'ಸಲಾರ್' 'ಕೆಜಿಎಫ್' ಚಿತ್ರವನ್ನೂ ಮೀರಿಸಲಿದೆ, ಇದು ಪ್ರಶಾಂತ್ ನೀಲ್ 'ಗೇಮ್ ಆಫ್ ಥ್ರೋನ್ಸ್'; ಸಲಾರ್ ನಟಿಯ ವಿಶ್ವಾಸ!
ಬಾಹುಬಲಿ ಚಿತ್ರ ಸರಣಿಯ ಮೂಲಕ ಬೃಹತ್ ದಿಗ್ವಿಜಯ ಸಾಧಿಸಿದ ರೆಬೆಲ್ ಸ್ಟಾರ್ ಪ್ರಭಾಸ್ ಬಳಿಕ ನಟಿಸಿದ ಯಾವುದೇ ಚಿತ್ರದಲ್ಲಿಯೂ ಸಹ ಸ್ಪಷ್ಟ ಗೆಲುವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಳೆದ ಶುಕ್ರವಾರ ( ಜೂನ್ 16 ) ಬಿಡುಗಡೆಗೊಂಡ ಆದಿಪುರುಷ್ ಸಹ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಹಿನ್ನಡೆ ಅನುಭವಿಸಿದ್ದು, ಈ ಚಿತ್ರದ ಮೂಲಕವಾದರೂ ಪ್ರಭಾಸ್ ಗೆಲುವಿನ ಹಾದಿಗೆ ಮರಳಲಿ ಎಂದು ಎದುರು ನೋಡುತ್ತಿದ್ದವರಿಗೆ ಮತ್ತೊಮ್ಮೆ ಬೇಸರವಾಗಿದೆ.
ಹೌದು, ಆದಿಪುರುಷ್ ಚಿತ್ರ ಸಹ ನಿರೀಕ್ಷಿಸಿದ ಗೆಲುವನ್ನು ಪಡೆಯುವಲ್ಲಿ ವಿಫಲವಾಗಿದ್ದು, ಸಾಹೋ ಹಾಗೂ ರಾಧೆ ಶ್ಯಾಮ್ ಬಳಿಕ ಪ್ರಭಾಸ್ ಹಿನ್ನಡೆ ಅನುಭವಿಸಿರುವ ಸತತ ಮೂರನೇ ಚಿತ್ರ ಇದಾಗಿದೆ. ಹೀಗೆ ಪ್ರಭಾಸ್ ನಟನೆಯ ಚಿತ್ರಗಳು ಸತತವಾಗಿ ಸೋಲನ್ನು ಅನುಭವಿಸಿರುವ ಕಾರಣ ಇದೀಗ ಎಲ್ಲರ ಚಿತ್ತ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದತ್ತ ಇದೆ.

ಇನ್ನು ಈ ಸಲಾರ್ ಚಿತ್ರ ಇದೇ ಸೆಪ್ಟೆಂಬರ್ 28ರಂದು ಬಿಡುಗಡೆಗೊಳ್ಳಲಿದ್ದು, ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸತತವಾಗಿ ಸೋತಿರುವ ತಮ್ಮ ನೆಚ್ಚಿನ ನಟನಿಗೆ ಈ ಚಿತ್ರವೇ ಗೆಲುವನ್ನು ತಂದು ಕೊಡಬೇಕು ಎಂದು ಪ್ರಭಾಸ್ ಫ್ಯಾನ್ಸ್ ಒಂದೆಡೆ ಕೋರಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಪ್ರತಿ ಬಾರಿಯೂ ದೊಡ್ಡ ಮಟ್ಟದ ವಿಶ್ವಾಸವನ್ನೇ ವ್ಯಕ್ತಪಡಿಸುತ್ತಾ ಬಂದಿದೆ.
ಈ ಸಾಲಿಗೆ ಇದೀಗ ಶ್ರೀಯಾ ರೆಡ್ಡಿ ಸಹ ಸೇರಿಕೊಂಡಿದ್ದಾರೆ. ಹೌದು, ಮೂಲತಃ ತಮಿಳು ನಟಿಯಾಗಿರುವ ಶ್ರೀಯಾ ರೆಡ್ಡಿ ಸಹ ಸಲಾರ್ ಚಿತ್ರದಲ್ಲಿ ನಟಿಸಿದ್ದು ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಸಲಾರ್ ಚಿತ್ರದ ಬಗ್ಗೆ ಮಾತನಾಡಿ ದೊಡ್ಡ ಮಟ್ಟದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾಗ್ಲಿಟ್ಸ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಶ್ರೀಯಾ ರೆಡ್ಡಿ "ಸಲಾರ್ ಕೆಜಿಎಫ್ಗಿಂತ ಚೆನ್ನಾಗಿರಲಿದೆ. ಚಿತ್ರ ನಿಮ್ಮ ತಲೆ ಕೆಡುವ ಹಾಗೆ ಇರಲಿದೆ. ಇದು ನೀವು ಹಿಂದೆಂದೂ ನೋಡಿರದಂತಹ ಸಿನಿಮಾ. ಪ್ರಶಾಂತ್ ನೀಲ್ ಸರ್ ಗೇಮ್ಸ್ ಆಫ್ ಥ್ರೋನ್ಸ್ ರೀತಿ ಒಂದು ಸಿನಿಮ್ಯಾಟಿಕ್ ವರ್ಲ್ಡ್ ಸೃಷ್ಟಿಸಿದ್ದಾರೆ. ಈ ಪ್ರಪಂಚ ನಮ್ಮ ಪ್ರಪಂಚದ ಹಾಗೆ ಇರದು. ಬೇರೆಯದ್ದೇ ವಿಭಿನ್ನ ಪ್ರಪಂಚವದು. ಆ ಪ್ರಪಂಚದಲ್ಲಿ ಶಕ್ತಿಶಾಲಿ ಪ್ರಭಾಸ್. ಪ್ರಭಾಸ್ ಹಿಂದಿನ ಚಿತ್ರಗಳ ಜತೆ ಸಲಾರ್ ಯಾವುದೇ ಹೋಲಿಕೆಯನ್ನು ಹೊಂದಿಲ್ಲ. ಪ್ರತಿ ನಿಮಿಷ ಹಾಗೂ ಪ್ರತಿ ಸೆಕೆಂಡ್ ಕೂಡ ನಿಮ್ಮ ತಲೆಯನ್ನು ಕೆಡಿಸಲಿದೆ" ಎಂದು ಹೇಳಿಕೊಂಡಿದ್ದಾರೆ.
ಒಂದೆಡೆ ಪ್ರಭಾಸ್ ನಟನೆಯ ಸಾಲು ಸಾಲು ಚಿತ್ರಗಳು ಸೋತಿರುವ ಕಾರಣ ಸಲಾರ್ ಮೇಲೆ ಸಿನಿ ರಸಿಕರಿಗೆ ಹಾಗೂ ಪ್ರಭಾಸ್ ಫ್ಯಾನ್ಸ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದರೆ, ಮತ್ತೊಂದೆಡೆ ಇದೇ ನಿರೀಕ್ಷೆ ಪ್ರಶಾಂತ್ ನೀಲ್ ಮೇಲೆ ಒತ್ತಡ ಹೆಚ್ಚಾಗಿದೆ. ಚಿತ್ರವನ್ನು ಖಡಾಖಂಡಿತವಾಗಿ ಚೆನ್ನಾಗಿ ಮಾಡಿ ಪ್ರಭಾಸ್ ಫ್ಯಾನ್ಸ್ ಹಾಗೂ ಸಿನಿ ರಸಿಕರನ್ನು ಮೆಚ್ಚಿಸಲೇಬೇಕಾದ ಒತ್ತಡ ಪ್ರಶಾಂತ್ ನೀಲ್ ಹೆಗಲೇರಿದೆ. ಆದರೆ ಉಗ್ರಂ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ರೀತಿಯ ಮಾಸ್ಟರ್ ಪೀಸ್ಗಳನ್ನು ನಿರ್ದೇಶಿಸಿರುವ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಮೂಲಕ ಸಹ ಬೃಹತ್ ಹಿಟ್ ಬಾರಿಸುವುದು ಖಚಿತ ಎಂದು ವಿಶ್ವಾಸ ಇಟ್ಟುಕೊಳ್ಳಬಹುದಾಗಿದೆ.


Click it and Unblock the Notifications











