ಇದು ಮೆಗಾ ಭಿಕ್ಷಾಟನೆ: ಚಿರಂಜೀವಿ ನಡೆ ಬಗ್ಗೆ RGV ಟೀಕೆ ಯಾಕೆ?
ಸಿನಿಮಾ ಟಿಕೆಟ್ ದರ ಕಡಿತದ ಜೊತೆಗೆ ದಿನಕ್ಕೆ ನಾಲ್ಕು ಪ್ರದರ್ಶನಗಳನ್ನು ಮಾತ್ರ ಮಾಡಬೇಕು ಎನ್ನುವ ನೀತಿಯನ್ನು ಆಂಧ್ರ ಸರ್ಕಾರ ಜಾರಿಗೊಳಿಸಿತ್ತು. ಇದಕ್ಕೆ ಸಿಎಂ ಜಗನ್ ನೇತೃತ್ವದ ಸರ್ಕಾರ ರೂವಾರಿ. ಆದರೆ ಸರ್ಕಾರದ ಈ ನಿರ್ಧಾರ ಟಾಲಿವುಡ್ ನಿದ್ದೆ ಕೆಡಿಸಿತ್ತು. ಹಾಗಾಗಿ ಸೂಪರ್ಸ್ಟಾರ್ಗಳು ಸಿನಿಮಾ ಬಿಡುಗಡೆ ಮಾಡುವುದನ್ನು ನಿಧಾನಗೊಳಿಸಿದ್ದರು.
ಈ ಬಗ್ಗೆ ತಮ್ಮ ಮನವಿಯನ್ನು ತೆಗೆದುಕೊಂಡು ಸಿಎಂ ಬಳಿಗೆ ತೆಲುಗಿನ ಸ್ಟಾರ್ ನಟರ ದಂಡು ಹೋಗಿದೆ. ಮೆಗಾ ಸ್ಟಾರ್ ಚಿರಂಜೀವಿ ಕರೆಗೆ ಓಗೊಟ್ಟು ಟಾಲಿವುಡ್ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್, ಹಾಗೂ ನಿರ್ದೇಶಕ ಎಸ್ಎಸ್ ರಾಜಮೌಳಿ, ಕೊರಟಾಲ ಶಿವ ಮತ್ತಿತರರು ಮೆಗಾಸ್ಟಾರ್ ಮುಂದಾಳತ್ವದಲ್ಲಿ ವಿಜಯವಾಡಕ್ಕೆ ತೆರಳಿದ್ದರು.
ಆಂಧ್ರ ಸಿ ಎಂ ಜಗನ್ ಅವರನ್ನು ಭೇಟಿ ಮಾಡಿದೆ ಈ ಸ್ಟಾರ್ ತಂಡ. ಸಿ.ಎಂ ಜೊತೆಗಿನ ಚರ್ಚೆಯಲ್ಲಿ ಹೊಸ ನೀತಿಯಿಂದ ಚಿತ್ರರಂಗಕ್ಕೆ ಆಗುವ ತೊಡಕುಗಳು, ತಮಗಾಗುತ್ತಿರುವ ತೊಂದರೆಯನ್ನು ವಿವರಿಸಿದ್ದರು. ಅದಕ್ಕೆ ಜಗನ್ ಮೋಹನ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರದಲ್ಲೂ ರಾಮ್ಗೋಪಾಲ್ ವರ್ಮಾ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಇದು ಮೇಗಾ ಭಿಕ್ಷಾಟನೆ ಎಂದು ಟೀಕೆ ಮಾಡಿದ RGV!
ಸಿ ಎಂ ಜೊತೆಗೆ ಈ ಸ್ಟಾರ್ ನಟರು ಮಾತುಕತೆ ನಡೆಸಿದ ಚರ್ಚೆಯ ವಿಡಿಯೋವನ್ನು ಹಂಚಿಕೊಂಡ ನಿರ್ದೇಶಕ ರಾಮ್ ಗೋಪಾಲ್ ವರ್ಮಾ "ಸೂಪರ್, ಮೆಗಾ, ಬಾಹುಬಲಿ ಲೆವೆಲ್ ಭಿಕ್ಷಾಟನೆಯಿಂದ ಇದು ಸಾಧ್ಯವಾಗಿದೆ. ಅದರೂ ಮೆಗಾ ಸ್ಟಾರ್ ಸಿ.ಎಂ. ಜಗನ್ ಅವರು ಅವರನ್ನು ಆಶೀರ್ವದಿಸಿದ್ದು ನನಗೆ ಖುಷಿ ತಂದಿದೆ. ಸೂಪರ್, ಮೆಗಾ, ಬಾಹುಬಲಿಯ ಮಿಂಚಿನ ಮಹಾಬಲವನ್ನು ನಾನು ಪ್ರಶಂಸಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.

ಮೆಗಾ ಸ್ಟಾರ್ ಮೆಗಾ ಭಿಕ್ಷಾಟನೆ ಕಂಡು ಬೇಸರ: Rgv
ಇನ್ನು ಇದಕ್ಕೂ ಮೊದಲು ರಾಮ್ ಗೋಪಾಲ್ ವರ್ಮಾ ಮಾಡಿರುವ ಒಂದಷ್ಟು ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಅದರಲ್ಲಿ ಒಂದು ಟ್ವೀಟ್ನಲ್ಲಿ ಅವರು "ಸರ್ ಚಿರಂಜೀವಿ ನಿಮ್ಮ ಒಬ್ಬ ಮೆಗಾ ಅಭಿಮಾನಿಯಾಗಿ, ನಿಮ್ಮ ಮೆಗಾ ಭಿಕ್ಷಾಟನೆ ಕಂಡು ಬೇಸರವಾಯಿತು." ಎಂದು ಬರೆದಿದ್ದಾರೆ. ಇದರೊಂದಿಗೆ "ಚಿಕ್ಕಣ್ಣ ಪವನ್ ಕಲ್ಯಾಣ್ ಹೀಗೆ ಬೇಡುವುದಿಲ್ಲ. ಹಾಗಾಗಿ ಅವರು ತುಂಬಾ ಫೇಮಸ್." ಎಂದೂ ಕೂಡ ಟ್ವೀಟ್ ಮಾಡಿದ್ದರು.

2 ವಾರಗಳಲ್ಲಿ ಸರ್ಕಾರದ ನಿರ್ಧಾರ ಪ್ರಕಟ!
ಎಪಿ ಸರ್ಕಾರ ಮತ್ತು ಟಾಲಿವುಡ್ ನಡುವಿನ ವಾರ್ ಸದ್ಯ ತಣ್ಣಗಾದ ಹಾಗೆ ಇದೆ. ತೆಲುಗು ಬಡಾ ಸ್ಟಾರ್ಗಳು ಸಿಎಂ ಜಗನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸರ್ಕಾರದ ವತಿಯಿಂದ ಸಕಾರಾತ್ಮಕ ಸೂಚನೆ ಸಿಕ್ಕಿದೆಯಂತೆ. ಹಾಗಾಗಿ ಇನ್ನು 2 ವಾರಗಳಲ್ಲಿ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶಗಳೂ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಟಾಲಿವುಡ್ ಬಿಗ್ ಚಿತ್ರಗಳು ರಿಲೀಸ್ಗೆ ಸಿದ್ಧ!
ಸದ್ಯ ತೆಲುಗಿನ ಬಹುತೇಕ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಹಾಗಾಗಿ ಸರ್ಕಾರ ನಿಯಮ ಬದಲಿಸಿದರೆ ರಿಲೀಸ್ ಆಗುವ ಸಿನಿಮಾಗಳಿಗೂ ಅನುಕೂಲ ಆಗಲಿದೆ. ಭೀಮ್ಲಾ ನಾಯಕ್, ರಾಧೆ ಶ್ಯಾಮ್, RRR, ಆಚಾರ್ಯ ಹೀಗೆ ಸಾಲು ಸಾಲು ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿವೆ. ಹಾಗಾಗಿಯೇ ಈಗ ಸರ್ಕಾರದ ನಿಯಮಗಳನ್ನು ಬದಲಿಸುವಂತೆ ಸರ್ಕಾರಕ್ಕೆ ತೆಲುಗು ಚಿತ್ರರಂಗ ಮನವಿ ಮಾಡಿದೆ.


Click it and Unblock the Notifications











