RRR ಮೇಲೆ ಜಗನ್ ಅವಕೃಪೆ? ಸಿಎಂ ಮನೆಗೆ ರಾಜಮೌಳಿ ಭೇಟಿ
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'RRR' ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ಬಹುದೊಡ್ಡ ಬಜೆಟ್ನ ಈ ಸಿನಿಮಾಕ್ಕೆ ಆಂಧ್ರ ಸರ್ಕಾರ ಆದೇಶ ತಲೆನೋವಾಗಿ ಪರಿಣಮಿಸಿದೆ. ಅದೇ ಕಾರಣದಿಂದ ನಿರ್ದೇಶಕ ರಾಜಮೌಳಿ ಹಾಗೂ ನಿರ್ಮಾಪಕ ಡಿವಿವಿ ದಯಾನಂದ್ ಇಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಆಂಧ್ರ ಸರ್ಕಾರವು ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ಇಳಿಸಿತ್ತು, ಇದು ತೆಲುಗು ಚಿತ್ರರಂಗದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಮೆಗಾಸ್ಟಾರ್ ಚಿರಂಜೀವಿ ಮಧ್ಯಸ್ಥಿಕೆ ಬಳಿಕ ದೊಡ್ಡ ಬಜೆಟ್ನ ಸಿನಿಮಾಗಳಿಗಷ್ಟೆ ನಿರ್ದಿಷ್ಟ ಮೊತ್ತದವರೆಗೆ ಟಿಕೆಟ್ ದರ ಏರಿಸಲು ಅವಕಾಶ ನೀಡಲಾಯ್ತು.
ಆದರೆ ಸರ್ಕಾರದ ಹೊಸ ಆದೇಶದ ಬಗ್ಗೆ ಸ್ಪಷ್ಟನೆ ಇಲ್ಲ ಹಾಗಾಗಿ ಈ ಬಗ್ಗೆ ಚರ್ಚೆ ನಡೆಸಲೆಂದೇ ನಿರ್ದೇಶಕ ರಾಜಮೌಳಿ ಹಾಗೂ 'RRR' ಸಿನಿಮಾದ ನಿರ್ಮಾಪಕ ಡಿವಿವಿ ದಯಾನಂದ್ ಅವರು ತಡಪೇಲಿ ನಿವಾಸದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಯಾವ ಯಾವ ವಿಷಯಗಳು ಚರ್ಚೆಯಾಗಿವೆ ಎಂಬ ಬಗ್ಗೆ ಬಹಿರಂಗಗೊಂಡಿಲ್ಲವಾದರೂ, ''ಸಿಎಂ ಅವರಿಂದ ನಮಗೆ ಹೃದಯಪೂರ್ವಕ ಸ್ವಾಗತ ದೊರಕಿತು. ಗೌರವಯುತವಾದ ಮಾತುಕತೆಗಳು ನಡೆದವು. 'RRR' ಚಿತ್ರತಂಡದಿಂದ ಮಾಡಲಾದ ಮನವಿಯನ್ನು ಗಮನಿಸುವುದಾಗಿ ಸಿಎಂ ಹೇಳಿದರು'' ಎಂದಷ್ಟೆ ಹೇಳಿದ್ದಾರೆ.
100 ಕೋಟಿಗೂ ಹೆಚ್ಚಿನ ಬಜೆಟ್ ಹೊಂದಿದ ಸಿನಿಮಾಗಳಿಗಾಗಿ ಆಂಧ್ರ ಸರ್ಕಾರವು ಪ್ರತ್ಯೇಕ ಆದೇಶ ಹೊರಡಿಸಿದೆ. ಈ ಹೊಸ ಆದೇಶದ ಬಗ್ಗೆಯೂ ತೆಲುಗು ಚಿತ್ರರಂಗಕ್ಕೆ ಪೂರ್ಣ ಸಮ್ಮತಿ ಇಲ್ಲ. ಇದೇ ಕಾರಣದಿಂದ ರಾಜಮೌಳಿ ಇಂದು ಸಿಎಂ ಅವರನ್ನು ಭೇಟಿಯಾಗಿದ್ದರು.
ತಿಂಗಳ ಹಿಂದೆ ನಟ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು ಅವರೊಟ್ಟಿಗೆ ರಾಜಮೌಳಿ ಸಹ ಜಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಿಎಂ ಅವರಿಗೆ ಸಿನಿಮಾ ರಂಗದ ಬಗ್ಗೆ ಇರುವ ಆಂತರಿಕ ಜ್ಞಾನವನ್ನು ಕೊಂಡಾಡಿದ್ದರು.
'RRR' ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ ಆಗಲಿದ್ದು, ಮಾರ್ಚ್ 24ರಂದು ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸುವ ಸಾಧ್ಯತೆ ಇದೆ. ಆದರೆ ಈ ಪ್ರೀಮಿಯರ್ ಶೋ ತೆಲಂಗಾಣ ರಾಜ್ಯದಲ್ಲಿ ಮಾತ್ರವೇ ಆಯೋಜನೆಗೊಳ್ಳಲಿದೆ. ಆಂಧ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಪ್ರೀಮಿಯರ್ ಶೋ, ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ಪ್ರದರ್ಶನ ಮಾಡುವಂತಿಲ್ಲ.
'RRR' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವು ಫೆಬ್ರವರಿ 19 ರಂದು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ಸಚಿವ ಸುಧಾಕರ್ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ.
'RRR' ಸಿನಿಮಾವು ಮಾರ್ಚ್ 25 ರಂದು ತೆರೆಗೆ ಬರಲಿದ್ದು, ಸಿನಿಮಾದಲ್ಲಿ ಜೂ ಎನ್ಟಿಆರ್, ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್, ಶ್ರೆಯಾ ಶಿರಿನ್ ಇನ್ನೂ ಹಲವರಿದ್ದಾರೆ. ಈ ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಜೀವನ ಕುರಿತಾದ ಕತೆಯನ್ನು ಒಳಗೊಂಡಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











