"ನಾನು ಹೆಮ್ಮೆಯ ಕನ್ನಡಿಗ", ತೆಲುಗು ಭಾಷೆಯ ವಿವಾದದ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
'ಕಾಂತಾರ- 1' ಸಿನಿಮಾ ದೇಶ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ಗೆ ತೆಲುಗು ನಟ ಜ್ಯೂ. ಎನ್ಟಿಆರ್ ಬಂದು ಸಾಥ್ ಕೊಟ್ಟಿದ್ದರು. ವೇದಿಕೆಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದು ಚರ್ಚೆ ಹುಟ್ಟಾಕ್ಕಿದೆ.
ತೆಲುಗು ನೆಲದಲ್ಲಿ ರಿಷಬ್ ಶೆಟ್ಟಿ ಬಂದು ಕನ್ನಡ ಯಾಕೆ ಮಾತನಾಡಿದ್ರು ಎಂದು ಕೆಲವರು ಕ್ಯಾತೆ ತೆಗೆದಿದಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಸ್ಪಷ್ಟವಾಗಿ ತೆಲುಗು ಮಾತನಾಡಲು ಬರುವುದಿಲ್ಲ. ಹಾಗಾಗಿ ವೇದಿಕೆಯಲ್ಲಿ "ನಾನು ಮನಸ್ಸಿನಿಂದ ಮಾತನಾಡಬೇಕು, ಅದಕ್ಕೆ ಕನ್ನಡದಲ್ಲೇ ಮಾತನಾಡ್ತೀನಿ. ಏನಾದರೂ ಗೊತ್ತಾಗದೇ ಇದ್ದರೆ ತಾರಕ್ ಸರ್ ಅನುವಾದ ಮಾಡುತ್ತಾರೆ" ಎಂದು ಹೇಳಿ ರಿಷಬ್ ಶೆಟ್ಟಿ ಮಾತನಾಡಿದ್ದರು. ಆದರೆ ಕೆಲವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಏನೇನೊ ಕಾಮೆಂಟ್ ಮಾಡುತ್ತಿದ್ದಾರೆ. ತಮಿಳುನಾಡಿಗೆ ಹೋಗಿ ತಮಿಳು ಮಾತನಾಡುತ್ತಾರೆ ಇಲ್ಲಿಗೆ ಬಂದರೆ ಯಾಕೆ ತೆಲುಗು ಮಾತನಾಡಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ನಿನ್ನೆ(ಸೆಪ್ಟೆಂಬರ್ 29) ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ 'ಕಾಂತಾರ- 1' ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ ರಿಷಬ್ ಶೆಟ್ಟಿ ಹಿಂದಿಯಲ್ಲೇ ಮಾತನಾಡಿದ್ದಾರೆ. ಇದೇ ವೇಳೆ ಬೇರೆ ಭಾಷೆಗಳನ್ನು ಕಲಿಯುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್ನಲ್ಲಿ ಕನ್ನಡ ಮಾತನಾಡಿದ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಎಲ್ಲಾ ಭಾಷೆಗಳ ಬಗ್ಗೆ ನನಗೆ ಗೌರವ ಇದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
"ನಾನು ಕನ್ನಡದಲ್ಲಿ ಯೋಚಿಸುತ್ತೇನೆ. ಅದೇ ಕಾರಣದಿಂದ, ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ಆದರೆ, ನನಗೆ ಹೊಸ ಭಾಷೆಗಳನ್ನು ಕಲಿಯುವುದು ಬಹಳ ಇಷ್ಟ. ನಾನು ಒಂದು ಸ್ಥಳಕ್ಕೆ ಹೋಗಿ ಮಾತನಾಡುವಾಗ, ಆ ನೆಲದ ಭಾಷೆಯನ್ನು ಅಗೌರವಿಸಬಾರದು. ಆದರೆ, ಕೆಲವೊಮ್ಮೆ ಅದು ತಪ್ಪಾಗಬಹುದು. ಅಲ್ಲಿ ಯಾಕೆ ಆ ಭಾಷೆ ಮಾತಾಡ್ತೀರಾ, ಇಲ್ಲಿ ಯಾಕೆ ಈ ಭಾಷೆ ಮಾತನಾಡ್ತೀರಾ? ಎನ್ನುವಂತೆ ಆಗಿಬಿಡುತ್ತದೆ. ನಾನು ಹೆಮ್ಮೆಯ ಕನ್ನಡಿಗ. ನಾನು ಕನ್ನಡದಲ್ಲಿ ಯೋಚಿಸುವ, ಮಾತನಾಡುತ್ತೇನೆ. ಅದೇ ರೀತಿ, ನಾನು ಕನ್ನಡವನ್ನು ಗೌರವಿಸಿದಂತೆ ಇತರ ಭಾಷೆಗಳನ್ನು ಸಹ ಸಮಾನವಾಗಿ ಗೌರವಿಸುತ್ತೇನೆ, ಪ್ರೀತಿಸುತ್ತೇನೆ" ಎಂದು ರಿಷಬ್ ಹೇಳಿದ್ದಾರೆ.
ಮಾತು ಮುಂದುವರೆಸಿದ ರಿಷಬ್ ಶೆಟ್ಟಿ "ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ, ಭಾರತದಲ್ಲಿ ಎಲ್ಲಾ ಭಾಷೆಗಳು, ಜೀವನ ಶೈಲಿ, ನಂಬಿಕೆಗಳ ಸಾರ ಒಂದೇ. ಬೇರೆ ಭಾಷೆಗಳನ್ನು ಕಲಿಯುವುದು ನನಗೆ ಖುಷಿ ಕೊಡುತ್ತದೆ. ಅದಕ್ಕಾಗಿ ಮತ್ತಷ್ಟು ಶ್ರಮಿಸುತ್ತೇನೆ" ಎಂದು ಹಿಂದಿಯಲ್ಲಿ ರಿಷಬ್ ಶೆಟ್ಟಿ ಹೇಳಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ 'OG' ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿಡುಗಡೆಯಾದಾಗ ಕಿರಿಕ್ ಆಗಿತ್ತು. ಚಿತ್ರಮಂದಿರದ ಮುಂದೆ ಡಿಜೆಗೆ ಪವನ್ ಫ್ಯಾನ್ಸ್ ಮುಂದಾಗಿದ್ದರು. ಅದಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಇದನ್ನು ಕೆಲವರು ತಪ್ಪಾಗಿ ಭಾವಿಸಿದ್ದಾರೆ. 'OG' ಚಿತ್ರಪ್ರದರ್ಶನಕ್ಕೆ ಅಡ್ಡಿಪಡಿಸಿದರು ಎಂದು ಅರ್ಥೈಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಇಲ್ಲಿಗೆ ಬಂದು ತೆಲುಗು ಮಾತಾಡಲ್ಲ, ನಮ್ಮ ಚಿತ್ರಕ್ಕೆ ಬೆಂಗಳೂರಿನಲ್ಲಿ ಅಡ್ಡಿಪಡಿಸುತ್ತಾರೆ ಹಾಗಾಗಿ ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ- 1' ಚಿತ್ರ ಬಾಯ್ಕಾಟ್ ಮಾಡಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ. 'ಕಾಂತಾರ- 1' ಸಿನಿಮಾ ಬಿಡುಗಡೆಗೆ ಯಾವುದೇ ರೀತಿಯ ಅಡೆತಡೆಗಳನ್ನು ಮಾಡಬಾರದು ಎಂದು ಆಂಧ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
"ಕನ್ನಡ ಚಿತ್ರಗಳಿಗೆ ನಾವು ಅಡ್ಡಿಪಡಿಸುವುದು ಸರಿಯಲ್ಲ. ರಾಷ್ಟ್ರೀಯ ಭಾವನೆಯಿಂದ ಯೋಚಿಸಬೇಕು. ಕನ್ನಡ ಕಂಠೀರವ ಡಾ. ರಾಜ್ಕುಮಾರ್ ಅವರಿಂದ ಕಿಚ್ಚ ಸುದೀಪ್, ಉಪೇಂದ್ರ, ಶಿವರಾಜ್ಕುಮಾರ್ ಮತ್ತು ರಿಷಬ್ ಶೆಟ್ಟಿಯವರವರೆಗೆ ತೆಲುಗು ಜನರು ಯಾವಾಗಲೂ ಎಲ್ಲರನ್ನೂ ಬೆಂಬಲಿಸಿದ್ದಾರೆ. ನಾವು ಸಹೋದರತ್ವದಿಂದ ಮುಂದುವರಿಯಬೇಕು. ಎರಡೂ ರಾಜ್ಯಗಳ ಚಲನಚಿತ್ರ ಮಂಡಳಿಗಳು ನಮ್ಮ ಚಲನಚಿತ್ರಗಳು ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಚರ್ಚಿಸಬೇಕು. 'ಕಾಂತಾರ -1' ಚಿತ್ರಕ್ಕೆ ಅಡ್ಡಿಪಡಿಸಬೇಡಿ" ಎಂದು ಪವನ್ ಕಲ್ಯಾಣ್ ಮನವಿ ಮಾಡಿದ್ದಾರೆ.


Click it and Unblock the Notifications











