ಮದುವೆ ಸಂಭ್ರಮದಲ್ಲಿ ರಶ್ಮಿಕಾ, ವಿಜಯ್ ದೇಶಾದ್ಯಂತ ಅನ್ನದಾನ, ಸಿಹಿ ಹಂಚಿಕೆ; ಬೆಂಗಳೂರಿನಲ್ಲಿ ಎಲ್ಲಿ ಯಾವಾಗ?
ಎರಡು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪ್ರಿಯಕರ ವಿಜಯ್ ದೇವರಕೊಂಡ ಜೊತೆ ಉದಯ್ಪುರದಲ್ಲಿ ಹಸೆಮಣೆ ಏರಿದ್ದರು. ಇಬ್ಬರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿದೆ. ಅಭಿಮಾನಿಗಳು, ಆಪ್ತರು ಜೋಡಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಸಿದ್ದಾರೆ. ಇದೀಗ ಅದ್ಧೂರಿ ರಿಸೆಪ್ಷನ್ ಪಾರ್ಟಿಗೆ ವಿರೋಷ್ ಜೋಡಿ ಸಿದ್ದವಾಗುತ್ತಿದೆ.
ಮಾರ್ಚ್ 4ರಂದು ಹೈದರಾಬಾದ್ನಲ್ಲಿ ವಿಜಯ್-ರಶ್ಮಿಕಾ ದಂಪತಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಸಾಕಷ್ಟು ಗಣ್ಯರನ್ನು ಜೋಡಿ ಆಹ್ವಾನಿಸಿದೆ. ಚಿತ್ರರಂಗದ ಆಪ್ತರಿಗೂ ಆಮಂತ್ರಣ ನೀಡಿದೆ. ಇದೆಲ್ಲದರ ಜೊತೆ ಅಭಿಮಾನಿಗಳ ಜೊತೆ ಮದುವೆ ಸಂಭ್ರಮ ಹಂಚಿಕೊಳ್ಳಲು ಜೋಡಿ ಮುಂದಾಗಿದೆ. ದೇಶಾದ್ಯಂತ ಅನ್ನದಾನ, ಸಿಹಿ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ.

"ಈ ದೇಶದ ಸುಂದರ ಜನರಿಗೆ. ನೀವು ಯಾವಾಗಲೂ ನಮ್ಮ ಪ್ರಯಾಣ ಮತ್ತು ನಮ್ಮ ಪ್ರೀತಿಯ ಭಾಗವಾಗಿದ್ದೀರಿ. ನಿಮ್ಮೆಲ್ಲರೊಂದಿಗೆ ನಮ್ಮ ಮದುವೆಯನ್ನು ಆಚರಿಸುವುದು ನಮಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ. ಸಿಹಿ ಹಾಗೂ ಊಟದ ಮೂಲಕ ಭಾರತೀಯರು ಎಲ್ಲಾ ಸಂಭ್ರಮವನ್ನು ಆಚರಿಸುತ್ತಾರೆ. ಆದ್ದರಿಂದ ಮಾರ್ಚ್ 1 ರಂದು ನಮ್ಮ ಜೀವನದ ಈ ದೊಡ್ಡ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ದೇಶಾದ್ಯಂತ ಪ್ರೀತಿ ಮತ್ತು ಸಿಹಿತಿಂಡಿಗಳಿಂದ ತುಂಬಿದ ಟ್ರಕ್ಗಳನ್ನು ಕಳುಹಿಸುತ್ತಿದ್ದೇವೆ. ನಾವು ದೇಶಾದ್ಯಂತ ಅನೇಕ ದೇವಾಲಯಗಳಲ್ಲಿ ಅನ್ನದಾನಕ್ಕಾಗಿ ದೇಣಿಗೆ ನೀಡುತ್ತೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ" ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ. ಎಲ್ಲೆಲ್ಲೆ ಯಾವಾಗ ಸಿಹಿ ಹಂಚಿಕೆ, ಅನ್ನದಾನ ಎನ್ನುವ ಬಗ್ಗೆ ಕೂಡ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಶಿವೋಹಂ ದೇವಸ್ಥಾನ, ಶ್ರೀ ರುಕ್ಮಿಣಿ ದೇವಸ್ಥಾನ (ಗುವಾಹಟಿ), ಶ್ರೀ ಚಾಮುಂಡೇಶ್ವರಿ ದೇವಸ್ಥಾನ (ಮೈಸೂರು), ಅರುಲ್ಮಿಗು ಕೋನಿಯಮ್ಮನ್ ತಿರುಕೋಯಿಲ್ (ಕೊಯಮತ್ತೂರು), ಚಿಂತಪಲ್ಲಿ ಸಾಯಿಬಾಬಾ ದೇವಸ್ಥಾನ, ಚಿಂತಪಲ್ಲಿ ಮಾನ್ಯಮಕೊಂಡ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಮಹೆಬೂಬನಗರ, ಶ್ರೀ ಕನಕ ಮಹಾಲಕ್ಷ್ಮಿ ದೇವಸ್ಥಾನ(ವೈಜಾಗ್) ದ್ವಾರಕಾ ತಿರುಮಲ ದೇವಸ್ಥಾನ - ಚಿಕ್ಕ ತಿರುಪತಿ ಏಲೂರು, ಶ್ರೀ ಕನಕದುರ್ಗಾ ದೇವಸ್ಥಾನ (ವಿಜಯವಾಡ) ಹೀಗೆ ಹಲವು ದೇವಸ್ಥಾನಗಳಲ್ಲಿ ಅನ್ನದಾನಕ್ಕೆ ದೇಣಿಗೆ ನೀಡುತ್ತಿದ್ದಾರೆ.
ಮೈಸೂರು, ಕೊಡಗು, ಬೆಂಗಳೂರಿನಲ್ಲಿ ಸಿಹಿ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ತೆಲಂಗಾಣದಲ್ಲಿ ಹೈದರಾಬಾದ್, ಕರೀಂ ನಗರ್, ಮೆಹಬೂಬ್ ನಗರ್, ಗುಜರಾತಿನ ಅಹಮದಾಬಾದ್, ರಾಜಸ್ಥಾನದ ಜೈಪುರ್, ಕೇರಳದ ಕೊಚ್ಚಿ ಸೇರಿದಂತೆ ದೇಶಾದ್ಯಂತ ನಾನಾ ನಗರಗಳಲ್ಲಿ ಸಿಹಿ ಹಂಚಿಕೆ ಮಾಡಲು ವಿರೋಷ್ ಜೋಡಿ ಮನಸ್ಸು ಮಾಡಿದೆ. ವಿಜಯ್- ರಶ್ಮಿಕಾ ದಂಪತಿ ಪ್ರಯತ್ನಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಜವಾದ ಸಂಭ್ರಮಾಚರಣೆ ಅಂದ್ರೆ ಇದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್-ರಶ್ಮಿಕಾ ಮದುವೆ ಸಂಭ್ರಮ ಬೆನ್ನಲ್ಲೇ 'ರಣಬಾಲಿ' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ವಿರೋಷ್ ಜೋಡಿ ನಟಿಸುತ್ತಿದೆ. ಇದು ಇವರಿಬ್ಬರ 3ನೇ ಸಿನಿಮಾ. 'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಬಳಿಕ ಜೋಡಿ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಜೊತೆಯಾಗಿದ್ದರು. ಇಬ್ಬರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮಾರ್ಚ್ 4ರಂದು ನಡೆಯುವ ವಿಜಯ್- ರಶ್ಮಿಕಾ ಮದುವೆ ರಿಸೆಪ್ಷನ್ ಪಾರ್ಟಿಯಲ್ಲಿ ಯಾರೆಲ್ಲಾ ಭಾಗಿ ಆಗುತ್ತಾರೆ ಎನ್ನುವ ಚರ್ಚೆ ನಡೀತಿದೆ. ತೆಲುಗು ಚಿತ್ರರಂಗದ ಸಾಕಷ್ಟು ತಾರೆಯರು ಜೋಡಿಗೆ ಶುಭ ಹಾರೈಸಲು ಹೋಗುವ ನಿರೀಕ್ಷೆಯಿದೆ. ಕೆಲ ಕನ್ನಡ ತಾರೆಯರಿಗೂ ಆಮಂತ್ರಣ ತಲುಪಿದ್ದು ಯಾರು ಸಾಕ್ಷಿ ಆಗುತ್ತಾರೆ ಎಂದು ಕಾದು ನೋಡಬೇಕಿದೆ.


Click it and Unblock the Notifications











