ಅವತ್ತು ಸೌಂದರ್ಯ ಮುಖದ ಮೇಲೆ ಕಾಲಿಟ್ಟೆ.. ಆಕೆ ನನ್ನ ಮುಂದೆ ಬೆಳೆದವಳು; ರಮ್ಯಾಕೃಷ್ಣ ಭಾವುಕ
ಬಹುಭಾಷಾ ನಟಿ ಸೌಂದರ್ಯ ಅಗಲಿ 20 ವರ್ಷ ಕಳೆದಿದೆ. ಆದರೆ ಆಕೆಯನ್ನು ಸಿನಿರಸಿಕರು, ಆಪ್ತರು ಇಂದಿಗೂ ಮರೆಯೋಕೆ ಸಾಧ್ಯವಿಲ್ಲ. ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾಗಿದ್ದ ಆಕೆ ನಟನೆಯಲ್ಲಿ ಕೂಡ ಮೋಡಿ ಮಾಡಿದವರು. ಸೌಂದರ್ಯ ಆಪ್ತರು ಇವತ್ತಿಗೂ ನೆನಪಿಸಿಕೊಳ್ಳುತ್ತಲೇ ಇದ್ದಾರೆ.
ತಮಿಳು ನಟ ರಮ್ಯಾಕೃಷ್ಣ ಕೂಡ ಸೌಂದರ್ಯ ಜೊತೆ ತೆರೆ ಹಂಚಿಕೊಂಡಿದ್ದಾರೆ. 'ಪಡೆಯಪ್ಪ' ಹಾಗೂ 'ಅಮ್ಮೋರು' ಸಿನಿಮಾಗಳಲ್ಲಿ ಆಕೆ ಜೊತೆ ನಟಿಸಿದ್ದರು. 'ಜಯಮ್ಮು ನಿಶ್ಚಯಮುರಾ' ತೆಲುಗು ಕಿರುತೆರೆ ಸಂದರ್ಶನ ಕಾರ್ಯಕ್ರಮದಲ್ಲಿ ರಮ್ಯಾಕೃಷ್ಣ ಭಾಗಿ ಆಗಿದ್ದರು. ಈ ವೇಳೆ ತಮ್ಮ ಸಿನಿಜರ್ನಿ, ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿ ಮಾತನಾಡಿದ್ದಾರೆ. ಸೌಂದರ್ಯ ಜೊತೆಗಿನ ಒಡನಾಟದ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ.

ಜಗಪತಿ ಬಾಬು ಈ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ. ಸೌಂದರ್ಯ ಜೊತೆ ಅವರು ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಹಾಗಾಗಿ ಇಬ್ಬರೂ ದಿವಂಗತ ನಟಿಯನ್ನು ನೆನಪಿಸಿಕೊಂಡಿದ್ದಾರೆ. "ನನ್ನ ಮುಂದೆ ಬೆಳೆದು, ಉತ್ತುಂಗದ ಹಂತಕ್ಕೆ ಏರುತ್ತಿದ್ದ ಸಮಯದಲ್ಲೇ ಸೌಂದರ್ಯ ದೂರಾದಳು" ಎಂದು ರಮ್ಯಾಕೃಷ್ಣ ಮೆಲುಕು ಹಾಕಿದ್ದಾರೆ.
"1995ರಲ್ಲಿ 'ಅಮ್ಮೋರು' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ನಾನು ಸೌಂದರ್ಯಳನ್ನು ನೋಡಿದ್ದೆ. ಆಗ ಆಕೆಯ ಬಗ್ಗೆ ತಿಳಿದುಕೊಂಡಿದ್ದೆ. ಚಿಕ್ಕಂದಿನಿಂ ತನ್ನನ್ನು ತಾನು ತಿದ್ದಿ ತೀಡಿ ಬೆಳೆದವಳು. ಆಕೆಗೆ ಎಷ್ಟೆ ನೇಮು ಫೇಮು ಬಂದರು ಯಾರನ್ನೂ ಕೀಳಾಗಿ ಮಾತನಾಡುತ್ತಿರಲಿಲ್ಲ. ಅದ್ಭುತವಾದ ವ್ಯಕ್ತಿಯಾಗಿ ಮಾತ್ರವಲ್ಲ, ಆತ್ಮೀಯ ಸ್ನೇಹಿತೆಯಾಗಿದ್ದಳು. ಆಕೆಯ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ" ಎಂದು ರಮ್ಯಾಕೃಷ್ಣ ನೆನಪಿಸಿಕೊಂಡಿದ್ದಾರೆ.

ರಜನಿಕಾಂತ್ ಜೊತೆ 'ಪಡೆಯಪ್ಪ' ಚಿತ್ರದಲ್ಲಿ ಸೌಂದರ್ಯ ಹಾಗೂ ರಮ್ಯಾಕೃಷ್ಣ ಇಬ್ಬರೂ ನಟಿಸಿದ್ದರು. ಒಬ್ಬರಿಗೊಬ್ಬರು ತದ್ವಿರುದ್ಧ ಪಾತ್ರಗಳು. ಅಹಂಕಾರ ಮೈವೆತ್ತ ಶ್ರೀಮಂತರ ಮನೆ ಹುಡುಗಿ ನೀಲಾಂಬರಿಯಾಗಿ ರಮ್ಯಾಕೃಷ್ಣ ನಟಿಸಿದ್ದರು. ಆಕೆಯ ಮನೆ ಕೆಲಸದಾಕೆ ವಸುಂಧರ ಪಾತ್ರದಲ್ಲಿ ಸೌಂದರ್ಯ ಬಣ್ಣ ಹಚ್ಚಿದ್ದರು. ತಾನು ಪ್ರೀತಿಸಿದ ಪಡೆಯಪ್ಪ ನನ್ನನ್ನು ಬಿಟ್ಟು ನನ್ನ ಮನೆಕೆಲಸದಾಕೆ ವಸುಂಧರಳನ್ನು ಪ್ರೀತಿಸುತ್ತಿದ್ದಾನೆ ಎಂದು ಗೊತ್ತಾದಾಗ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ನೀಲಾಂಬರಿ ಮುಂದಾಗುತ್ತಾಳೆ. ಒಂದು ಸನ್ನಿವೇಶದಲ್ಲಿ ಬಹಳ ದರ್ಪದಿಂದ ಸೌಂದರ್ಯ ಮುಖದ ಮೇಲೆ ಕಾಲಿಟ್ಟು ರಮ್ಯಾಕೃಷ್ಣ ಮಾತನಾಡುತ್ತಾರೆ.
ಆ ದೃಶ್ಯವನ್ನು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದ್ದು ರಮ್ಯಾಕೃಷ್ಣ ನೋಡುತ್ತಾ ಭಾವುಕರಾಗಿದ್ದಾರೆ. ಆ ಸನ್ನಿವೇಶದಲ್ಲಿ ನಟಿಸಲು ಸೌಂದರ್ಯ ಒಪ್ಪಿದ್ದು ಆಕೆಯ ದೊಡ್ಡಗುಣ ಎಂದು ಹೇಳಿದ್ದಾರೆ. "ಚಿತ್ರದಲ್ಲಿ ಸೌಂದರ್ಯ ಮೇಲೆ ಸೇಡು ತೀರಿಸಿಕೊಳ್ಳುವ ಪಾತ್ರ ನನ್ನದು. ಹಾಗಾಗಿ ಅಂತಹ ದುರಂಹಕಾರದಿಂದ ವರ್ತಿಸುವ ಸನ್ನಿವೇಶದಲ್ಲಿ ನಟಿಸಬೇಕಾಯಿತು. ಆರಂಭದಲ್ಲಿ ನಟಿಸೋಕೆ ಸಾಧ್ಯವಾಗಲಿಲ್ಲ. ಆದರೆ ಆ ಸನ್ನಿವೇಶ ಕಥೆಗೆ ಬಹಳ ಮುಖ್ಯವಾಗಿತ್ತು. ಇಷ್ಟವಿಲ್ಲದಿದ್ದರೂ ಮಾಡಬೇಕಾಯಿತು. ಆಗ ಎಲ್ಲಾ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿದೆ. ಬಳಿಕ ಸೌಂದರ್ಯ ಮುಖದ ಮೇಲೆ ಕಾಲಿಟ್ಟು ನಟಿಸಿದೆ. ಕೆಲ ದಿನಗಳ ಕಾಲ ಅದೇ ಗುಂಗಿನಲ್ಲಿದ್ದೆ" ಎಂದು ನಟಿ ರಮ್ಯಾಕೃಷ್ಣ ಹೇಳಿರುವುದು ವೈರಲ್ ಆಗ್ತಿದೆ.
ಕೆ. ಎಸ್ ರವಿಕುಮಾರ್ ನಿರ್ದೇಶನದಲ್ಲಿ 'ಪಡೆಯಪ್ಪ' ಸಿನಿಮಾ ಮೂಡಿ ಬಂದಿತ್ತು. ಎ. ಆರ್ ರಹಮಾನ್ ಸಂಗೀತದಲ್ಲಿ ಚಿತ್ರದ ಆಲ್ಬಮ್ ಹಿಟ್ ಆಗಿತ್ತು. ಸೌಂದರ್ಯ ಹಾಗೂ ರಮ್ಯಾಕೃಷ್ಣ ಇಬ್ಬರಿಗೂ ಅದು ಮರೆಯಲಾಗದ ಸಿನಿಮಾ. ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದರು. ನೀಲಾಂಬರಿ ಪಾತ್ರಕ್ಕಾಗಿ ರಮ್ಯಾಕೃಷ್ಣ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದರು. ಅವತ್ತಿನ ಕಾಲಕ್ಕೆ ತಮಿಳು ಚಿತ್ರರಂಗದ ಎಲ್ಲಾ ಸಿನಿಮಾಗಳ ದಾಖಲೆ ಮುರಿದು 'ಪಡೆಯಪ್ಪ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಮೇಲುಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು.


Click it and Unblock the Notifications











