ಇಟಲಿ ಸರ್ಕಾರದ ನಿರ್ಧಾರದಿಂದ ರವಿತೇಜ ಸಿನಿಮಾಕ್ಕೆ ಶಾಕ್
ಕೊರೊನಾ ಅನ್ಲಾಕ್ ನಂತರ ಸಿನಿಮಾ ಚಿತ್ರೀಕರಣಗಳು ಪುನಃ ಪ್ರಾರಂಭವಾಗಿವೆ. ಕೆಲವು ಸಿನಿಮಾಗಳು ಚಿತ್ರೀಕರಣಕ್ಕೆಂದು ವಿದೇಶಕ್ಕೆ ಸಹ ತೆರಳಿವೆ.
ತೆಲುಗಿನ ನಟ ರವಿತೇಜ ಅವರ ಮುಂದಿನ ಸಿನಿಮಾ 'ಖಿಲಾಡಿ' ಚಿತ್ರೀಕರಣಕ್ಕೆಂದು ಇಟಲಿಗೆ ತೆರಳಲಾಗಿತ್ತು. ಆದರೆ ಅಲ್ಲಿನ ಸರ್ಕಾರದ ನಿರ್ಣಯದಿಂದಾಗಿ ಚಿತ್ರೀಕರಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾಗಿದೆ ಚಿತ್ರತಂಡ.
ಇಟಲಿಯಲ್ಲಿ ಕೊರೊನಾ ಪ್ರಕರಣಗಳು ಹಠಾತ್ತನೆ ಹೆಚ್ಚಳವಾದ ಕಾರಣ ಸರ್ಕಾರವು ಲಾಕ್ಡೌನ್ ಘೋಷಣೆ ಮಾಡುವ ಚಿಂತನೆ ಮಾಡುತ್ತಿರುವುದಾಗಿ ಹೇಳಿತ್ತು. ಹಾಗಾಗಿ 'ಖಿಲಾಡಿ' ತಂಡವು ಶೆಡ್ಯೂಲ್ ಮುಗಿಯುವ ಮುನ್ನವೇ ಇಟಲಿಯಿಂದ ವಾಪಸ್ಸಾಗಿದೆ.

'ಮಾರ್ಚ್ 31 ರ ವರೆಗೆ ಇಟಲಿಯಲ್ಲಿ ಚಿತ್ರೀಕರಣ ಮಾಡುವ ನಿರ್ಣಯವಾಗಿತ್ತು, ಆದರೆ ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ನಿಗದಿತ ಅವಧಿಗೆ ಮುನ್ನವೇ ಚಿತ್ರತಂಡ ವಾಪಸ್ಸಾಗಿದೆ. ಮುಖ್ಯ ಭಾಗಗಳನ್ನು ಈಗಾಗಲೇ ಚಿತ್ರೀಕರಣ ಮಾಡಿಕೊಂಡಾಗಿದೆ. ಉಳಿದ ಕೆಲ ಭಾಗಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಭಾರತದಲ್ಲಿಯೇ ಚಿತ್ರೀಕರಣ ಮಾಡುತ್ತೇವೆ' ಎಂದಿದೆ ಚಿತ್ರತಂಡ.
ಮಲಯಾಳಂ ಸಿನಿಮಾ 'ಆಡುಜೀವಿತಂ' ಚಿತ್ರೀಕರಣಕ್ಕಾಗಿ ಜೋರ್ಡನ್ಗೆ ತೆರಳಿದ್ದ ಚಿತ್ರತಂಡ ಕೋವಿಡ್ ಲಾಕ್ಡೌನ್ನಿಂದಾಗಿ ಸುಮಾರು ಎರಡು ತಿಂಗಳು ಅಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇನ್ನೂ ಹಲವರು ಚಿತ್ರೀಕರಣ ತಂಡಗಳು ಲಾಕ್ಡೌನ್ನಿಂದಾಗಿ ತೊಂದರೆಗೆ ಸಿಲುಕಿದ್ದವು. ಇದನ್ನೆಲ್ಲಾ ಗಮದಲ್ಲಿಟ್ಟುಕೊಂಡು 'ಖಿಲಾಡಿ' ಸಿನಿಮಾ ತಂಡವು ಬೇಗನೆ ಭಾರತಕ್ಕೆ ಮರಳಿದೆ.
Recommended Video
'ಖಿಲಾಡಿ' ಸಿನಿಮಾದಲ್ಲಿ ರವಿತೇಜ ಜೊತೆಗೆ ಅರ್ಜುನ್ ಸರ್ಜಾ, ಮೀನಾಕ್ಷಿ ಚೌಧರಿ, ಡಿಂಪಲ್ ಹಯಾತಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ರಮೇಶ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವು ಮೇ 28 ರಂದು ಬಿಡುಗಡೆ ಆಗಲಿದೆ.


Click it and Unblock the Notifications











