ಅವತ್ತು ರಮ್ಯಾಕೃಷ್ಣ ಅವ್ರನ್ನು ಮೇಲಿಂದ ತಳ್ಳಿಬಿಡ್ಬೇಕು ಅಂದುಕೊಂಡಿದ್ದೆ; ರಾಣ ಅಚ್ಚರಿ ಹೇಳಿಕೆ
ಮತ್ತೆ ಚಿತ್ರಮಂದಿರಗಳಲ್ಲಿ 'ಬಾಹುಬಲಿ' ದರ್ಬಾರ್ ಶುರುವಾಗಿದೆ. ದಶಕದ ಹಿಂದೆ ಎರಡು ಭಾಗಗಳಾಗಿ ತೆರೆಗೆ ತಂದಿದ್ದ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಇದೀಗ ರಾಜಮೌಳಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಪ್ರೀಮಿಯರ್ ಶೋಗಳಲ್ಲಿ ಪ್ರಭಾಸ್, ರಾಣಾ ಆರ್ಭಟ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.
ಅಂದಹಾಗೆ ಮೊದಲಿಗೆ 'ಬಾಹುಬಲಿ' ಚಿತ್ರದ ಪಾತ್ರಗಳಿಗೆ ಬೇರೆ ಕಲಾವಿದರನ್ನು ಜಕ್ಕಣ್ಣ ಊಹಿಸಿಕೊಂಡಿದ್ದರು. ಆದರೆ ಅಂತಿಮವಾಗಿ ಅವಕಾಶ ಬೇರೆಯವರ ಪಾಲಾಗಿತ್ತು. ಬಲ್ಲಾಳದೇವ ರೀತಿಯ ಅದ್ಭುತ ಪಾತ್ರದಲ್ಲಿ ರಾಣ ನಟಿಸುತ್ತಾರೆ ಎಂದು ಕೆಲವರು ಅನುಮಾನ ಪಟ್ಟಿದ್ದರು. ಮೊದಲ ಭಾಗದಲ್ಲಿ ಅವರ ನಟನೆ ನೋಡಿ ನಿರಾಸೆಗೊಂಡವರು ಇದ್ದಾರೆ. ಆದರೆ ಸೀಕ್ವೆಲ್ನಲ್ಲಿ ಅವರು ಕಂಬ್ಯಾಕ್ ಮಾಡಿದ್ದರು. ತಮ್ಮ ನಟನೆಯಿಂದ ಮೋಡಿ ಮಾಡಿದ್ದರು.

ಬಲ್ಲಾಳದೇವನಾಗಿ ನಟಿಸುತ್ತಾ ನಟಿಸುತ್ತಾ ರಾಣ ಆ ಪಾತ್ರದಲ್ಲೇ ಇಳಿದುಬಿಟ್ಟಿದ್ದರಂತೆ. ಈ ವಿಚಾರವನ್ನು ಸಂದರ್ಶನದಲ್ಲಿ ವಿವರಿಸಿದ್ದಾರೆ. ಕೆಲ ಸನ್ನಿವೇಶಗಳನ್ನು ಬಹಳ ವೈಯಕ್ತಿಕವಾಗಿ ಅನುಭವಿಸಿ ನಟಿಸಿದ್ದರಂತೆ. ಒಂದು ಸನ್ನಿವೇಶದಲ್ಲಿ ಶಿವಗಾಮಿಯಾಗಿ ನಟಿಸಿದ್ದ ರಮ್ಯಾಕೃಷ್ಣ ಅವರನ್ನು ಕಟ್ಟಡದ ಮೇಲಿಂದ ತಳ್ಳಿಬಿಡಬೇಕು ಎಂದು ಭಾವಿಸಿಬಿಟ್ಟಿದ್ದರಂತೆ. ಅಷ್ಟರಮಟ್ಟಿಗೆ ಪಾತ್ರದಲ್ಲಿ ಲೀನಾರಾಗಿದ್ದಾಗಿ ವಿವರಿಸಿದ್ದಾರೆ.
ಕೆಲವೊಮ್ಮೆ ನಟ, ನಟಿಯರು ಹೀಗೆ ಪಾತ್ರಗಳಲ್ಲಿ ಲೀನವಾಗಿಬಿಡುವುದು ಇದೆ. ಮಿನುಗುತಾರೆ ಕಲ್ಪನಾ ಇದೇ ರೀತಿ ತಮ್ಮ ಪಾತ್ರಗಳನ್ನು ಬಹಳ ಹಚ್ಚಿಕೊಳ್ಳುತ್ತಿದ್ದರು ಎಂದು ಕೇಳಿದ್ದೇವೆ. ಅದೇ ರೀತಿ ನಿಜ ಜೀವನದಲ್ಲಿ ವರ್ತಿಸುತ್ತಿದ್ದರು ಎಂದು ಕೆಲವರು ಹೇಳಿರುವುದು ಇದೆ. ಅದೇ ರೀತಿ ರಾಣ ಹೇಳಿರುವ ಮಾತುಗಳು ವೈರಲ್ ಆಗ್ತಿದೆ. ಮತ್ತೊಂದು ಸನ್ನಿವೇಶದಲ್ಲಿ ಕೂಡ ಇದೇ ರೀತಿ ಆಗಿತ್ತು ಎಂದು ರಾಣ ದಗ್ಗುಬಾಟಿ ವಿವರಿಸಿದ್ದಾರೆ.
'ಬಾಹುಬಲಿ: ದಿ ಎಪಿಕ್' ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ರಾಜಮೌಳಿ, ಪ್ರಭಾಸ್, ರಾಣ ಕೂತು ಮಾತನಾಡಿದ್ದಾರೆ. ಈ ವೇಳೆ 'ಬಾಹುಬಲಿ' ಸರಣಿ ಸಿನಿಮಾಗಳ ಮೇಕಿಂಗ್ ದಿನಗಳಿಗೆ ಜಾರಿದ್ದಾರೆ. ಚಿತ್ರದಲ್ಲಿ ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಬಲ್ಲಾಳದೇವನ ದೊಡ್ಡ ಪ್ರತಿಮೆ ನಿಲ್ಲಿಸುವ ಸನ್ನಿವೇಶ ಇದೆ. ಆದರೆ ಸುತ್ತಾ ಇದ್ದವರ ಮನಸ್ಸಿನಲ್ಲಿ ಬಾಹುಬಲಿ ತುಂಬಿಕೊಂಡು ತನ್ನ ಪ್ರತಿಮೆಗಿಂತ ಬಾಹುಬಲಿ ಪ್ರತಿಮೆ ದೊಡ್ಡದಾಗಿ ಕಂಡಂತೆ ಬಲ್ಲಾಳದೇವನಿಗೆ ಭಾಸವಾಗುತ್ತದೆ.
ಸಿನಿಮಾ ಚಿತ್ರೀಕರಣದ ವೇಳೆ ಬಲ್ಲಾಳದೇವನ ಪ್ರತಿಮಿ ನಿಲ್ಲಿಸುವ ಸನ್ನಿವೇಶ ಮಾತ್ರ ಚಿತ್ರೀಕರಿಸಲಾಗಿತ್ತು. ಬಳಿಕ ಗ್ರಾಫಿಕ್ಸ್ನಲ್ಲಿ ಎರಡೂ ಪ್ರತಿಮೆಗಳು ನಿಲ್ಲುವಂತೆ ತೋರಿಸಲಾಗಿತ್ತು. "ಚಿತ್ರಮಂದಿರದಲ್ಲಿ ನಾವಿಬ್ಬರು ಸಿನಿಮಾ ನೋಡುವಾಗ ನನಗೆ ಈ ದೃಶ್ಯ ಇಷ್ಟವಾಗಲಿಲ್ಲ ಎಂದು ರಾಣಾ ಹೇಳಿದ್ದ" ಎಂದು ಪ್ರಭಾಸ್ ನೆನಪಿಸಿಕೊಂಡು ನಕ್ಕಿದ್ದಾರೆ. ಬಳಿಕ ರಾಣಾ ಮಾತನಾಡಿ "ಶಿವಗಾಮಿ ಮಗುವನ್ನು ಎತ್ತಿ ಹಿಡಿದು ಮಹೇಂದ್ರ ಬಾಹುಬಲಿ ಎಂದು ಕೂಗುವ ಸನ್ನಿವೇಶ ಇದೆ ಅಲ್ವಾ? ಆ ಸನ್ನಿವೇಶಕ್ಕೂ ಮುಂಚೆ ಒಳಗೆ ಒಂದಷ್ಟು ಡ್ರಾಮಾ ನಡೆಯುತ್ತದೆ. ಕೊನೆಗೆ ಶಿವಗಾಮಿ(ರಮ್ಯಾಕೃಷ್ಣ) ಹೋಗಿ ಮಗುವನ್ನ ಎತ್ತಿ ಹಿಡಿದಿದ್ದು ನೋಡಿ ಹೋಗಿ ಕೆಳಗೆ ತಳ್ಳಿಬಿಡಬೇಕು ಎನಿಸಿತ್ತು" ಎಂದು ರಾಣ ಹೇಳಿದ್ದಾರೆ.
ಎಲ್ಲಾ ಕಥೆ ಮುಗೀತು ಎಂದುಕೊಂಡರೆ ಮತ್ತೆ ಈಕೆ ಮಗು ಎತ್ತಿಕೊಂಡಿದ್ದಾಳಲ್ಲ ಅನಿಸಿತು ಎಂದು ರಾಣಾ ವಿವರಿಸಿದ್ದಾರೆ. ಅದನ್ನು ಕೇಳಿ ಪ್ರಭಾಸ್ "ಆಫ್ಸ್ಕ್ರೀನ್ ಹಾಗೂ ಆನ್ಸ್ಕ್ರೀನ್ ಪಾತ್ರದೊಳಗೆ ಲೀನವಾಗಿದ್ದು ರಾಣ ಮಾತ್ರ ಅನ್ನಿಸುತ್ತೆ" ಎಂದು ಹೇಳಿದ್ದಾರೆ. ಸದ್ಯ ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ನು ಮಾಹಿಷ್ಮತಿ ಸಾಮ್ರಾಜ್ಯ ಬೇಕು ಎಂದು ಕೀರಿಟದ ಮೇಲೆ ಬಲ್ಲಾಳದೇವ ಕೈ ಇಟ್ಟು ರಕ್ತ ಸುರಿಯುವ ಸನ್ನಿವೇಶ ಇದೆ. ಅದರಲ್ಲಿ ನನಗೆ ದೇವಸೇನಾಗಿಂತ ಈ ಸಾಮ್ರಾಜ್ಯವೇ ಹೆಚ್ಚು ಎನ್ನುವಂತೆ ರಾಣ ಬಹಳ ಅನುಭವಿಸಿ ನಟಿಸಿರುವಂತೆ ಕಾಣುತ್ತದೆ" ಎಂದು ರಾಜಮೌಳಿ ಹೇಳಿದ್ದು. "ಹೌದು" ಎಂದು ರಾಣ ಕೂಡ ಸಹಮತ ಸೂಚಿಸಿದ್ದಾರೆ.


Click it and Unblock the Notifications











