ಲಕ್ಷ್ಮೀದೇವಿಗೆ ಅವಮಾನ ಮಾಡಿದ ರಶ್ಮಿಕಾ ಮಂದಣ್ಣ? ತೆಲುಗು ರಾಜ್ಯದ ಸೊಸೆ ವಿರುದ್ಧ ಭುಗಿಲೆದ್ದ ಆಕ್ರೋಶ
ನಂಬಿಕೆ ತರ್ಕಕ್ಕೆ ನಿಲುಕದ್ದು. ಪ್ರತಿ ಧರ್ಮದಲ್ಲೂ ಅದರದ್ದೇ ಆದ ನಂಬಿಕೆಗಳಿವೆ. ಆದರೆ ಈಗೀಗ ಈ ನಂಬಿಕೆಯನ್ನು ಫ್ಯಾಷನ್ ಪ್ರಶ್ನೆ ಮಾಡುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದಕ್ಕೆ ಈ ಹಿಂದೆ ಹಲವಾರು ನಿದರ್ಶನಗಳು ಕೂಡ ಇವೆ. ಫ್ಯಾಷನ್ ಹೆಸರಿನಲ್ಲಿ ಹಲವರು ಇಲ್ಲಿ ದೇವರ ಭಾವ ಚಿತ್ರಗಳನ್ನು ಬಳಸಿಕೊಂಡು ವಿವಾದಕ್ಕೀಡಾಗಿದ್ದಾರೆ.
ಕೆಲವರಿಗೆ ಫ್ಯಾಷನ್ ಕೇವಲ ಕಲೆ ಮಾತ್ರ. ಆದರೆ ಹಲವರ ಪಾಲಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಷಯ. ಸದ್ಯ ರಶ್ಮಿಕಾ ಮಂದಣ್ಣ ಅವರ ವಿಚಾರದಲ್ಲಿ ಕೂಡ ಇಂತಹದ್ದೇ ಚರ್ಚೆ ನಡೆಯುತ್ತಿದೆ.

ಹೌದು. ಎಲ್ಲರಿಗೆ ಗೊತ್ತಿರುವಂತೆ.. ರಶ್ಮಿಕಾ ಮಂದಣ್ಣ ಈಗ ತೆಲುಗು ರಾಜ್ಯದ ಸೊಸೆ. ಮೊನ್ನೆ ಮೊನ್ನೆಯಷ್ಟೇ ಅದ್ದೂರಿಯಾಗಿ ವಿಜಯ್ ದೇವರಕೊಂಡ ಅವರ ಜೊತೆ ಸಪ್ತಪದಿಯನ್ನು ತುಳಿದಿದ್ದಾರೆ. ತಮ್ಮ ಸಂಭ್ರಮದ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆದರೆ ಹೀಗೆ ಹಂಚಿಕೊಂಡ ಮೆಹಂದಿ ಸಮಾರಂಭದ ಫೋಟೊ ಒಂದು ವಿವಾದಕ್ಕೀಡಾಗಿದೆ. ಹಲವರ ಕಣ್ಣನ್ನೂ ಕೆಂಪಾಗಿಸಿದೆ.
ಯಾಕೆಂದರೆ ಪ್ರಖ್ಯಾತ ಡಿಸೈನರ್ ಕರಣ್ ತೊರಾನಿ ಅವರ ವಿನ್ಯಾಸದಲ್ಲಿ ಅರಳಿರುವ ಈ ಕಾಸ್ಟೂಮ್ ಚೆಂದ ಇದೆ. ಆದರೆ ರಶ್ಮಿಕಾ ಅವರ ಈ ಮೆಹಂದಿ ಶಾಸ್ತ್ರದ ಸೀರೆಯಲ್ಲಿ ಲಕ್ಷ್ಮೀ ದೇವಿಯ ಚಿತ್ರ ಇದೆ. ಮಹಾಲಕ್ಷ್ಮಿಯ ಚಿತ್ರವನ್ನು ಅತ್ಯಂತ ಸುಂದರವಾಗಿ ಕಸೂತಿ ಮಾಡಲಾಗಿದೆ. ದಕ್ಷಿಣ ಭಾರತದ ತಂಜಾವೂರು ಶೈಲಿಯ ಕಲೆಯಿಂದ ಪ್ರೇರಣೆ ಪಡೆದು ಚಿತ್ರವನ್ನು ಬಿಡಿಸಲಾಗಿದೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ.. ಲಕ್ಷ್ಮೀ ದೇವಿಯ ಭಾವಚಿತ್ರ ರಶ್ಮಿಕಾ ಧರಿಸಿರುವ ಸೀರೆಯ ಕೆಳಭಾಗದಲ್ಲಿದೆ. ಸೊಂಟದ ಭಾಗದಲ್ಲಿದೆ. ಈ ವಿಚಾರ ಈಗ ಹಲವರನ್ನು ಕೆರಳಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಲಕ್ಷ್ಮೀ ದೇವಿಗೆ ಮಾಡಲಾದ ಅವಮಾನ ಇದು ಎಂದು ಕಿಡಿ ಕಾರುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ತೀವೃ ಆಕ್ರೋಶ ವ್ತಕ್ತವಾಗುತ್ತಿದ್ದು, ದೇವರು ಮತ್ತು ದೇವತೆಗಳು ನಿಮ್ಮ ಉಡುಪಿಗಾಗಿ ಇರುವವರಲ್ಲ. ಇದೊಂದು ಅತ್ಯಂತ ಕೆಟ್ಟ ಡ್ರೆಸ್ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ದೇವಿಯ ಚಿತ್ರವಿರುವ ಬಟ್ಟೆಯನ್ನು ಕಾಲಿನ ಹತ್ತಿರ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುವುದು ದೇವತೆಗೆ ಮಾಡುವ ಅಗೌರವ ಎಂದು ಮತ್ತೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ದೇವತೆಗಳು ಪೂಜಾ ಮಂದಿರದಲ್ಲಿ ಇರಬೇಕೇ ಹೊರತು ಉಡುಗೆಯ ಮೇಲಲ್ಲ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದು, ಬಟ್ಟೆಯ ಮೇಲೆ ದೇವರ ಚಿತ್ರಗಳನ್ನು ಬಳಸುವುದು ಸಂಪ್ರದಾಯಕ್ಕೆ ವಿರುದ್ಧ ಮತ್ತು ಇದು ದೇವರಿಗೆ ಮಾಡುವ ಅಪಮಾನ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಹಲವರು ರಶ್ಮಿಕಾ ಮಂದಣ್ಣ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರ ಮುಂದೆ ವಿವಾದವಾಗುತ್ತೆ ಎನ್ನುವುದು ವಸ್ತ್ರ ವಿನ್ಯಾಸಕ ಕರಣ್ ತೊರಾನಿ ಅವರಿಗೆ ಮೊದಲೇ ಗೊತ್ತಿತ್ತಾ..? ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ಈ ವಿಚಾರಕ್ಕೆ ಫೋಟೊಗಳನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಕರಣ್ ತೊರಾನಿ ಉಡುಗೆಯು ಕೇವಲ ಬಟ್ಟೆಯಲ್ಲ, ಅದೊಂದು ಕಲಾಕೃತಿ. ಭಾರತೀಯ ಸಂಸ್ಕೃತಿಯಲ್ಲಿ ದೈವತ್ವವನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಕಾಣಲಾಗುತ್ತದೆ. ಹೀಗಾಗಿ ವಿವಾಹದಂತಹ ಪವಿತ್ರ ಸಂಭ್ರಮದಲ್ಲಿ ದೇವಿಯ ಚಿತ್ರವಿರುವ ಉಡುಗೆ ಧರಿಸುವುದು ಶುಭ ಸಂಕೇತ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಮತ್ತು ಫ್ಯಾಷನ್ ಪ್ರಿಯರು ದಕ್ಷಿಣ ಭಾರತದ ಸಂಪ್ರದಾಯದಲ್ಲಿ ರೇಷ್ಮೆ ಸೀರೆಗಳ ಮೇಲೆ ದೇವರ ಚಿತ್ರಗಳನ್ನು ಬಳಸುವುದು ಶತಮಾನಗಳಿಂದ ನಡೆದು ಬಂದಿರುವ ಪದ್ಧತಿ ಎಂದು ವಾದ ಮಾಡುತ್ತಿದ್ದಾರೆ. ದೇವಿಯ ಮೇಲಿರುವ ಭಕ್ತಿಯ ಪ್ರತೀಕವೇ ಹೊರತು ಅಪಮಾನವಲ್ಲ ಎಂದು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಪರ ಬೆಂಬಲದ ಧ್ವಜ ಹಾರಿಸುತ್ತಿದ್ದಾರೆ. ಆದರೂ ಕೂಡ ಆಕ್ರೋಶ ಮಾತ್ರ ಕಡಿಮೆಯಾಗ್ತಿಲ್ಲ. ಕ್ರಿಯೇಟಿವ್ ಫ್ರೀಡಂ ಮತ್ತು ಧಾರ್ಮಿಕ ನಂಬಿಕೆ ನಡುವಿನ ಸಂಘರ್ಷ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ.


Click it and Unblock the Notifications











