ಅವಹೇಳನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ ಸಮಂತಾ
ನಟಿ ಸಮಂತಾ ಖಾಸಗಿ ಬದುಕು ಕೆಲವು ದಿನಗಳಿಂದೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಯ್ತು.
ಸಮಂತಾ-ನಾಗಚೈತನ್ಯ ವಿಚ್ಛೇಧನದಿಂದಾಗಿ ಸಮಂತಾರ ಖಾಸಗಿ ಜೀವನದ ಬಗ್ಗೆ ಹಲವು ಮಾಧ್ಯಮಗಳು ಹಲವು ಗಾಳಿ ಸುದ್ದಿಗಳನ್ನು ಪ್ರಕಟಿಸಿದವು.
ವಿಚ್ಛೇಧನಕ್ಕೆ ಸಮಂತಾ ಅವರೇ ಕಾರಣವೆಂದು, ಸಮಂತಾಗೆ ಮಕ್ಕಳು ಪಡೆಯಲು ಇಷ್ಟವಿರಲಿಲ್ಲ, ಸಮಂತಾ, ಅಕ್ಕಿನೇನಿ ಕುಟುಂಬದಲ್ಲಿ ಬಿರುಕು ಮೂಡಿಸಲು ಯತ್ನಿಸಿದರು ಎಂಬುದರಿಂದ ಹಿಡಿದು ಸಮಂತಾಗೆ ಅಕ್ರಮ ಸಂಬಂಧವಿತ್ತು, ಹಾಗಾಗಿ ನಾಗ ಚೈತನ್ಯ ವಿಚ್ಛೇಧನ ನೀಡಿದರು ಎಂಬುವ ವರೆಗೆ ಹಲವು ಗಾಳಿ ಸುದ್ದಿಗಳು ಹರಿದಾಡಿದವು.

ಕೆಲವು ಯೂಟ್ಯೂಬ್ ಚಾನೆಲ್ಗಳಂತೂ ಸುಳ್ಳನ್ನೇ ಸತ್ಯವೆಂಬಂತೆ ಸುದ್ದಿಗಳನ್ನು ಪ್ರಕಟಿಸಿದವು. ಆದರೀಗ ಸಮಂತಾ, ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಿದ್ದ ಕೆಲವು ಚಾನೆಲ್ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸುಮನ್ ಟಿವಿ, ತೆಲುಗು ಪಾಪ್ಯುಲರ್ ಟಿವಿ, ಇನ್ನೂ ಕೆಲವು ಯೂಟ್ಯೂಬ್ ಚಾನೆಲ್ಗಳ ಜೊತೆಗೆ ವಕೀಲ ವೆಂಕಟ್ ರಾವ್ ಎಂಬುವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ನಟಿ ಸಮಂತಾ.
ಸಮಂತಾ ಹಾಗೂ ನಾಗ ಚೈತನ್ಯ ತಮ್ಮ ನಾಲ್ಕು ವರ್ಷದ ದಾಂಪತ್ಯವನ್ನು ಕೆಲ ದಿನಗಳ ಹಿಂದಷ್ಟೆ ಅಂತ್ಯಗೊಳಿಸಿದರು. ತಾವಿಬ್ಬರೂ ಬೇರಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಬಹಿರಂಗಪಡಿಸಿದರು.
ಆ ನಂತರ ಸಮಂತಾ ಬಗ್ಗೆ ಹಲವು ಮಾಧ್ಯಮಗಳಲ್ಲಿ ಹಲವು ರೀತಿಯ ಆರೋಪಗಳನ್ನು ಮಾಡಲಾಯ್ತು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಸಮಂತಾ, ''ಅವರು ಹೇಳಿದರು, ನನಗೆ ಅನೈತಿಕ ಸಂಬಂಧಗಳಿವೆಯೆಂದು, ನಾನು ಮಕ್ಕಳು ಬೇಡವೆಂದು ನಿರಾಕರಿಸಿದೆ ಎಂದಿದ್ದಾರೆ. . ನಾನು ಅವಕಾಶವಾದಿ, ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ಸಹ ಹೇಳಿದರು. ವಿಚ್ಛೇದನೆಯೇ ಒಂದು ನೋವಿನ ಪ್ರಕ್ರಿಯೆ. ನನ್ನನ್ನು ಒಂಟಿಯಾಗಿ ಬಿಟ್ಟು, ಸಮಯವೇ ಆ ನೋವನ್ನು ಮರೆಯುವಂತೆ ಮಾಡಿ. ನನ್ನ ಮೇಲೆ ಈ ಸತತ ವೈಯಕ್ತಿಕ ದಾಳಿ ತೀರ ನಿರ್ದಯದ್ದಾಗಿದೆ. ಅವರು ಹೇಳಿದ್ದನ್ನೆಲ್ಲ ನಾನು ಒಪ್ಪುವುದಿಲ್ಲ ಅಥವಾ ಹೇಳುತ್ತಲೇ ಇರಲು ಬಿಡುವುದಿಲ್ಲ. ನಿಮಗೆ ಶಕ್ತಿ ಯಿದ್ದರೆ ನನ್ನ ಆತ್ಮವಿಶ್ವಾಸ ಮುರಿದು ತೋರಿಸಿ'' ಎಂದು ಸವಾಲು ಹಾಕಿದ್ದರು.
''ರೂಮರ್ಗಳನ್ನು ನಂಬದೆ ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದವನ್ನೂ ಹೇಳಿರುವ ಸಮಂತಾ, ನನ್ನ ವೈಯಕ್ತಿಕ ಸಮಸ್ಯೆ ಬಗ್ಗೆ ಕಾಳಜಿವಹಿಸಿರುವ ನಿಮ್ಮ ನಡೆ ನನ್ನ ಮನಸ್ಸು ತುಂಬಿದೆ. ತೀವ್ರ ಸಹಾನುಭೂತಿ, ಕಾಳಜಿ ತೋರಿಸದ ಎಲ್ಲರಿಗೂ ಧನ್ಯವಾದ. ರೂಮರ್ಗಳ ನಡುವೆಯೂ ಅವುಗಳನ್ನು ಸುಳ್ಳೆಂದು ವಾದಿಸಿ, ನನ್ನನ್ನು ಡಿಫೆಂಡ್ ಮಾಡಿಕೊಂಡವರಿಗೆ ಧನ್ಯವಾದಗಳು'' ಎಂದು ಕಷ್ಟದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳಿದ್ದರು ಸಮಂತಾ.
ಸಮಂತಾ ಬಗ್ಗೆ ಮಾಧ್ಯಮಗಳು ಇಷ್ಟೆಲ್ಲ ಆರೋಪ ಮಾಡುತ್ತಿದ್ದರೂ, ಮಾಜಿ ಪತಿ ನಾಗ ಚೈತನ್ಯ ಒಂದು ಸ್ಪಷ್ಟನೆಯನ್ನೂ ನೀಡಲಿಲ್ಲ. ಆರೋಪಗಳು ಸುಳ್ಳು ಎಂದೂ ಹೇಳಲಿಲ್ಲ. ಸಮಂತಾ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದ ಸ್ಟೈಲಿಸ್ಟ್ ಪ್ರೀತಂ, ''ನಾನು ಸಮಂತಾರನ್ನು ಅಕ್ಕ ಎಂದೇ ಸಂಭೋಧಿಸುತ್ತೇನೆ. ಸಂಬಂಧದ ಸುದ್ದಿ ಹರಡಿಸಬೇಡಿ. ನಾಗ ಚೈತನ್ಯ ಮನಸ್ಸು ಮಾಡಿದ್ದರೆ ಗಾಳಿ ಸುದ್ದಿಗಳಿಗೆ ಅಂತ್ಯ ಹಾಡಬಹುದಿತ್ತು'' ಎಂದರು.


Click it and Unblock the Notifications











