'ಹನುಮಾನ್' ಚಿತ್ರದ ಆ ಪಾತ್ರದಲ್ಲಿ ರಿಷಬ್ ನಟಿಸ್ಬೇಕಿತ್ತು, ಸೀಕ್ವೆಲ್ನಲ್ಲಿ 'ಕಾಂತಾರ' ಶಿವ- ನಿರ್ದೇಶಕ
ಎಲ್ಲರ ನಿರೀಕ್ಷೆ ಮೀರಿ ತೆಲುಗಿನ 'ಹನುಮಾನ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಚಿತ್ರಕ್ಕೂ ಟಕ್ಕರ್ ಕೊಟ್ಟು ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ತೆಲುಗು ಮಾತ್ರವಲ್ಲದೇ ಹಿಂದಿ ವರ್ಷನ್ಗೂ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ವಿದೇಶಗಳಲ್ಲಿ ಸಿನಿಮಾ ಹಿಟ್ ಆಗಿದೆ. ಕರ್ನಾಟಕದಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ತೇಜ ಸಜ್ಜ ನಟನೆಯ 'ಹನುಮಾನ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಸಿನಿಮಾ ಸಂಚಲನ ಸೃಷ್ಟಿಸಿದೆ. ಯಾವುದೇ ಸ್ಟಾರ್ ನಟರಿಲ್ಲದೇ ಕೇಲವರ 30 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ 11 ದಿನಕ್ಕೆ 200 ಕೋಟಿ ರೂ. ಗಡಿ ದಾಟಿದೆ. 'ಗುಂಟೂರು ಖಾರಂ' ಸಿನಿಮಾ 170 ಕೋಟಿ ರೂ. ಮಾತ್ರ ಗಳಿಕೆ ಖಂಡಿರುವುದಾಗಿ ಹೇಳಲಾಗುತ್ತಿದೆ.

ತೆಲುಗಿನಲ್ಲಿ ಈ ವರ್ಷ ಸಂಕ್ರಾಂತಿಗೆ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿದ್ದವು. ಅದೇ ಕಾರಣಕ್ಕೆ 'ಹನುಮಾನ್' ಚಿತ್ರಕ್ಕೆ ಸರಿಯಾಗಿ ಸ್ಕ್ರೀನ್ಗಳು ಸಿಕ್ಕಿರಲಿಲ್ಲ. ಈಗ ಕಂಪ್ಲೀಟ್ ಚಿತ್ರಣ ಬದಲಾಗಿದೆ. 'ಗುಂಟೂರು ಖಾರಂ' ಸಿನಿಮಾ ಸ್ಕ್ರೀನ್ಗಳಲ್ಲಿ 'ಹನುಮಾನ್' ಆರ್ಭಟ ಶುರುವಾಗಿದೆ. ಸದ್ಯ ಸಿನಿಮಾ ಪ್ರಚಾರದ ಭಾಗವಾಗಿ ನಿರ್ದೇಶಕ ಪ್ರಶಾಂತ್ ವರ್ಮಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು ಎಂದಿದ್ದಾರೆ.
ಚಿತ್ರದಲ್ಲಿ ವಿಭೀಷಣನ ಪಾತ್ರವನ್ನು ತಮಿಳು ನಟ ಸಮುದ್ರಖನಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದರೆ ನಿರ್ದೇಶಕ ಪ್ರಶಾಂತ್ ವರ್ಮ ವಿಭೀಷಣನ ಪಾತ್ರವನ್ನು ಕನ್ನಡ ನಟ 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದರಂತೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

"ಮೊದಲು ನಾನು, 'ಹನುಮಾನ್' ಚಿತ್ರದ ವಿಭೀಷಣನ ಪಾತ್ರಕ್ಕೆ ರಿಷಬ್ ಶೆಟ್ಟಿ ಎಂದುಕೊಂಡಿದ್ದೆ. ಆದರೆ ಅವರು 'ಕಾಂತಾರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅವರು ಪಿವಿಸಿಯು (ಪ್ರಶಾಂತ್ ವರ್ಮ ಸಿನಿಮಾಟಿಕ್ ಯೂನಿವರ್ಸ್) ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ" ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ಈಗಾಗಲೇ ಈ ಸರಣಿಯ 2ನೇ ಸಿನಿಮಾ 'ಜೈ ಹನುಮಾನ್' ಘೋಷಣೆ ಆಗಿದೆ.
ಹೌದು ಪ್ರಶಾಂತ್ ವರ್ಮಾ ಹನುಮಂತನ ಪಾತ್ರದ ಸುತ್ತಾ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಪ್ಲ್ಯಾನ್ ಮಾಡಿದ್ದಾರೆ. ತೇಜ ಸಜ್ಜ ನಟನೆಯ 'ಹನುಮಾನ್' ಅದರ ಒಂದು ಸಣ್ಣ ಭಾಗ ಅಷ್ಟೇ. ಈ ಸರಣಿಯಲ್ಲಿ ಮತ್ತಷ್ಟು ದೊಡ್ಡ ಸಿನಿಮಾಗಳ ಬರಲಿವೆ. ಅದಕ್ಕಾಗಿ ಸ್ಟಾರ್ ನಟರನ್ನು ಅಪ್ರೋಚ್ ಮಾಡುತ್ತಿದ್ದಾರೆ. 'ಹನುಮಾನ್' ಸಕ್ಸಸ್ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಮುಂದೆ ದೊಡ್ಡ ಸಿನಿಮಾಗಳನ್ನು ಮಾಡಲು ಸ್ಟಾರ್ ನಟರನ್ನು ಕಾಸ್ಟ್ ಮಾಡಲು ಜೊತೆಗೆ ಭಾರೀ ಬಂಡವಾಳ ಸುರಿಯಲು ಇದು ಸಹಕಾರಿಯಾಗಿದೆ.
ರಿಷಬ್ ಶೆಟ್ಟಿ ಕೂಡ ಇತ್ತೀಚೆಗೆ 'ಹನುಮಾನ್' ಸಿನಿಮಾ ನೋಡಿ ಟ್ವೀಟ್ ಮಾಡಿದ್ದರು. "ಪ್ರಶಾಂತ್ ವರ್ಮಾ ಸ್ಟೋರಿ ಟೆಲ್ಲಿಂಗ್, ಫಿಲ್ಮ್ ಮೇಕಿಂಗ್ ಅದ್ಭುತವಾಗಿದೆ. ತೇಜ ಸಜ್ಜಾ ಪರ್ಫಾರ್ಮನ್ಸ್ ಬಹಳ ದಿನ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಿದೆ" ಎಂದು ಬರೆದುಕೊಂಡಿದ್ದರು.
ಸದ್ಯ ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 2022ರಲ್ಲಿ ಬಂದ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿ ಬಹಳ ಅದ್ಭುತವಾಗಿ ನಟಿಸಿ ಎಲ್ಲರ ಹುಬ್ಬೇರಿಸಿದ್ದರು. ಸಿನಿಮಾ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಸದ್ಯ ಚಿತ್ರದ ಪ್ರೀಕ್ವೆಲ್ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಈಗಾಗಲೇ ಮುಹೂರ್ತ ನೆರವೇರಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications











