ಹಂಪಿಯಲ್ಲಿ ರಿಷಬ್ ಶೆಟ್ಟಿ 'ಜೈ ಹನುಮಾನ್' ಮುಹೂರ್ತ; ಶೂಟಿಂಗ್ ಯಾವಾಗ, ಇಲ್ಲಿದೆ ಅಪ್ಡೇಟ್
'ಕಾಂತಾರ- 1' ಸಿನಿಮಾ ಹಿಟ್ ಆಗಿ 4 ತಿಂಗಳು ಕಳೆದರೂ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರುವಾಗಿಲ್ಲ. 'ಜೈ ಹನುಮಾನ್' ಚಿತ್ರದಲ್ಲಿ ನಟಿಸೋಕೆ ಬಹಳ ಹಿಂದೆಯೇ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜನವರಿಯಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕೊಂಚ ತಡವಾಗಿದ್ದು ಅಂತೂ ಇಂತೂ ಇದೀಗ ಮುಹೂರ್ತ ಫಿಕ್ಸ್ ಆಗಿದೆ.
ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ತೇಜಾ ಸಜ್ಜಾ ನಟನೆಯ ಸಿನಿಮಾ 2 ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಪ್ರಶಾಂತ್ ವರ್ಮಾ ಸೀಕ್ವೆಲ್ ಘೋಷಿಸಿದ್ದರು. 'ಕಾಂತಾರ'-1 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಿಷಬ್ ಶೆಟ್ಟಿ ಅವರನ್ನು ಒಪ್ಪಿಸಿ ಫೋಟೊಶೂಟ್ ಮಾಡಿ ಕುತೂಹಲ ಮೂಡಿಸಿದ್ದರು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಜೈ ಹನುಮಾನ್' ಸಿನಿಮಾ ನಿರ್ಮಾಣವಾಗಲಿದೆ.

ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಪೌರಾಣಿಕ ಸಿನಿಮಾ ಇದು ಎನ್ನಲಾಗ್ತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಹನುಮಂತನಾಗಿ ರಿಷಬ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ. ಫೆಬ್ರವರಿ 22ರಂದು ಹಂಪಿಯಲ್ಲಿ ಅದ್ಧೂರಿಯಾಗಿ ಸಿನಿಮಾ ಮುಹೂರ್ತ ನೆರವೇರಲಿದೆ. ಮಾರ್ಚ್ನಲ್ಲೇ ಚಿತ್ರೀಕರಣ ಶುರುವಾಗಲಿದೆ. ಆ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದೆ. ವಿದೇಶದ ಅನುಭವಿ ತಂತ್ರಜ್ಞರು ಚಿತ್ರದ ಗ್ರಾಫಿಕ್ಸ್ ಕೆಲಸಗಳನ್ನು ನಿಭಾಯಿಸಲಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರಶಾಂತ್ ವರ್ಮಾ 'ಜೈ ಹನುಮಾನ್' ಚಿತ್ರದ ಕಥೆ, ಚಿತ್ರಕಥೆ ತಿದ್ದಿ ತೀಡಿದ್ದಾರೆ. ಪೌರಾಣಿಕ ಕಥೆಯನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅದ್ಭುತವಾಗಿ ತೆರೆಮೇಲೆ ತರುವ ಪ್ರಯತ್ನ ನಡೀತಿದೆ. ಚಿತ್ರತಂಡದ ಜೊತೆಗೆ ಸಾಕಷ್ಟು ಗಣ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಹಂಪಿಗೆ ಹೊಂದಿಕೊಂಡಿರುವ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ ಎನ್ನುವುದು ಕೆಲವರ ವಾದ. ಇದೀಗ ಅದೇ ಹಂಪಿಯಲ್ಲಿ 'ಜೈ ಹನುಮಾನ್' ಚಿತ್ರಕ್ಕೆ ಚಾಲನೆ ಸಿಗುತ್ತಿರುವುದು ವಿಶೇಷ.
'ಕಾಂತಾರ'-2 ಬಳಿಕ ಮುಂದೇನು ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿ ಅವರನ್ನು ಕೇಳುತ್ತಿದ್ದಾರೆ. 'ಕಾಂತಾರ' ಬ್ಲಾಕ್ಬಸ್ಟರ್ ಹಿಟ್ ಆಗುತ್ತಿದ್ದಂತೆ ಒಪ್ಪಿಕೊಂಡಿದ್ದ ಬೇರೆ ಸಿನಿಮಾಗಳನ್ನು ಕೈಬಿಟ್ಟಿದ್ದರು. 'ಬೆಲ್ಬಾಟಂ' ಸಿನಿಮಾ ಮುಹೂರ್ತ ಆಗಿ ನಿಂತು ಹೋಗಿತ್ತು. 'ಬ್ಯಾಚುಲರ್ ಪಾರ್ಟಿ' ಚಿತ್ರದಿಂದಲೂ ಹೊರಬಂದಿದ್ದರು. ಮುಂದೆ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ರಿಷಬ್ ನಟಿಸಲಿದ್ದಾರೆ.
ಈಗಾಗಲೇ ಬಾಲಿವುಡ್ನಲ್ಲಿ ಶಿವಾಜಿ ಬಯೋಪಿಕ್ ಘೋಷಣೆಯಾಗಿದೆ. ಮರಾಠಾ ಸಾಮ್ರಾಟನಾಗಿ ರಿಷಬ್ ಶೆಟ್ಟಿ ನಟಿಸಬೇಕಿದೆ. ಇನ್ನು ಸಿತಾರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸಲು ರಿಷಬ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ರಾಜಮೌಳಿ ಶಿಷ್ಯ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 3 ವರ್ಷಗಳ ಕಾಲ 'ಕಾಂತಾರ' ಗುಂಗಿನಲ್ಲಿದ್ದ ರಿಷಬ್ ಈಗ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ 'ಜೈ ಹನುಮಾನ್' ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ತ್ರೇತಾಯುಗ ಹಾಗೂ ಕಲಿಯುಗದ ನಡುವೆ ಸೇತುವೆ ಕಟ್ಟಿ 'ಜೈ ಹನುಮಾನ್' ಚಿತ್ರಕ್ಕೆ ಕಾಲ್ಪನಿಕ ಕಥೆ ಸಿದ್ಧಪಡಿಸಲಾಗಿದೆ. ಕಲಿಯುಗಕ್ಕೆ ಬರುವ ಹನುಮಂತ ಏನೆಲ್ಲಾ ಲೀಲೆಗಳನ್ನು ತೋರಿಸುತ್ತಾನೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಕಡಿಮೆ ಬಜೆಟ್ನಲ್ಲಿ 'ಹನುಮಾನ್' ರೀತಿಯ ಅದ್ಭುತ ಚಿತ್ರವನ್ನು ಪ್ರಶಾಂತ್ ವರ್ಮಾ ತೆರೆಗೆ ತಂದಿದ್ದರು. ಇದೀಗ ಭಾರೀ ಬಜೆಟ್ನಲ್ಲಿ ಮ್ಯಾಜಿಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
ಚಿತ್ರೀಕರಣ ಮುಗಿದ ಬಳಿಕ 'ಜೈ ಹನುಮಾನ್' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆಯಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಬಹುದು. ಹನುಮಂತನ ಅವತಾರದಲ್ಲಿ ರಿಷಬ್ ಶೆಟ್ಟಿ ಅವರನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.


Click it and Unblock the Notifications











