ತಿಮ್ಮಪ್ಪನ ಮೊರೆಹೋದ ಸಮಂತಾ: ವಿಚ್ಛೇದನ ವದಂತಿ ಬಗ್ಗೆ ಕೇಳಿದ್ದಕ್ಕೆ ಸಿಡಿದೆದ್ದ ನಟಿ
ಟಾಲಿವುಡ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ದಂಪತಿ ನಡುವೆ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸ್ಟಾರ್ ಜೋಡಿಯ ನಡುವೆ ಯಾವುದು ಸರಿ ಇಲ್ಲ ಇಬ್ಬರು ಈಗಾಗಲೇ ಬಾರೆ ಬೇರೆ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇತ್ತೀಚಿಗಷ್ಟೆ ಇಬ್ಬರು ಸಿನಿಮಾ ಟ್ರೈಲರ್ ವಿಚಾರವಾಗಿ ಒಬ್ಬರಿಗೊಬ್ಬರು ಮಾತುಕತೆ ನಡೆಸಿದ್ದರು. ಆದರೂ ವಿಚ್ಛೇದನ ವದಂತಿ ನಿಂತಿಲ್ಲ.
ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆಯಲು ಬರೋಬ್ಬರಿ 250 ಕೋಟಿ ರೂ. ಜೀವನಾಂಶ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಬಿರುಕಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಷ್ಟಾದರೂ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮಾಧ್ಯಮದ ಮುಂದೆಯೂ ಕಾಣಿಸಿಕೊಂಡಿರಲಿಲ್ಲ. ಇಂದು ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ವಿಚ್ಛೇದನ ವದಂತಿ ನಡುವೆ ಸಮಂತಾ ದೇವರ ಮೊರೆ ಹೋಗಿದ್ದಾರೆ. ಇಂದು (ಸೆಪ್ಟಂಬರ್ 18) ಸಮಂತಾ ದಿಢೀರ್ ಅಂತ ದೇವರ ದರ್ಶನಕ್ಕೆ ತೆರಳಿದ್ದರು. ತಿರುಪತಿಗೆ ತೆರಳಿದ ಸಮಂತಾ ತಿಮ್ಮನ ದರ್ಶನ ಮಾಡಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರನ್ನು ನೋಡುತ್ತಿದ್ದಂತೆ ಸಿಡುಕುತ್ತಿದ್ದ ಸಮಂತಾ, ದೇವಸ್ಥಾನದ ಆವರಣದಲ್ಲಿ ಯಾಕೆ ಫೋಟೋ, ವಿಡಿಯೋ ತೆಗೆಯುತ್ತಿದ್ದೀರಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.

ಸಮಂತಾ ಮಾಧ್ಯಮದವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ ಮಾಧ್ಯಮದವರು ವಿಚ್ಛೇದನ ವದಂತಿ ಬಗ್ಗೆ ಪ್ರಶ್ನೆ ಮಾಡಿದರು. ಮೊದಲೇ ಮಾಧ್ಯಮದವರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಸಮಂತಾಗೆ ಈ ಪ್ರಶ್ನೆ ಮತ್ತಷ್ಟು ಸಿಟ್ಟುತರಿಸಿತು.
ದೇವಸ್ಥಾನಕ್ಕೆ ಬಂದಿದ್ದೀರಾ ಬುದ್ದಿ ಇದಿಯಾ? ಎಂದು ಹೇಳಿದ್ದಾರೆ. ಸಮಂತಾ ಮಾಧ್ಯಮದವರ ಜೊತೆ ಹೀಗೆ ನಡೆದುಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇಷ್ಟು ಹೇಳಿ ಸಮಂತಾ ಅಲ್ಲಿಂದ ಹೊರಟು ಹೋಗಿದ್ದಾರೆ.
ಈ ಬಾರಿ ಸಮಂತಾ ಮಾಧ್ಯಮದವರ ಜೊತೆ ನಡೆದುಕೊಂಡ ರೀತಿ ಮತ್ತು ಕಳೆದ ಬಾರಿ ತಿರುಪತಿಗೆ ಭೇಟಿ ಕೊಟ್ಟಿದ್ದ ವೇಳೆ ಸಮಂತಾ ನಡೆದುಕೊಂಡ ರೀತಿಯ ವಿಡಿಯೋವನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ ನೆಟ್ಟಿಗರು. ಕಳೆದ ಬಾರಿ ಸಮಂತಾ ತಿರುಪತಿ ದರ್ಶನದ ವೇಳೆ ಕ್ಯಾಮರಾಗೆ ಪೋಸ್ ನೀಡಿದ್ದರು ಜೊತೆಗೆ ಅಭಿಮಾನಿಗಳ ಜೊತೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದರು. ಆದರೆ ಈ ಬಾರಿ ಫುಲ್ ಗರಂ ಆಗಿದ್ದರು. ಸಮಂತಾ ಅವರ ಈ ನಡೆ ವಿಚ್ಛೇದನ ವದಂತಿಯನ್ನು ಮತ್ತಷ್ಟು ಗಟ್ಟಿ ಮಾಡಿದೆ.


Click it and Unblock the Notifications











