ಹಂಪಿಯಲ್ಲಿ ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರಕ್ಕೆ ಚಾಲನೆ; ಮುಹೂರ್ತ ಸಮಾರಂಭದ ಚಿತ್ರಗಳು ಇಲ್ಲಿದೆ
ಅಂತೂ ಇಂತೂ ರಿಷಬ್ ಶೆಟ್ಟಿ ನಟನೆಯ 'ಜೈ ಹನುಮಾನ್' ಸೆಟ್ಟೇರಿದೆ. ಹಂಪಿಯಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಖ್ಯಾತ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಮಾರ್ಚ್ನಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ.
ಪತ್ನಿ ಪ್ರಗತಿ ಶೆಟ್ಟಿ ಸಮೇತ ರಿಷಬ್ ಶೆಟ್ಟಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಬಾಲಿವುಡ್ ಚಿತ್ರ ವಿತರಕ ಅನಿಲ್ ತದಾನಿ, ನಟ ತೇಜಾ ಸಜ್ಜಾ ಸೇರಿ ಹಲವರು ಚಿತ್ರದ ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಹನುಮನ ಜನ್ಮಸ್ಥಳ ಎಂದೇ ಭಕ್ತರು ಭಾವಿಸಿರುವ ಹಂಪಿಯ ಅಂಜನಾದ್ರಿ ಬೆಟ್ಟದಲ್ಲೇ 'ಜೈ ಹನುಮಾನ್' ಚಿತ್ರ ಪ್ರಾರಂಭಿಸಿರುವುದು ವಿಶೇಷ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ. ಉತ್ತರ ಭಾರತದ ರೈಟ್ಸ್ ಅನಿಲ್ ತದಾನಿ ಖರೀದಿಸುವುದು ಪಕ್ಕಾ ಆಗಿದೆ.

ಚಿತ್ರದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಎರಡು ವರ್ಷಗಳ ಹಿಂದೆ ತೇಜಾ ಸಜ್ಜಾ ನಟಿಸಿದ್ದ 'ಹನುಮಾನ್' ಸಿನಿಮಾ ಹಿಟ್ ಆಗಿತ್ತು. ಕಡಿಮೆ ಬಜೆಟ್ನಲ್ಲಿ ತಯಾರಾಗಿದ್ದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಷ್ಟು ಕಮ್ಮಿ ಬಜೆಟ್ನಲ್ಲಿ ಇಷ್ಟು ಅದ್ಭುತವಾಗಿ ಸಿನಿಮಾ ಮಾಡಬಹುದಾ ಎಂದು ಕೆಲವರು ಅಚ್ಚರಿಗೊಂಡಿದ್ದರು. ಆ ಮೂಲಕ ಪ್ರಶಾಂತ್ ವರ್ಮಾ ಕಮಾಲ್ ಮಾಡಿದ್ದರು. ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
'ಹನುಮಾನ್' ಚಿತ್ರಕ್ಕೂ ಈಗ ಸೆಟ್ಟೇರಿರುವ 'ಜೈ ಹನುಮಾನ್' ಚಿತ್ರಕ್ಕೂ ಲಿಂಕ್ ಇದೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನಲ್ಲೇ ಈ ಕಥೆಗಳು ಸೇರಿಕೊಳ್ಳಲಿದೆ. ಈ ಬಾರಿ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. ಪ್ರಗತಿ ಶೆಟ್ಟಿ ಈ ಚಿತ್ರಕ್ಕೂ ಕಾಸ್ಟ್ಯೂಮ್ ಡಿಸೈನ್ ಮಾಡುವ ಸಾಧ್ಯತೆಯಿದೆ. 'ಕಾಂತಾರ-1' ಬ್ಲಾಕ್ಬಸ್ಟರ್ ಹಿಟ್ ಬಳಿಕ ರಿಷಬ್ ಶೆಟ್ಟಿ ಕೊಂಚ ವಿಶ್ರಾಂತಿ ಪಡೆದಿದ್ದರು. ಇದೀಗ 'ಜೈ ಹನುಮಾನ್' ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಅಂಜನಾದ್ರಿ ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯನ್ನು 'ಹನುಮಾನ್' ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಆ ಊರಿನ ಯುವಕ ಹನುಮಂತು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರ್ತಾನೆ. ಒಮ್ಮೆ ಅಚಾನಕ್ ಆಗಿ ಆತನಿಗೆ ರುಧಿರ ಮಣಿ ಸಿಗುತ್ತದೆ. ಅದರಿಂದ ಸೂಪರ್ ಪವರ್ ಪಡೆಯುವ ಹನುಮಂತು ಮಾಡುವ ಚಮತ್ಕಾರಗಳೇ ಇನ್ನುಳಿದ ಕಥೆ. ಆದರೆ ಆ ಚಿತ್ರದಲ್ಲಿ ಆಂಜನೇಯನ ಪಾತ್ರವನ್ನು ಹೆಚ್ಚಾಗಿ ತೋರಿಸಿರಲಿಲ್ಲ. ಆತನ ಚಮತ್ಕಾರಗಳು ಮಜಾ ಕೊಟ್ಟಿತ್ತು. 'ಜೈ ಹನುಮಾನ್' ಚಿತ್ರದಲ್ಲಿ ನೇರವಾಗಿ ಆಂಜನೇಯನ ಎಂಟ್ರಿ ಆಗುತ್ತಿದೆ.
'ಹನುಮಾನ್' ಚಿತ್ರದ ಕೊನೆಗೆ ರಾಮನಿಗೆ ಆಂಜನೇಯ ಕೊಟ್ಟ ಮಾತೇನು? ಎನ್ನುವ ಕುತೂಹಲಕಾರಿ ಪ್ರಶ್ನೆ ಮೂಲಕ ಪಾರ್ಟ್-2 ಬಗ್ಗೆ ಕುತೂಹಲ ಮೂಡಿಸಲಾಗಿತ್ತು. ಆಗ ಯಾರು ಆಂಜನೇಯನಾಗಿ ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತತೆ ಇರಲಿಲ್ಲ. ಬಳಿಕ ರಿಷಬ್ ಶೆಟ್ಟಿಗೆ ಪ್ರಶಾಂತ್ ವರ್ಮಾ ಕಥೆ ಹೇಳಿ ಒಪ್ಪಿಸಿ ಸಿನಿಮಾ ಘೋಷಿಸಿದ್ದರು. ಇದೀಗ ಸಿನಿಮಾ ಸೆಟ್ಟೇರಿದೆ.
'ಜೈ ಹನುಮಾನ್' ಸಿನಿಮಾ ಕಥೆ ಸಂಪೂರ್ಣವಾಗಿ ಆಂಜನೇಯನ ಪಾತ್ರ ಅಂದ್ರೆ, ರಿಷಬ್ ಶೆಟ್ಟಿ ಸುತ್ತಾ ಸುತ್ತಲಿದೆ. ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ಮಾಡಿ ಚಿತ್ರತಂಡ ಗಮನ ಸೆಳೆದಿದೆ. ಎಂ. ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಮುಂದಿನ ವರ್ಷ ಅಕ್ಟೋಬರ್ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











