ಪ್ರಭಾಸ್- ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯವಿದೆ ಎಂದವರಿಗೆ ಲಿಖಿತಾ ರೆಡ್ಡಿ ಗುದ್ದು!
ಚಿತ್ರರಂಗದಲ್ಲಿ ವದಂತಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎನ್ನುವುದು ಗೊತ್ತೇ ಆಗಲ್ಲ. ಸೋಶಿಯಲ್ ಮೀಡಿಯಾ ಬಂದಮೇಲೆ ಅಂತಹ ಅಂತೆ ಕಂತೆ ಸುದ್ದಿಗಳ ಹರಿವು ಹೆಚ್ಚಾಗಿಬಿಟ್ಟಿದೆ. ಇತ್ತೀಚೆಗೆ 'ಸಲಾರ್-2' ಸಿನಿಮಾ ನಿಂತೇ ಹೋಯ್ತು ಎಂದು ಟಾಲಿವುಡ್ನಲ್ಲಿ ಗುಲ್ಲಾಗಿತ್ತು. ಇದೀಗ ಚಿತ್ರತಂಡ ಅದಕ್ಕೆ ಸ್ಪಷ್ಟನೆ ನೀಡಿದೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿದೆ. ಆಗಸ್ಟ್ ತಿಂಗಳಲ್ಲೇ ಜ್ಯೂ. ಎನ್ಟಿಆರ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ. ಬಹಳ ದಿನಗಳಿಂದ ಈ ಸಿನಿಮಾ ತಡವಾಗುತಿತ್ತು. ಹಾಗಾಗಿ 'ಸಲಾರ್-2' ಬಿಟ್ಟು ಈ ಸಿನಿಮಾ ಆರಂಭಿಸಲು ನೀಲ್ ಮುಂದಾಗಿದ್ದಾರೆ.

ತಾರಕ್ ಅಭಿಮಾನಿಗಳಂತೂ NTR31 ಸಿನಿಮಾ ಶೀಘ್ರದಲ್ಲೇ ಶುರು ಎನ್ನುವ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ. ಇದರ ನಡುವೆ 'ಸಲಾರ್-2' ಯಾವಾಗ ಎಂದು ಡಾರ್ಲಿಂಗ್ಸ್ ಬೇಸರಗೊಂಡಿದ್ದಾರೆ. ಆದರೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ನಡುವೆ ಎಲ್ಲವೂ ಸರಿಯಿಲ್ಲ. ಕೆಲ ಭಿನ್ನಾಭಿಪ್ರಾಯಗಳಿಂದ 'ಸಲಾರ್' ಸೀಕ್ವೆಲ್ ನಿಂತು ಹೋಗಿದೆ ಎನ್ನುವ ಸುದ್ದಿ ಕೆಲ ತೆಲುಗು ವೆಬ್ಸೈಟ್ಗಳಲ್ಲಿ ಪ್ರಕಟವಾಗಿತ್ತು. ಇದು ವೈರಲ್ ಆಗಿತ್ತು.
ಕೊನೆಗೂ 'ಸಲಾರ್-2' ಸಿನಿಮಾ ನಿಂತು ಹೋಯ್ತು ಎನ್ನುವ ವದಂತಿ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಶೂಟಿಂಗ್ ಕ್ಲಿಕ್ಕಿಸಿದ ಫೋಟೊವನ್ನು 'ಸಲಾರ್' ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಲಾಗಿದೆ. "ಅವರು ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ" ಎಂದು ಕ್ಯಾಪ್ಷನ್ ಕೊಡಲಾಗಿದೆ. ಇದನ್ನು ನೋಡಿ ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಸಲಾರ್'-2 ಪಕ್ಕಾ ಎಂದು ಸಂಭ್ರಮಿಸುತ್ತಿದ್ದಾರೆ.
ಪ್ರಭಾಸ್- ನೀಲ್ ನಡುವೆ ಭಿನ್ನಾಭಿಪ್ರಾಯವಿದೆ, 'ಸಲಾರ್-2' ಸಿನಿಮಾ ನಿಂತೇ ಹೋಯ್ತು ಎನ್ನುವ ವದಂತಿಗಳ ಬಗ್ಗೆ ಚಿತ್ರತಂಡ ನಗುತ್ತಿದೆ ಎನ್ನುವಂತೆ ಈ ಪೋಸ್ಟ್ ಮಾಡಲಾಗಿದೆ. ಇದೇ ಪೋಸ್ಟ್ ಅನ್ನು ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. "ಈ ಫೋಟೊ ನೋಡಿ ನಿಮಗೆ ಏನಾದರೂ ಭಿನ್ನಾಭಿಪ್ರಾಯ ಕಾಣಿಸ್ತಿದ್ಯಾ?" ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಪ್ರಭಾಸ್ ಅವರ ದೊಡ್ಡ ಅಭಿಮಾನಿ ಲಿಖಿತಾ ರೆಡ್ಡಿ.
ಲಿಖಿತಾ ರೆಡ್ಡಿ ಇನ್ಸ್ಟಾ ಸ್ಟೋರಿ ಸ್ಕ್ರೀನ್ ಶಾಟ್ ತೆಗೆದು ಪ್ರಭಾಸ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'KGF' ಸರಣಿ ಬಳಿಕ ಪ್ರಶಾಂತ್ ನೀಲ್ ತೆಲುಗು ನಟ ಪ್ರಭಾಸ್ ಜೊತೆ ಕೈ ಜೋಡಿಸಿದ್ದರು. ತಮ್ಮದೇ 'ಉಗ್ರಂ' ಕಥೆಯನ್ನು ದೊಡ್ಡದಾಗಿ 2 ಭಾಗವಾಗಿ ಕಟ್ಟಿಕೊಡಲು ಮುಂದಾದರು. ಮೊದಲ ಭಾಗ ಕಳೆದ ವರ್ಷ ಡಿಸೆಂಬರ್ 22ಕ್ಕೆ ತೆರೆಗೆ ಬಂದಿತ್ತು. ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಎದುರು ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಅರ್ಧ ಕಥೆ ಮಾತ್ರ ಹೇಳಲಾಗಿದೆ. ಇನ್ನುಳಿದ ಕಥೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಕನ್ನಡದಲ್ಲಿ ಅಗಸ್ತ್ಯ ಹಾಗೂ ಬಾಲ ನಡುವಿನ ಸ್ನೇಹ ಹಾಗೂ ವೈರತ್ವ ಅಲ್ಲಿ ದೇವ ಹಾಗೂ ವರದರಾಜ್ ಮನ್ನಾರ್ ನಡುವೆ ಕಟ್ಟಿಕೊಡಲಾಗಿದೆ. ಮುಗೋರ್ನಲ್ಲಿ ನಡೆದಿದ್ದ 'ಉಗ್ರಂ' ಕಥೆ 'ಸಲಾರ್' ಚಿತ್ರದಲ್ಲಿ ಖಾನ್ಸರ್ ಪ್ರಪಂಚಕ್ಕೆ ಶಿಫ್ಟ್ ಆಗಿತ್ತು. ಕನ್ನಡ ಪ್ರೇಕ್ಷಕರಿಗೆ 'ಸಲಾರ್' ಅಷ್ಟಾಗಿ ರುಚಿಸಲಿಲ್ಲ. ಆದರೆ ಪ್ರಭಾಸ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿತ್ತು. 'KGF'-2 ರೀತಿಯಲ್ಲೇ 'ಸಲಾರ್'-2ಗೂ ಒಂದು ದೊಡ್ಡ ವೇದಿಕೆ ಸಿದ್ಧಪಡಿಸಿಕೊಳ್ಳಲಾಗಿದೆ. ಪಾರ್ಟ್-2 ಹೇಗಿರುತ್ತೋ ಎನ್ನುವ ಕುತೂಹಲ ಹುಟ್ಟುಹಾಕಲಾಗಿದೆ.
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್ ಕಡೆ ಮುಖ ಮಾಡಿದ್ದಾರೆ. ಆದಷ್ಟು ಬೇಗ ಬೇರೆ ಕಮೀಟ್ಮೆಂಟ್ಸ್ ಮುಗಿಸಿ ಮತ್ತೆ ಖಾನ್ಸರ್ ಕೋಟೆಗೆ ಎಂಟ್ರಿ ಕೊಡಲಿದ್ದಾರೆ. ಆದರೆ ಅದಕ್ಕೆ ಕೊಂಚ ಸಮಯ ಬೇಕಾಗಬಹುದು.


Click it and Unblock the Notifications











