ವಿಜಯ್ ದೇವರಕೊಂಡ ಜೊತೆ ಮದುವೆ ; ಕೊನೆಗೂ ಅಸಲಿ ಸತ್ಯ ಹೇಳಿದ ರಶ್ಮಿಕಾ ಮಂದಣ್ಣ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಇಂಥಾ ರಶ್ಮಿಕಾ ಮಂದಣ್ಣ ಆಂಧ್ರದ ರೌಡಿ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿದ್ದಾರೆ ಎನ್ನುವ ಮಾತು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಸಮಾರಂಭ ಸದ್ದಿಲ್ಲದೇ ನಡೆದಿದೆ ಎನ್ನುವ ಸುದ್ದಿ ಕೂಡ ಹಬ್ಬಿದೆ.

ಇದಕ್ಕೆ ಪೂರಕವಾಗಿ ರಶ್ಮಿಕಾ ಮಂದಣ್ಣ ಜೊತೆ ಮೊನ್ನೆಯವರೆಗೆ ಕದ್ದು ಮುಚ್ಚಿ ಓಡಾಡುವ ಪ್ರಯತ್ನ ಮಾಡುತ್ತಿದ್ದ ವಿಜಯ್ ದೇವರಕೊಂಡ ''ದಿ ಗರ್ಲ್ಫ್ರೆಂಡ್'' ಚಿತ್ರದ ಸಂಭ್ರಮಾಚರಣೆಯ ಸಮಯದಲ್ಲಿ ಎಲ್ಲರೆದುರೇ ರಶ್ಮಿಕಾ ಮಂದಣ್ಣ ಅವರಿಗೆ ಸಿಹಿ ಮುತ್ತು ನೀಡಿದ್ದರು. ತಮ್ಮ ಈ ನಡೆಯಿಂದ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು.
ಇನ್ನು ರಶ್ಮಿಕಾ ಮಂದಣ್ಣ ಕೂಡ ವಿಜ್ಜು ಮೊದಲ ದಿನದಿಂದಲೂ ನೀನು ಈ ಸಿನಿಮಾ ಜೊತೆಗಿದ್ದೀಯಾ, ಸಿನಿಮಾ ಗೆದ್ದ ಬಳಿಕ ಕೂಡ ನೀನು ಇಲ್ಲಿಗೆ ಬಂದಿದ್ದೀಯಾ. ನನಗೆ ಇಡೀ ಸಿನಿಮಾ ನೀನು ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಇರ್ಬೇಕು(ಬೆಂಬಲವಾಗಿ ನಿಲ್ಲುವವರು) ಎಂದು ನಾನು ಭಾವಿಸ್ತೀನಿ. ಅದು ಆಶೀರ್ವಾದ ಎಂದು ಹೇಳಿದ್ದರು.
ವಿಜಯ್ ದೇವರಕೊಂಡ ಅವರ ಈ ನಡೆ ಮತ್ತು ರಶ್ಮಿಕಾ ಮಂದಣ್ಣ ಅವರ ಈ ನುಡಿಯಿಂದ ಹಲವರು ಮದುವೆಯ ಕುರಿತು ಕೇಳಿ ಬಂದ ಸುದ್ದಿಯನ್ನು ನಿಜಾ ಎಂದು ನಂಬಿದ್ದರು. ಫೆಬ್ರವರಿ 26ಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಮದುವೆಯ ಬಂಧನಕ್ಕೊಳಗಾಗುವುದು ಖಚಿತ ಎಂದುಕೊಂಡಿದ್ದರು.
ತಮ್ಮ ವ್ಯೆಯಕ್ತಿಕ ಜೀವನದ ಕುರಿತು ಹರಡಿರುವ ಈ ಸುದ್ದಿಯ ಕುರಿತು ರಶ್ಮಿಕಾ ಮಂದಣ್ಣ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಈ ಕುರಿತು ''ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ನಾನು ಮದುವೆಯ ಸುದ್ದಿಯನ್ನು ಒಪ್ಪುವುದು ಇಲ್ಲ. ಹಾಗಂಥ ತಳ್ಳಿಯೂ ಹಾಕಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಎಲ್ಲದಕ್ಕೂ ಸಮಯ ಸಂದರ್ಭ ಎನ್ನುವುದು ಇರುತ್ತೆ. ಆ ಸಮಯ ಬಂದಾಗ ನಾವೇ ಎಲ್ಲರಿಗೆ ಖಂಡಿತಾ ಹೇಳಿಯೇ ಹೇಳುತ್ತೇವೆ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅಡಿಪಾಯ ಹಾಕಿದ್ದೇ ವಿಜಯ್ ದೇವರಕೊಂಡ. ಇವರಿಬ್ಬರ ಕಾಂಬಿನೇಷನ್ನಲ್ಲಿ 2018ರಲ್ಲಿ ಬಂದಿದ್ದ ''ಗೀತ ಗೋವಿಂದಂ'' ಆ ಕಾಲದಲ್ಲಿ ವ್ಯಾಪಕ ಸದ್ದು ಮಾಡಿತ್ತು. ಇಬ್ಬರ ನಡುವೆ ಸಂಬಂಧವನ್ನು ಬೆಸೆಯುವಲ್ಲಿ ಪ್ರಮುಖವಾದ ಪಾತ್ರವನ್ನು ಕೂಡ ನಿರ್ವಹಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಅರ್ಜುನ್ ರೆಡ್ಡಿ ಹೊರತು ಪಡಿಸಿದರೆ ವಿಜಯ್ ದೇವರಕೊಂಡ ಬಹುದೊಡ್ಡ ಗೆಲುವನ್ನೇನಾದರೂ ಕಂಡಿದ್ದರೆ ಅದು ಈ ಚಿತ್ರದಲ್ಲಿಯೇ.
''ಗೀತ ಗೋವಿಂದಂ'' ಚಿತ್ರದ ನಂತರ ಮರು ವರ್ಷವೇ ಅಂದರೆ 2019ರಲ್ಲಿ ವಿಜಯ್ ದೇವರಕೊಂಡ ಮತ್ತೆ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದಿದ್ದರು. ಇಬ್ಬರು ''ಡಿಯರ್ ಕಾಮ್ರೇಡ್'' ಎಂಬ ಚಿತ್ರ ಮಾಡಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಈ ಚಿತ್ರದ ಸಮಯದಲ್ಲಿಯೇ ಎನ್ನುವುದು ತೆಲುಗು ಚಿತ್ರರಂಗದ ಪಂಡಿತರ ಅಭಿಪ್ರಾಯ.
ಒಟ್ನಲ್ಲಿ ಸದ್ಯ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ. ಸುದ್ದಿಯನ್ನು ತಳ್ಳಿ ಹಾಕದೇ ಸಮಯ ಬಂದಾಗ ಹೇಳುವುದಾಗಿ ಹೇಳಿದ್ದಾರೆ. ಆ ಸಮಯ ಯಾವಾಗ ಬರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











