ಕೊರೊನಾ ಕಾಲದಲ್ಲಿ 400 ಬುಡಕಟ್ಟು ಕುಟುಂಬಕ್ಕೆ ನೆರವಾದ 'ಬಲ್ಲಾಳದೇವ'
'ಬಾಹುಬಲಿ' ಸಿನಿಮಾದಲ್ಲಿ ವಿಲನ್ ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿ ನಿಜಜೀವನದಲ್ಲಿ 'ಹೀರೋ' ಎನಿಸಿಕೊಳ್ಳುವಂಥಹಾ ಕಾರ್ಯ ಮಾಡಿದ್ದಾರೆ.
ತೆಲಂಗಾಣದ ನಿರ್ಮಲ್ ಜಿಲ್ಲೆಯ ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ರಾಣಾ ದಗ್ಗುಬಾಟಿ ಉಚಿತವಾಗಿ ದಿನಸಿ ಮತ್ತು ಔಷಧಗಳನ್ನು ವಿತರಿಸಿದ್ದಾರೆ.
ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ನಿರ್ಮಲ್ ಜಿಲ್ಲೆಯ ಪಾಲ ರೇಗಡಿ, ಅಡ್ಡಾಲ ತಿಮ್ಮಾಪುರ, ಕಾಹಿರ ತಾಂಡಾ, ಗಗನ್ಪೇಟ್ ಇನ್ನೂ ಹಲವಾರು ಹಳ್ಳಿಗಳಿಗೆ ರಾಣಾ ದಗ್ಗುಬಾಟಿ ತಂಡವು ಉಚಿತ ದಿನಸಿ, ಔಷಧಗಳನ್ನು ವಿತರಿಸಿದೆ.

ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೆ ಸಿನಿಮಾವೊಂದರಲ್ಲಿ ಬುಡಕಟ್ಟು ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. 'ಹಾಥಿ ಮೇರೆ ಸಾಥಿ' (ಅರಣ್ಯ) ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಆನೆಗಳಿಗಾಗಿ ಹಾಗೂ ಬುಡಕಟ್ಟು ಜನರಿಗಾಗಿ ಹೋರಾಡುವ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿಯೇ ರಾಣಾ ಬುಡಕಟ್ಟು ಜನರಿಗಾಗಿ ಈ ಸೇವಾಕಾರ್ಯ ಮಾಡಿದ್ದಾರೆ.
ತೆಲುಗಿನ ಹಲವು ನಟರು ಕೋವಿಡ್ ಕಾಲದಲ್ಲಿ ಜನರ ನೆರವಿಗೆ ನಿಂತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ತೆಲಂಗಾಣ, ಆಂಧ್ರದ ಹಲವು ಜಿಲ್ಲೆಗಳಿಗೆ ಉಚಿತ ಆಮ್ಲಜನಕ ವಿತರಣೆ ಮಾಡಿದರು. ಪ್ಲಾಸ್ಮಾ ಬ್ಯಾಂಕ್ ತೆರೆದರು. ಉಚಿತ ಲಸಿಕೆ, ದಿನಸಿ ವಿತರಣೆ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೆ ಹಣ ದೇಣಿಗೆ ಸಹ ನೀಡಿದ್ದಾರೆ.
ನಟ ಮಹೇಶ್ ಬಾಬು ತಾವು ದತ್ತು ಪಡೆದಿರುವ ಹಳ್ಳಿಗಳ ಜನರಿಗೆ ಇತ್ತೀಚೆಗಷ್ಟೆ ಉಚಿತವಾಗಿ ಕೊರೊನಾ ಲಸಿಕೆ ಹಾಕಿಸಿದರು.
Recommended Video
ಸಿನಿಮಾದ ವಿಷಯಕ್ಕೆ ಬರುವುದಾದರೆ ರಾಣಾ ದಗ್ಗುಬಾಟಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಪ್ರಸ್ತುತ ಪವನ್ ಕಲ್ಯಾಣ್ ಜೊತೆಗೆ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ 'ಭುಜ್' ಸಿನಿಮಾದಲ್ಲಿಯೂ ರಾಣಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಮಧು ನಿರ್ದೇಶನದ 'ಮಾರ್ತಾಂಡ ವರ್ಮಾ' ಸಿನಿಮಾದಲ್ಲಿಯೂ ರಾಣಾ ನಟಿಸುತ್ತಿದ್ದಾರೆ.


Click it and Unblock the Notifications











