ್ ಈ ಬಾರಿ ಗೆಲುವಿನ ನಗೆ ಬೀರಲು ಅಣಿಯಾಗುತ್ತಿದ್ದಾರೆ. ತನು ಮನ ಅರ್ಪಿಸಿ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ. ವೃದ್ಧಿ ಸಿನಿಮಾಸ್ ಹಾಗೂ IVY ಎಂಟರ್ಟನ್ಮೆಂಟ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.


Click it and Unblock the Notifications











