ಬೆಟ್ಟಿಂಗ್ ಆಪ್ ಪ್ರಮೋಷನ್; 20ಕ್ಕೂ ಹೆಚ್ಚು ತಾರೆಯರ ಮೇಲೆ ಬಿತ್ತು ಕೇಸ್
ಬೆಟ್ಟಿಂಗ್ ಅಪ್ಲಿಕೇಶನ್ಗಳ ಪ್ರಚಾರ ಇತ್ತೀಚೆಗೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಆಂಧ್ರ, ತೆಲಂಗಾಣದಲ್ಲಿ ಸಾಕಷ್ಟು ಯೂಟ್ಯೂಬರ್ಗಳು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮೇಲೆ ದೂರ ದಾಖಲಾಗಿದೆ. ಇದೀಗ ತೆಲುಗಿನ 25 ಮಂದಿ ನಟ- ನಟಿಯರ ಮೇಲೆ ದೂರು ದಾಖಲಾಗಿದೆ. ಈಗಾಗಲೇ ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ಕರೆಸಲಾಗಿದೆ.
ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಸೈಬರಾಬಾದ್ನ ಮಿಯಾಪುರ್ ಪೊಲೀಸರು ಸುಮಾರು 25 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಟ್ಟಿಂಗ್ ಆಪ್ಗಳನ್ನು ಪ್ರಚಾರ ಮಾಡಿ ಯುವ ಜನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಿಯಾಪುರದ ಪ್ರಮೋದ್ ಶರ್ಮಾ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಂತಹ ಬೆಟ್ಟಿಂಗ್ ಪ್ರಮೋಷನ್ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ನಟಿಯರಾದ ಮಂಚು ಲಕ್ಷ್ಮಿ, ಪ್ರಣೀತಾ, ಶ್ರೀಮುಖಿ, ರಿತು ಚೌಧರಿ, ನಿರೂಪಕಿ ಶ್ಯಾಮಲಾ, ಅನನ್ಯಾ ನಾಗಲ್ಲ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್ ಆಪ್ಗಳ ಹಾವಳಿ ಹೆಚ್ಚಾಗಿದೆ. ಸಾಕಷ್ಟು ಜನ ಇದರಿಂದ ಹಣ ಕಳೆದುಕೊಂದು ಬೀದಿಗೆ ಬರುತ್ತಿದ್ದಾರೆ. ಇಂತಹ ಆಪ್ಗಳನ್ನು ಪ್ರಚಾರ ಮಾಡಲು ಸಿನಿಮಾ ತಾರೆಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಕನ್ನಡದ ಕೆಲ ತಾರೆಯರು, ಯೂಟ್ಯೂಬರ್ಗಳು ಕೂಡ ಬೆಟ್ಟಿಂಗ್ ಆಪ್ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರಕ್ಕಾಗಿ ಕಂಪನಿಗಳಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ. ಬೆಟ್ಟಿಂಗ್ ಆಪ್ಗಳನ್ನು ಪ್ರಚಾರ ಸಂಬಂಧ ಸೋಮವಾರ(ಮಾರ್ಚ್ 17) ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ನಿರೂಪಕಿ ವಿಷ್ಣುಪ್ರಿಯ, ಸುಪ್ರೀತಾ, ಇಮ್ರಾನ್ ಖಾನ್ ಸೇರಿದಂತೆ 11 ಮಂದಿ ಕಲಾವಿದರು ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದರು.
ಇಂದು(ಮಾರ್ಚ್ 20) ನಿರೂಪಕಿ ವಿಷ್ಣುಪ್ರಿಯ ಅವರನ್ನು ನೋಟಿಸ್ ನೀಡಿ ಪಂಜಾಗುಡ್ಡ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಇನ್ನು ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ತೇಜ, ನೀತು ಅಗರ್ವಾಲ್, ವಿಷ್ಣು ಪ್ರಿಯಾ, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ ಸೇರಿ ಸಾಕಷ್ಟು ತೆಲುಗು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧವೂ ದೂರ ದಾಖಲಾಗಿದೆ.
ಪ್ರಕರಣ ಸಂಬಂಧ ಜೂಜಾಟ, ಬೆಟ್ಟಿಂಗ್ ಮತ್ತು ಕ್ಯಾಸಿನೊ ಅಪ್ಲಿಕೇಶನ್ಗಳನ್ನು ಪ್ರಮೋಟ್ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ಸೆಕ್ಷನ್ 318(4), ಬಿಎನ್ಎಸ್ 3, 3ಎ, 4 ಮತ್ತು 66ಡಿ ಅಡಿಯಲ್ಲಿ ಎಲ್ಲರ ವಿರುದ್ಧ ಪ್ರಕರಣಗಳನ್ನು ದಾಖಲಾಗಿರುವುದಾಗಿ ವರದಿಯಾಗಿದೆ. ಈಗಾಗಲೇ ಕೆಲವರು ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆ ದಾಖಲಿಸಿ ಬಂದಿದ್ದಾರೆ. ಮುಂದೆ ರಾಣಾ, ಲಕ್ಷ್ಮಿ ಮಂಚು, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ರೀತಿಯ ಸ್ಟಾರ್ ನಟ, ನಟಿಯರು ಠಾಣೆ ಮೆಟ್ಟಿಲೇರುತ್ತಾರಾ ಕಾದು ನೋಡಬೇಕಿದೆ.
ವಿಚಾರಣೆ ವೇಳೆ ಪೊಲೀಸರು ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಯಾಕೆ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದ್ದು? ಎಷ್ಟು ಹಣ ಸಿಕ್ತು? ಹೇಗೆ ಬೆಟ್ಟಿಂಗ್ ಆಪ್ ಕಂಪನಿಗಳನ್ನು ಸಂಪರ್ಕಿಸುತ್ತಿದ್ದಿರಿ? ಯಾವ ರೀತಿಯ ಪ್ರಮೋಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಿರಿ? ಹೀಗೆ ಒಂದಷ್ಟು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಸದ್ಯ ಈ ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಮುಂದೆ ಇದು ಯಾವ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.


Click it and Unblock the Notifications











