ಸಿನಿಮಾ ಹಿಟ್ ಆದರು ಬಗೆಹರಿಯದ ಸಮಸ್ಯೆ: ನಿರ್ಮಾಪಕ ವಿರುದ್ಧ ನಿರ್ದೇಶಕ ದೂರು
ರವಿತೇಜ ನಟನೆಯ 'ಕ್ರ್ಯಾಕ್' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಕೊರೊನಾ ನಂತರ ತೆಲುಗಿನಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡ ಕಮರ್ಶಿಯಲ್ ಸಿನಿಮಾ ಎಂಬ ಖ್ಯಾತಿ ಗಳಿಸಿಕೊಂಡಿತು 'ಕ್ರ್ಯಾಕ್'.
ಸಿನಿಮಾ ಹಿಟ್ ಆದರೂ ಸಹ ನಿರ್ಮಾಪಕನ ಆರ್ಥಿಕ ಸಮಸ್ಯೆಗಳು ಬಗೆಹರಿದಂತೆ ಕಾಣುತ್ತಿಲ್ಲ. ಕ್ರ್ಯಾಕ್ ಬಿಡುಗಡೆಯ ಹಿಂದಿನ ದಿನವೂ ಸಹ ನಿರ್ಮಾಪಕನೊಂದಿಗೆ ಫೈನಾನ್ಶಿಯರ್ಗಳು ಜಗಳ ಮಾಡಿಕೊಂಡು, ಸಿನಿಮಾ ಬಿಡುಗಡೆ ತಡೆದಿದ್ದರು. ಆದರೆ ನಟ ರವಿತೇಜ ಸಂಧಾನ ನಡೆಸಿ ಸಿನಿಮಾ ಬಿಡುಗಡೆ ಆಗುವಂತೆ ಮಾಡಿದ್ದರು.
ಇದೀಗ ಸಿನಿಮಾ ಬಿಡುಗಡೆ ಆಗಿ ಹಿಟ್ ಸಹ ಆಗಿದೆ. ಆದರೆ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ನಿರ್ಮಾಪಕ ಟ್ಯಾಗೋರ್ ಮಧು ವಿರುದ್ಧ 'ಕ್ರ್ಯಾಕ್' ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ಮಾಪಕರ ಕೌನ್ಸಿಲ್ನಲ್ಲಿ ದೂರು ನೀಡಿದ್ದಾರೆ.

ಟ್ಯಾಗೋರ್ ಮಧು ತಮಗೆ ನೀಡಬೇಕಾದ ಸಂಭಾವನೆಯನ್ನು ನೀಡಿಲ್ಲ ಎಂದು ಆರೋಪಿಸಿ ಗೋಪಿಚಂದ್ ಮಲಿನೇನಿ ದೂರು ದಾಖಲಿಸಿದ್ದಾರೆ. ಒಪ್ಪದಂದ ಪ್ರಕಾರ ಗೋಪಿಚಂದ್ ಗೆ ಇನ್ನೂ 30 ರಿಂದ 50 ಲಕ್ಷ ಸಂಭಾವನೆ ಬಾಕಿ ಇದೆಯಂತೆ.
ಆದರೆ ನಿರ್ಮಾಪಕ ಟ್ಯಾಗೊರ್ ಮಧು ಹೇಳಿರುವಂತೆ, ನಿರ್ದೇಶಕ ಗೋಪಿಚಂದ್ ಎಲ್ಲ ಬಜೆಟ್ ಮಿತಿಗಳನ್ನು ಮೀರಿ ಹೆಚ್ಚು ಬಜೆಟ್ ಬಳಸಿ ಸಿನಿಮಾ ನಿರ್ದೇಶಿಸಿದ್ದಾರಂತೆ. ಮೊದಲಿಗೆ ಸಿನಿಮಾವನ್ನು 15 ಕೋಟಿ ನಿರ್ಮಾಣ ಮಾಡುವುದಾಗಿ ಹೇಳಿದ್ದ ಗೋಪಿಚಂದ್, 25 ಕೋಟಿ ಖರ್ಚು ಮಾಡಿದ್ದಾರಂತೆ. ಹಾಗಾಗಿಯೇ ತಾವು ಗೋಪಿಚಂದ್ ಗೆ ಬಾಕಿ ಹಣ ಪಾವತಿಸಿಲ್ಲ ಎಂದಿದ್ದಾರೆ ಟ್ಯಾಗೊರ್ ಮಧು.
Recommended Video
ಈ ನಡುವೆ ಜನವರಿ 09 ರಂದು ಬಿಡುಗಡೆ ಆಗಿದ್ದ ಕ್ರ್ಯಾಕ್ ಸಿನಿಮಾವನ್ನು 'ಆಹಾ' ಒಟಿಟಿಗೆ ಮಾರಿದ್ದಾರೆ ನಿರ್ಮಾಪಕ ಟ್ಯಾಗೊರ್ ಮಧು. ಸಿನಿಮಾವು 'ಆಹಾ' ಒಟಿಟಿಯಲ್ಲಿ ಇಂದಿನಿಂದ (ಫೆಬ್ರವರಿ 05) ಲಭ್ಯವಾಗಲಿದೆ.


Click it and Unblock the Notifications











