ಕಮರ್ಶಿಯಲ್ ಸಿನಿಮಾಗಳ ಬಗ್ಗೆ ಸದ್ಗುರು ಆಸಕ್ತಿಕರ ಅಭಿಪ್ರಾಯ
ಸದ್ಗುರು ನಾಮಾಂಕಿತ ಜಗ್ಗಿ ವಾಸುದೇವ್ ಭಾರತದ ಅತಿ ಹೆಚ್ಚು ಜನಪ್ರಿಯ ಆಧ್ಯಾತ್ಮಿಕ ಗುರುಗಳಲ್ಲಿ ಪ್ರಮುಖರು. ವಿದೇಶಗಳಲ್ಲೂ ಅನುಯಾಯಿಗಳನ್ನು ಹೊಂದಿರುವ ಸದ್ಗುರು ಇಶಾ ಫೌಂಡೇಶನ್ನ ಸಂಸ್ಥಾಪಕರೂ ಹೌದು.
Recommended Video
ಸದ್ಗುರು ತಮ್ಮ ಸತ್ಸಂಗಗಳಲ್ಲಿ ದೇಶದ ಸೆಲೆಬ್ರಿಟಿಗಳೊಟ್ಟಿಗೆ ಸಂವಾದ ನಡೆಸುತ್ತಾರೆ. ಕ್ರೀಡೆ, ಸಿನಿಮಾ, ಉದ್ಯಮ, ವಿದ್ಯಾರ್ಥಿಗಳು, ಪತ್ರಕರ್ತರು, ರಾಜಕಾರಣಿಗಳು ಹೀಗೆ ಹಲವಾರು ವಿಭಾಗದಲ್ಲಿ ಜನಪ್ರಿಯತೆ ಗಳಿಸಿರುವವರು ಸದ್ಗುರು ಅವರೊಟ್ಟಿಗೆ ಸಂವಾದದಲ್ಲಿ ಭಾಗವಹಿಸಿದ್ದಾರೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ.
ಸದ್ಗುರು, ಯಾವುದೇ ವಿಷಯವಾದರೂ, ಪ್ರಶ್ನೆಗಳಿಗಾದರೂ ಹೊಸದೇ ಹೊಳಹೊಂದನ್ನು ಕೊಡುವ ಮೂಲಕ ಆಸಕ್ತಿಕರವಾಗಿ ಮಾತನಾಡುತ್ತಾ ಹೋಗುತ್ತಾರೆ. ಅವರ ಮಾತು ಕೇಳಲೆಂದೇ ದೂರ-ದೂರದಿಂದ ಜನ ಕಾರ್ಯಕ್ರಮಕ್ಕೆ ಬರುತ್ತಾರೆ. ಅವರ ಮಾತಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಹ ಸಖತ್ ವೈರಲ್ ಆಗುತ್ತವೆ.
ತೆಲುಗಿನ ಖ್ಯಾತ ನಾಯಕ ನಟ ನಾನಿ ಸದ್ಗುರು ಅವರೊಟ್ಟಿಗೆ ಕೆಲವು ತಿಂಗಳ ಹಿಂದೆ ಮಾತನಾಡಿದ್ದರು. ಅಂದು ಕಮರ್ಶಿಯಲ್ ಸಿನಿಮಾಗಳ ಕುರಿತಂತೆ ಪ್ರಶ್ನೆಯನ್ನು ಸದ್ಗುರುಗೆ ಕೇಳಲಾಯಿತು. ಅದಕ್ಕೆ ಅವರು ನೀಡಿರುವ ಉತ್ತರ ಆಸಕ್ತಿಕರವಾಗಿದೆ.

ಕಮರ್ಶಿಯಲ್ ಸಿನಿಮಾಗಳ ಬಗ್ಗೆ ಜನರ ಪ್ರಶ್ನೆ
'ಕಮರ್ಶಿಯಲ್ ಸಿನಿಮಾ ಹೆಚ್ಚು ಜನರನ್ನು ತಲುಪುತ್ತದೆ. ಹಾಗಿದ್ದ ಮೇಲೆ ಅಧ್ಯಾತ್ಮ ಹರಡಲು ಸಿನಿಮಾಗಳನ್ನೇಕೆ ಬಳಸಿಕೊಳ್ಳಬಾರದು? ಎಂದು ಪ್ರೇಕ್ಷಕರೊಬ್ಬರು ಸದ್ಗುರು ಅವರನ್ನು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಅವರು, ಹೆಚ್ಚು ಜನ ಸಿನಿಮಾವನ್ನು ನೋಡಿದರಷ್ಟೆ ಅದು ಕಮರ್ಶಿಯಲ್ ಎನಿಸಿಕೊಳ್ಳುತ್ತದೆ ಅಲ್ಲವೆ? ಎಂಬ ಪ್ರಶ್ನೆಯೊಂದಿಗೆ ಉತ್ತರ ಮುಂದುವರೆಸುತ್ತಾರೆ.

'ಅಧ್ಯಾತ್ಮದ ಬಗೆಗಿನ ಸಿನಿಮಾ ನೋಡುತ್ತಾರಾ ಜನ?'
ಸಿನಿಮಾಗಳು ಹಿಟ್ ಆಗಬೇಕೆಂದರೆ ಅವರು 'ಕಮರ್ಶಿಯಲಿ ಸಕ್ಸಸ್' ಆಗಬೇಕು. ಹಾಗಾಗಬೇಕು ಎಂದರೆ ಜನರು ಸಿನಿಮಾಗಳನ್ನು ಹೆಚ್ಚು ಸಂಖ್ಯೆಯಲ್ಲಿ ಬಂದು ನೋಡಬೇಕು. ಅಧ್ಯಾತ್ಮದ ಬಗ್ಗೆ ಸಿನಿಮಾ ಮಾಡಿದರೆ ಜನರು ಬರುತ್ತಾರೆಯೇ ಎಂದು ಮರುಪ್ರಶ್ನೆ ಎಸೆದು ವಿಷಯದ ಆಳಕ್ಕಿಳಿಯುತ್ತಾರೆ ಸದ್ಗುರು.

70 ಶೇ ಡಾಟಾ ಪಾರ್ನ್ ನೋಡಲು ಬಳಕೆಯಾಗುತ್ತದೆ!
ಶೇ.70 ರಷ್ಟು ಡಾಟಾ ಬಳಕೆ ಪಾರ್ನ್ ನೋಡಲು ಬಳಕೆಯಾಗುತ್ತದೆ ಎಂದು ಒಬ್ಬ ತಜ್ಞರಿಂದ ನನಗೆ ತಿಳಿಯಿತು. ಇಂಟರ್ನೆಟ್ ಅನ್ನು ಶಸ್ತ್ರಾಸ್ತ್ರ ಮಾರಾಟ, ಮಹಿಳೆ, ಮಕ್ಕಳ ಮಾರಾಟಕ್ಕೆಲ್ಲಾ ಬಳಸಲಾಗುತ್ತದೆ ಎಂಬುದು ಗೊತ್ತಾಯಿತು. ಜೊತೆಗೆ ನನಗೆ ಅಂತರ್ಜಾಲದ ವ್ಯಾಪ್ತಿ, ಶಕ್ತಿಯ ಬಗ್ಗೆಯೂ ಗೊತ್ತಾಯಿತು. ಆಗಲೇ ನಾನು ಈ ಇಂಟರ್ನೆಟ್ ಪ್ರಪಂಚಕ್ಕೆ ಬಂದೆ. ಪಾರ್ನ್ ನೋಡುತ್ತಿರುವಾಗಲೂ ಸದ್ಗುರುವಿನ ವಿಡಿಯೋ ಮಧ್ಯದಲ್ಲಿ ಬಂದು ಬಿಡುತ್ತದೆ ಈಗ ಎಂದು ನಕ್ಕರು ಸದ್ಗುರು.

'ಅಧ್ಯಾತ್ಮದ ಬಗ್ಗೆ ಇವರು ಸಿನಿಮಾ ಮಾಡ್ತಾರಾ?
ಮರಳಿ ಮೂಲ ಪ್ರಶ್ನೆಗೆ ಬಂದ ಸದ್ಗುರು. ಪಕ್ಕದಲ್ಲಿ ಕುಳಿತಿದ್ದ ಸ್ಟಾರ್ ನಟ ನಾನಿಯನ್ನು ಕುರಿತು, ಈ ನ್ಯಾಚುರಲ್ ಸ್ಟಾರ್ ಅಧ್ಯಾತ್ಮದ ಬಗ್ಗೆ ಸಿನಿಮಾ ಮಾಡ್ತಾರಾ? ಎಂದು ಕಾಲೆಳೆಯುತ್ತಾರೆ. ಮುಖ್ಯವಾಹಿನಿ ನಟರೇ ಇಂದು ಅಧ್ಯಾತ್ಮದ ಬಗ್ಗೆ ಸಿನಿಮಾ ಮಾಡಲು ಒಪ್ಪುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾರೆ ಸದ್ಗುರು.

ಸದ್ಗುರು ಜೀವನ ಆಧಾರಿತ ಸಿನಿಮಾ ಮಾಡ್ತೀನಿ: ನಾನಿ
ಆದರೆ ಸದ್ಗುರು ಪ್ರಶ್ನೆಗೆ ಚುರುಕಾಗಿಯೇ ಉತ್ತರಿಸುವ ನಾನಿ, 'ಸದ್ಗುರು ಜೀವನ ಆಧರಿಸಿದ ಸಿನಿಮಾ ಬೇಕಾದರೆ ನಾನು ಮಾಡ್ತೀನಿ, ಆ ಸಿನಿಮಾದ ಕೊನೆಯಲ್ಲಿ ಸದ್ಗುರು ಸಹ ಬರುತ್ತಾರೆ' ಎನ್ನುತ್ತಾರೆ. ಜನರಿಂದ ಜೋರು ಕರತಾಡನ. ಆದರೆ ಸದ್ಗುರು, 'ಅಯ್ಯೋ ಬೇಡಪ್ಪ' ಎಂಬಂತೆ ಭಾವ ಪ್ರಕಟಿಸಿ ನಕ್ಕು ಸುಮ್ಮನಾಗುತ್ತಾರೆ.

ಎಲ್ಲ ಸಾಧನವನ್ನು ಮಾನವನ ಬದಲಾವಣೆಗೆ ಬಳಸಬೇಕು
ಅಂತಿಮವಾಗಿ, ಪ್ರಸ್ತುತ ಲಭ್ಯವಿರುವ ಎಲ್ಲಾ ಸಂಪರ್ಕ ಸಾಧನ, ಸಿನಿಮಾ, ಅಂತರ್ಜಾಲ, ಸಾಮಾಜಿಕ ಜಾಲತಾಣ, ಟಿವಿ ಎಲ್ಲವನ್ನೂ ನಾವು ಮಾನವನ ಪರಿವರ್ತನೆಗೆ ಬಳಸಬೇಕು. ಪ್ರಸ್ತುತ ಜಗತ್ತಿಗೆ ಇರುವ ಸಮಸ್ಯೆ ಮಾನವ ಒಬ್ಬನೇ, ಹಾಗಾಗಿ ಲಭ್ಯವಿರುವ ಎಲ್ಲವನ್ನೂ ಬಳಸಿಕೊಂಡು ಮಾನವನನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಸದ್ಗುರು.


Click it and Unblock the Notifications











