"ಅಕಿರಾ ನಿಮ್ಮ ಅಣ್ಣನ ಮಗ ಅಲ್ಲ.. ನನ್ನ ಮಗ": ಪವನ್ ಫ್ಯಾನ್ಸ್ ಮೇಲೆ ರೇಣು ದೇಸಾಯಿ ಗರಂ
ತೆಲುಗು ನಟ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಪ್ರೀತಿಸಿ ಮದುವೆ ಆಗಿದ್ದು, ಇದೀಗ ಡಿವೋರ್ಸ್ ಪಡೆದು ದೂರಾಗಿರೋದು ಎಲ್ಲರಿಗೂ ಗೊತ್ತೇಯಿದೆ. ರೇಣು ದೇಸಾಯಿ ಈಗ ಸಿನಿಮಾಗಳಿಂದ ದೂರಾಗಿ ಇಬ್ಬರು ಮಕ್ಕಳ ಪೋಷಣೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ತಾಳ್ಮೆ ಪರೀಕ್ಷಿಸುತ್ತಿದ್ದಾರೆ.
2012ರಲ್ಲಿ ಪವನ್- ರೇಣು ಡಿವೋರ್ಸ್ ಪಡೆದುಕೊಂಡಿದ್ದರು. ಅಂದಿನಿಂದಲೂ ಆಕೆ ಏಕಾಂಗಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಸದ್ಯ ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ (ಏಪ್ರಿಲ್ 8) ಪವನ್ -ರೇಣು ಪುತ್ರ ಅಕಿರಾ ಹುಟ್ಟುಹಬ್ಬ. ಸಾಕಷ್ಟು ಜನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಕಿರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಇದೇ ವೇಳೆ ಕೆಲವರು ಎಲ್ಲೆ ಮೀರಿ ಕಾಮೆಂಟ್ ಮಾಡಿ ರೇಣು ದೇಸಾಯಿಗೆ ಕಿರಿ ಕಿರಿ ಉಂಟು ಮಾಡಿದ್ದಾರೆ.

"ಮೇಡಂ. ಇದು ಬಹಳ ಅನ್ಯಾಯ. ನಮ್ಮ ಅಕಿರಾನ ಒಮ್ಮೆ ಆದರೂ ತೋರಿಸಿ. ನಮ್ಮ ಅಣ್ಣ(ಪವನ್ ಕಲ್ಯಾಣ್)ನ ಮಗನನ್ನು ನೋಡಬೇಕು ಎನ್ನುವ ಆಸೆ ನಮಗೂ ಇರುತ್ತದೆ. ನೀವು ಮುಚ್ಚಿಡಬೇಡಿ. ಫೋಟೊ, ವಿಡಿಯೋಗಳಲ್ಲಿ ಆದರೂ ಅಕಿರಾನ ತೋರಿಸಿ" ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ರೇಣು "ನಿಮ್ಮ ಅಣ್ಣನ ಮಗನಾ? ಅಕಿರಾ ನನ್ನ ಮಗ. ನೀವು ತಾಯಿಯ ಹೊಟ್ಟೆಯಲ್ಲಿ ತಾನೇ ಹುಟ್ಟಿರೋದು. ನೀವು ಹಾರ್ಡ್ ಕೋರ್ ಫ್ಯಾನ್ ಅಂತ ಗೊತ್ತು. ಆದರೂ ಸರಿಯಾಗಿ ಮಾತಾಡಿ" ಎಂದು ಉತ್ತರಿಸಿದ್ದಾರೆ.
ಇಂತಹ ಸಾಕಷ್ಟು ಕಾಮೆಂಟ್ಗಳನ್ನು ಡಿಲೀಟ್ ಮಾಡ್ತಿದ್ದೀನಿ. ಆದರೂ ಕೆಲವರು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ನನ್ನ ಮಗನ ಹುಟ್ಟುಹಬ್ಬದ ದಿನ ಇಂತಹ ಕಾಮೆಂಟ್ಸ್ ಓದುವುದು ನೋವಾಗುತ್ತದೆ. 11 ವರ್ಷಗಳಿಂದ ನನ್ನನ್ನು ಕೆಟ್ಟವಳಾಗಿ, ವಿಲನ್ ಆಗಿ ನೋಡುತ್ತಿದ್ದಾರೆ. ಇದೆಲ್ಲಾ ನೋಡಿ ನೋಡಿ ನಾನು ಬೇಸತ್ತು ಹೋಗಿದ್ದೇನೆ." ಅಂತ ರೇಣು ದೇಸಾಯಿ ಅಲವತ್ತುಕೊಂಡಿದ್ದಾರೆ.
2009ರಲ್ಲಿ ರೇಣು ದೇಸಾಯಿ ಕೈ ಹಿಡಿದಿದ್ದ ಪವನ್ ಕಲ್ಯಾಣ್ 2012ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದರು. 2013ರಲ್ಲಿ ರಷ್ಯಾ ಮೂಲದ ಅನ್ನಾ ಲೆಸೆನೆವಾ ಜೊತೆ ರಿಜಿಸ್ಟರ್ ಮದುವೆ ಆಗಿದ್ದಾರೆ. ರೇಣು ದೇಸಾಯಿಗೂ ಮುನ್ನ ಪವನ್, ನಂದಿನಿ ಎಂಬುವವರ ಜೊತೆ ಮದುವೆಯಾಗಿ 2007ರಲ್ಲಿ ಆಕೆಗೆ ಡಿವೋರ್ಸ್ ಕೊಟ್ಟಿದ್ದರು. ಡಿವೋರ್ಸ್ ನಂತರ ರೇಣು ತಮ್ಮ ಇಬ್ಬರು ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮರಾಠಿ ಬೆಡಗಿ ರೇಣು ದೇಸಾಯಿಗೆ 'ಬದ್ರಿ' ಚಿತ್ರದ ಶೂಟಿಂಗ್ ವೇಳೆ ನಟ ಪವನ್ ಕಲ್ಯಾಣ್ ಪರಿಚಯ ಆಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಪವನ್ ನಿರ್ದೇಶಿಸಿ ನಟಿಸಿದ 'ಜಾನಿ' ಚಿತ್ರದಲ್ಲೂ ಆಕೆ ನಟಿಸಿದ್ದರು. ಈ ಸಿನಿಮಾ ನಂತರ ಪವನ್ ಜೊತೆ ಪ್ರೀತಿಸಿ ಮದುವೆ ಆಗಿದ್ದ ರೇಣು ನಂತರ ಸಿನಿಮಾಗಳಲ್ಲಿ ನಟಿಸಲಿಲ್ಲ. 2014ರಲ್ಲಿ 'ಇಷ್ಕ್ ವಾಲಾ ಲವ್' ಎನ್ನುವ ಮರಾಠಿ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದರು.
ಪವನ್ ಕಲ್ಯಾಣ್ ನಟನೆಯ ಖುಷಿ, ಜಾನಿ, ಗುಡುಂಬಾ ಶಂಕರ್, ಬಾಲು, ಅನ್ನಾವರಂ ಚಿತ್ರಗಳಿಗೆ ರೇಣು ದೇಸಾಯಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ 'ಟೈಗರ್ ನಾಗೇಶ್ವರ್ ರಾವ್' ಚಿತ್ರದಲ್ಲಿ ಆಕೆ ಮತ್ತೆ ಬಣ್ಣ ಹಚ್ಚಿರುವುದಾಗಿ ಹೇಳಲಾಗ್ತಿದೆ. ಡಿವೋರ್ಸ್ ನಂತರ ರೇಣು ದೇಸಾಯಿ ಹುಟ್ಟೂರಿಗೆ ವಾಪಸ್ ಆಗಿದ್ದಾರೆ. ತೆಲುಗು ಕೂಡ ಚೆನ್ನಾಗಿ ಮಾತನಾಡುವ ರೇಣು ಸದ್ಯ ಮರಾಠಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಆಗಾಗ್ಗೆ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.


Click it and Unblock the Notifications











