ಟ್ರೈಲರ್ನಲ್ಲೇ 'ಪೆದ್ದಿ' ಕಥೆ ಲೀಕ್ ಆಗಿಬಿಡ್ತಲ್ಲ ಗುರೂ; 'ಪೆದ್ದಿ'ರಾಜು ಒಂದು ಕಾಲು ಕಟ್
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಆಕ್ಷನ್ ಪ್ಯಾಕ್ಡ್ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೆಗಾ ಪವರ್ ಸ್ಟಾರ್ ಅಭಿಮಾನಿಗಳು ವಾಹ್ ಎಂದು ಹುಬ್ಬೇರಿಸಿದ್ದಾರೆ. ಉಳಿದವರಿಗೆ ಓಕೆ ಓಕೆ ಎನಿಸುತ್ತಿದೆ. ಇನ್ನು ಈಗಾಗಲೇ ಟ್ರೈಲರ್ ನೋಡಿ 'ಪೆದ್ದಿ'ರಾಜು ಕಥೆ ಏನು ಎಂದು ಕೆಲವರು ಊಹಿಸಿಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಬುಚ್ಚಿಬಾಬು ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಇದು. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ರಗಡ್ ಅವತಾರದಲ್ಲಿ ರಾಮ್ಚರಣ್ ಅಬ್ಬರಿಸಿದ್ದಾರೆ. 80ರ ದಶಕದ ಕಥೆ ಚಿತ್ರದಲ್ಲಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು ಶಿವರಾಜ್ಕುಮಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಳ್ಳಿ ಕ್ರಿಕೆಟರ್, ಕುಸ್ತಿ ಪೈಲ್ವಾನ್ 'ಪೆದ್ದಿ'ರಾಜು ಜೀವನದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ.

ಹಳ್ಳಿಯ ಹೈದ ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟದ ಕ್ರೀಡಾಕೂಟಗಳಲ್ಲಿ ಗೆದ್ದು ತನ್ನ ಊರಿಗೆ ನೆರವಾಗುವ ಕಥೆ ಚಿತ್ರದಲ್ಲಿದೆ. ನಡುವೆ ನಾಯಕಿ ಜೊತೆ ಲವ್, ವಿಲನ್ಗಳ ಜೊತೆ ಗುದ್ದಾಟ ಎಲ್ಲವೂ ಇದೆ. ಚಿತ್ರದ ಕೊನೆ ಮುಕ್ಕಾಲು ಗಂಟೆ ಬಹಳ ಭಾವನಾತ್ಮಕವಾಗಿ ಇರುತ್ತದೆ ಎಂದು ನಿರ್ದೇಶಕ ಬುಚ್ಚಿಬಾಬು ಹೇಳ್ತಾ ಬರ್ತಿದ್ದಾರೆ. ಊರಿನ ಅದ್ಭುತ ಆಟಗಾರನ ಜೀವನಕ್ಕೆ ದೊಡ್ಡ ತಿರುವು ಸಿಗುತ್ತದೆ. ಅಲ್ಲಿಂದ ಕಥೆ ಬೇರೆಯದ್ದೇ ಬೇರೆ ದಿಕ್ಕಿಗೆ ಹೊರಳುತ್ತದೆ ಎಂದು ಹೇಳ್ತಿದ್ದಾರೆ. ಟ್ರೈಲರ್ ನೋಡಿ ಆ ಟ್ವಿಸ್ಟ್ ಏನು ಎನ್ನುವುದನ್ನು ಕೆಲವರು ಊಹಿಸಿಬಿಟ್ಟಿದ್ದಾರೆ.
'ಉಪ್ಪೇನ' ಸಿನಿಮಾ ಮೂಲಕ ಬುಚ್ಚಿಬಾಬು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಸಿನಿಮಾ ಹಿಟ್ ಆಗಿತ್ತು. ಪ್ರೀತಿ ಹಾಗೂ ಮರ್ಯಾದೆ ಹತ್ಯೆಯ ಸುತ್ತಾ ಸಿನಿಮಾ ಕಥೆ ಸಾಗಿತ್ತು. ಕಡಲ ತೀರದ ಹಳ್ಳಿಯ ಮೀನು ಹಿಡಿಯುವ ಕಸುಬು ನಂಬಿಕೊಂಡ ಯುವಕ ಆಸಿ ಹಾಗೂ ಊರಿನ ಶ್ರೀಮಂತ ಹಾಗೂ ಪ್ರಭಾವಿ ಮುಖಂಡನ ಮಗಳು ಬೇಬಮ್ಮ ನಡುವಿನ ಪ್ರೇಮ ಕಥೆ ಅದು. ಪ್ರೇಮಿಗಳನ್ನು ದೂರ ಮಾಡಲು ಹುಡುಗಿ ಅಪ್ಪ, ನಾಯಕನ ಮರ್ಮಾಂಗ ಕತ್ತರಿಸುವ ಹೀನಕೃತ್ಯಕ್ಕೆ ಕೈ ಹಾಕುತ್ತಾನೆ. ಇದು ಕಥೆಯ ದಿಕ್ಕನ್ನೇ ಬದಲಿಸಿತ್ತು.

ಸದ್ಯ 'ಪೆದ್ದಿ' ಚಿತ್ರದಲ್ಲಿ ಕೂಡ ಅಂಥದ್ದೇ ಟ್ವಿಸ್ಟ್ ಇರುವಂತೆ ಕಾಣುತ್ತಿದೆ. ಟ್ರೈಲರ್ ಸರಿಯಾಗಿ ಗಮನಿಸಿದರೆ ಅದು ಗೊತ್ತಾಗುತ್ತದೆ. ಆಟದಲ್ಲಿ ಬಹಳ ಮುಂದಿರುವ 'ಪೆದ್ದಿ'ರಾಜು ದುಷ್ಟರನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕುತ್ತಾನೆ. ಆತನ ಓಟಕ್ಕೆ ಬ್ರೇಕ್ ಹಾಕಲು ಒಂದು ಕಾಲು ಕತ್ತರಿಸಿಬಿಡುತ್ತಾರೆ, ಅದೇ ಚಿತ್ರದ ತಿರುವು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಕೊನೆ ಫ್ರೇಮ್ನಲ್ಲಿ ಒಲಂಪಿಕ್ಸ್ ಕೀಡ್ರಾಕೂಟದಲ್ಲಿ 'ಪೆದ್ದಿ' ಭಾಗವಹಿಸುವ ಝಲಕ್ ನೋಡಬಹುದು. ಆಗ ಆತ ನಡೆಯುವ ರೀತಿ ಹಾಗೂ ಅದೇ ಸಮಯಕ್ಕೆ ಬರುವ ಸಣ್ಣ ಡೈಲಾಗ್(Peddi is back on his feet) ಇಂತಾದೊಂದು ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.
ಒಂದು ಕಾಲು ಕಳೆದುಕೊಳ್ಳುವ 'ಪೆದ್ದಿ'ರಾಜು ಕೊನೆಗೆ ಕೃತಕ ಕಾಲು (Prosthetic Leg) ಜೋಡಿಸಿಕೊಂಡು ಪ್ಯಾರಾ ಒಲಂಪಿಕ್ಸ್ನಲ್ಲಿ ಗೆಲ್ಲುತ್ತಾನೆ. ಆ ಮೂಲಕ ತನ್ನ ಊರಿಗೆ ಹೆಸರು ತಂದು ಕೊಡುತ್ತಾನೆ. ಊರಿನ ಜನರ ಬಹು ದೊಡ್ಡ ಬೇಡಿಕೆಯನ್ನು ಪೂರೈಸುತ್ತಾನೆ ಎಂದು ಹೇಳಲಾಗ್ತಿದೆ. ಸಿನಿಮಾ ಬಿಡುಗಡೆ ಆಗುವವರೆಗೂ ಈ ಸೀಕ್ರೆಟ್ ರಿವೀಲ್ ಆಗದೇ ಇದ್ದಿದ್ರೆ ಚೆನ್ನಾಗಿತ್ತು. ಗೊತ್ತಾದಮೇಲೆ ಸಿನಿಮಾ ನೋಡುವ ಮಜಾ ಹೋಗಿಬಿಡುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಟ್ರೈಲರ್ ಬಿಜಿಎಂ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದ್ಯಾಕೋ ಎ. ಆರ್ ರೆಹಮಾನ್ ಪದೇ ಪದೆ ನಿರಾಸೆ ಮೂಡಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಟ್ರೈಲರ್ ಎಲ್ಲಾ ಚೆನ್ನಾಗಿದ್ದರೂ ಬಿಜಿಎಂ ಕಿಕ್ ಕೊಡ್ತಿಲ್ಲ. ಅದಕ್ಕೆ ಏನೋ ಮಿಸ್ಸಿಂಗ್ ಎನಿಸುತ್ತದೆ ಎನ್ನುತ್ತಿದ್ದಾರೆ. ತಪ್ಪುಗಳನ್ನು ಸರಿಪಡಿಸಿಕೊಂಡು ಕೊನೆ ಪಕ್ಷ ಸಿನಿಮಾದಲ್ಲಿ ಒಳ್ಳೆ ಮ್ಯೂಸಿಕ್ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಕಿಶೋರ್ ಪತ್ತಿಕೊಂಡ 'ಪೆದ್ದಿ' ಚಿತ್ರದ ಕರ್ನಾಟಕ ರೈಟ್ಸ್ ಕೊಂಡುಕೊಂಡಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications