ಹುಟ್ಟುವ ಮೊದ್ಲೆ ಮಗಧೀರನ ಮಗುವಿನ ರಕ್ಷಣೆಗೆ ಮುಂದಾದ ಉಪಾಸನಾ: ಯಾಕೆ, ಹೇಗೆ?
ಚಿರಂಜೀವಿ ಫ್ಯಾಮಿಲಿ ಮನೆಗೆ ಹೊಸ ಅತಿಥಿಯ ಸ್ವಾಗತಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ರಾಮ್ಚರಣ್- ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ನಲ್ಲಿ ಈ ವಿಚಾರವನ್ನು ಮೆಗಾಸ್ಟಾರ್ ಚಿರಂಜೀವಿ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ದುಬೈನಲ್ಲಿ ಸೀಮಂತ ಕಾರ್ಯಕ್ರಮ ಕೂಡ ನಡೆದಿತ್ತು. ನಂತರ ಮನೆಯಲ್ಲಿ ಮತ್ತೊಮ್ಮೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಪಾಸನಾ ಸೀಮಂತ ನಡೆದಿತ್ತು.
2012ರಲ್ಲಿ ರಾಮ್ಚರಣ್ ಹಾಗೂ ಉಪಾಸನಾ ಪ್ರೀತಿಸಿ ಮದುವೆ ಆಗಿದ್ದರು. ಪೋಷಕರ ಒಪ್ಪಿಗೆ ಪಡೆದು ಹೊಸ ಬಾಳಿಗೆ ಕಾಲಿಟ್ಟಿದ್ದರು. 10 ವರ್ಷಗಳ ನಂತರ ಜೋಡಿ ಗುಡ್ ನ್ಯೂಸ್ ಕೊಟ್ಟಿದ್ದರು. ಈ ನಡುವೆ ಸಾಕಷ್ಟು ಬಾರಿ ಮಗುವಿನ ಬಗ್ಗೆ ಪ್ರಶ್ನೆ ಎದುರಾಗಿದ್ದು ಸುಳ್ಳಲ್ಲ. ಆದರೆ ಡಿಸೆಂಬರ್ನಲ್ಲಿ ಚಿರು ಸೊಸೆ ಉಪಾಸನಾ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿದ್ದರು. ಇದನ್ನು ಕೇಳಿ ಮೆಗಾ ವಾರಸ್ದಾರ ಬರ್ತಿದ್ದಾನೆ ಅಂತ ಅಭಿಮಾನಿಗಳು ಖುಷಿಯಾಗಿದ್ದರು.

ಹೆರಿಗೆ ಸಮಯ ಹತ್ತಿರವಾಗುತ್ತಿದ್ದಂತೆ ಉಪಾಸನಾ ಒಂದು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಸ್ವತಃ ವೈದ್ಯಕೀಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಉಪಾಸನಾ ತನ್ನ ಮಗುವಿನ ಹೊಕ್ಕುಳ ಬಳ್ಳಿ ರಕ್ತವನ್ನು ಶೇಖರಿಸಿ ಇಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಹೊಕ್ಕುಳ ಬಳ್ಳಿ ರಕ್ತ ಶೇಖರಣೆ ಯಾಕೆ? ಉಪಾಸನಾ ಈ ನಿರ್ಧಾರ ಕೈಗೊಳ್ಳಲು ಕಾರಣ ಏನು? ಬನ್ನಿ ನೋಡೋಣ.
ಆಕರ ಕೋಶಗಳ ಅತ್ಯಮೂಲ್ಯ ಮೂಲ
ಸಾಮಾನ್ಯವಾಗಿ ಹೆರಿಗೆಯ ಸಮಯದಲ್ಲಿ ತಾಯಿಯ ಹೊಕ್ಕುಳ ಬಳ್ಳಿಯ ಸುಮಾರು 80-100 ಮಿ. ಲೀ. ರಕ್ತ ತ್ಯಾಜ್ಯವಾಗಿ ಹೊರಹೊಮ್ಮುತ್ತದೆ. ಆದರೆ ಈ ರಕ್ತ ಆಕರ ಕೋಶಗಳ ಅತ್ಯಮೂಲ್ಯ ಮೂಲ. ಹಾಗಾಗಿ ಇದನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸಿ, ಶೈತ್ಯೀಕರಿಸಿ ಅದನ್ನು ಜೋಪಾನವಾಗಿ ಶೇಖರಿಸಿದರೆ ಸಾಕಷ್ಟು ಪ್ರಯೋಜನಗಳಿವೆ. ಕ್ಯಾನ್ಸರ್ (ಲ್ಯುಕೇಮಿಯಾ, ಲಿಂಫೋಮಾ ಮುಂತಾದ) ಹಾಗೂ ಕೆಲವು ವಂಶವಾಹಿ ಕಾಯಿಲೆಗಳನ್ನು ಗುಣಪಡಿಸಲು ಇದು ಸಹಕಾರಿಯಾಗುತ್ತದೆ.

ಹೊಕ್ಕುಳ ಬಳ್ಳಿ ರಕ್ತದ ಉಪಯೋಗ
ನಿಜ ಹೇಳಬೇಕು ಅಂದರೆ ಹೊಕ್ಕುಳ ಬಳ್ಳಿಯ ರಕ್ತವು ಸುಲಭ ಹಾಗೂ ಬಹಳ ಅಗ್ಗವಾಗಿ ಸಿಗುವಂತಹ ಆದರೆ ಕಡಿಮೆ ದುಷ್ಪರಿಣಾಮವುಳ್ಳ ಮೂಲಕೋಶಗಳ ಆಗರವಾಗಿದೆ. ಇದರ ಉಪಯೋಗ ಏನು ಎನ್ನುವುದನ್ನು ನೋಡುವುದಾದರೆ ಕ್ಯಾನ್ಸರ್ ರೋಗಿಗಳಿಗೆ ಹಾಗೂ ವಂಶವಾಹಿಗಳ ಕೆಲ ಸಮಸ್ಯೆಗಳನ್ನು ಗುಣಪಡಿಸಲು ಈ ರೀತಿ ಶೇಖರಿಸಿಟ್ಟ ಹೊಕ್ಕುಳ ಬಳ್ಳಿಯ ರಕ್ತದ ಮೂಲಕೋಶಗಳನ್ನು ಬಳಸಬಹುದು. ದಾನಿ ಹಾಗೂ ಸ್ವೀಕರಿಸುವ ವ್ಯಕ್ತಿಗಳ ಎಚ್ಎಲ್ಎ ಮಾದರಿಗಳು ಪರಿಪೂರ್ಣವಾಗಿ ಹೊಂದಾಣಿಕೆಯಾಗದಿದ್ದರೂ ಇದನ್ನು ಬಳಸಬಹುದಾಗಿದೆ.
ಉಪಾಸನಾ ಕೊನಿದೇಲ ಹೇಳಿದ್ದೇನು?
ಈ ರೀತಿ ಹೊಕ್ಕುಳ ಬಳ್ಳಿಯ ರಕ್ತದ ಸಂಗ್ರಹ, ಪರಿಷ್ಕರಣೆ ಹಾಗೂ ಶೇಖರಣೆಗೆ ಭಾರೀ ವೆಚ್ಚ ತಗುಲುತ್ತದೆ. ಹಾಗಾಗಿ ಇದನ್ನು ಇದಕ್ಕೆ ಎಲ್ಲರೂ ಸಿದ್ಧರಿರುವುದಿಲ್ಲ. ಇತ್ತೀಚೆಗೆ ಸಿನಿಮಾ ತಾರೆಯರು ಈ ರೀತಿ ಹೊಕ್ಕುಳ ಬಳ್ಳಿ ರಕ್ತ ಶೇಖರಣೆಗೆ ಮುಂದಾಗಿದ್ದಾರೆ. ಇದೇ ರೀತಿ ಈಗ ಉಪಾಸನಾ ಕೂಡ ತನಗೆ ಹುಟ್ಟುವ ಮಗುವಿನ ಹೊಕ್ಕುಳ ಬಳ್ಳಿ ರಕ್ತ ಶೇಖರಣೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಭವಿಷ್ಯದಲ್ಲಿ ತಮ್ಮ ಮಗುವಿಗೆ ಏನಾದರೂ ಸಮಸ್ಯೆ ಎದುರಾದರೆ ಚಿಕಿತ್ಸೆಗೆ ಹೊಕ್ಕುಳ ಬಳ್ಳಿ ರಕ್ತ ಶೇಖರಿಸಿ ಇಡುತ್ತಿರುವುದಾಗಿ ಉಪಾಸನಾ ಹೇಳಿದ್ದಾರೆ.
ಭಾರೀ ಸಂಶೋಧನೆ ನಡೀತಿದೆ
ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಹೊಕ್ಕುಳ ಬಳ್ಳಿ ರಕ್ತ ಶೇಖರಣೆ ಮಾಡುವಂತೆ ಪೋಷಕರಲ್ಲಿ ಕೇಳುತ್ತಾರೆ. ಆದರೆ ಇದಕ್ಕೆ ಭಾರೀ ವೆಚ್ಚ ತಗುಲುವುದರಿಂದ ಕೆಲವರು ಕಡಿಮೆ ಅವಧಿಗೆ ಶೇಖರಣೆ ಒಪ್ಪುತ್ತಾರೆ. ಇನ್ನು ಹೊಕ್ಕುಳ ಬಳ್ಳಿ ರಕ್ತದ ಪ್ರಯೋಜನನಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











