ಸಮಂತಾ ಅಭಿಮಾನಿಗಳಿಗೆ ಇಲ್ಲಿದೆ ಬೇಸರದ ಸುದ್ದಿ
ನಾಗಚೈತನ್ಯ ಅವರಿಂದ ಸಮಂತಾ ದೂರವಾಗಿ ಐದು ವರ್ಷಗಳಾಗಿವೆ. ಆದರೆ ಈ ಐದು ವರ್ಷದಲ್ಲಿ ಸಮಂತಾ ಆಂಧ್ರದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಸದ್ಯ .. ಸಮಂತಾ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರ ಇಲ್ಲ. ಈ ಹಿನ್ನೆಲೆ ಹಲವರು ಅದರಲ್ಲಿಯೂ ವಿಶೇಷವಾಗಿ ಸಮಂತಾ ಅವರ ಅಭಿಮಾನಿಗಳು ಈ ವಿಚಾರದ ಕುರಿತು ಆಗಾಗ ಚರ್ಚೆ ಮಾಡುತ್ತಲೇ ಇದ್ದಾರೆ.
ಬಹುತೇಕರು ಚಿತ್ರಗಳ ಆಯ್ಕೆ ವಿಚಾರದಲ್ಲಿ ಸಮಂತಾ ಚ್ಯೂಸಿಯಾಗಿದ್ದಾರೆ ಎಂದೇ ಅಂದುಕೊಂಡಿದ್ದಾರೆ. ಸಮಂತಾ ವಿರುದ್ದ ತಮ್ಮ ಬೇಸರ ಮತ್ತು ಅಸಮಾಧಾನವನ್ನು ಕೂಡ ಆಗಾಗ ಹೊರ ಹಾಕುತ್ತಿರುತ್ತಾರೆ. ಅಭಿಮಾನಿಗಳ ಈ ಅಸಮಾಧಾನ ದೂರ ಮಾಡುವ ಪ್ರಯತ್ನವನ್ನು ಸಮಂತಾ ಮಾಡುತ್ತಿದ್ದಾರೆ. ಆದರೆ ಸರಿಯಾದ ಕಾಲ ಕೂಡಿ ಬರುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸಮಂತಾ ಅಭಿನಯದ ''ಮಾ ಇಂಟಿ ಬಂಗಾರಂ'' ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವ ಸುದ್ದಿ ಸದ್ಯ ಆಂಧ್ರದೆಲ್ಲೆಡೆ ಗುಲ್ಲಾಗಿದೆ.

ಹೌದು, ಹೈದರಾಬಾದ್ಗಿಂತ ಇತ್ತೀಚೆಗೆ ಮುಂಬೈನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಸಮಂತಾ, ಬಹಳ ವರ್ಷಗಳ ನಂತರ ನಾಯಕಿಯಾಗಿ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಬೇರೆ ಯಾರು ಹಣ ಹೂಡಲು ಮುಂದಾಗದ ಕಾರಣ.. ಅವಕಾಶವನ್ನು ನೀಡದ ಕಾರಣ.. ತಾವೇ ಖುದ್ದು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಹೀಗೆ ಇವರು ಬಂಡವಾಳ ಹಾಕಿ ಅಭಿನಯಿಸಿರುವ ಚಿತ್ರ ''ಮಾ ಇಂಟಿ ಬಂಗಾರಂ'' ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಮೇ15ರಂದು ಬಿಡುಗಡೆಯಾಗಬೇಕಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ಚಿತ್ರದ ಪ್ರಚಾರಕ್ಕೆ ಸಮಂತಾ ಚಾಲನೆ ನೀಡಿದ್ದರು. ಹಲವು ಕಡೆ ಸಂದರ್ಶನಗಳನ್ನು ಕೊಡುತ್ತಿದ್ದರು. ಆದರೆ ಈಗ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.
ಮುಂದೂಡಲು ಕಾರಣವೇನು..?
ಇನ್ನು ಎಲ್ಲರಿಗೆ ಗೊತ್ತಿರುವಂತೆ ''ಟಾಕ್ಸಿಕ್'' ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ''ಟಾಕ್ಸಿಕ್'' ಬಿಡುಗಡೆ ಮುಂದೂಡಲಾಗಿದೆ. ಆದರೆ, ''ಟಾಕ್ಸಿಕ್'' ಖಾಲಿ ಮಾಡಿದ ಜಾಗವನ್ನು ರಾಮ್ ಚರಣ್ ತೇಜಾ ಅಭಿನಯದ ''ಪೆದ್ದಿ'' ಆಕ್ರಮಿಸಿಕೊಳ್ಳಲಿದೆ.
ಅವತ್ತು ಹಿಂದಿಯಲ್ಲಿ ಕೂಡ ವರುಣ್ ಧವನ್ ಅಭಿನಯದ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಬಿಡುಗಡೆಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ಯ ಐಪಿಎಲ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಮೇ 31ರಂದು ಈ ಐಪಿಎಲ್ ಉತ್ಸವಕ್ಕೆ ತೆರೆ ಬೀಳಲಿದೆ.
ಈ ಎಲ್ಲ ಕಾರಣಗಳಿಂದ ''ಮಾ ಇಂಟಿ ಬಂಗಾರಂ'' ಚಿತ್ರದ ವಿತರಕರು ಸಮಂತಾ ಅವರ ಪತಿ ಮತ್ತು ನಿರ್ಮಾಪಕ ರಾಜ್ ನಿಡಿಮೋರು ಅವರಿಗೆ ಬಿಡುಗಡೆ ಮಾಡದಂತೆ ಸಲಹೆ ನೀಡಿದ್ಧಾರೆ. ಸದ್ಯ ಚಿತ್ರದ ಬಿಡುಗಡೆಯನ್ನು ಜೂನ್ಗೆ ಮುಂದೂಡುವುದು ಉತ್ತಮವಾದ ನಿರ್ಧಾರ ಎಂದು ಹೇಳಿದ್ದಾರೆ. ವಿತರಕರ ಈ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಸಮಂತಾ ಮತ್ತು ರಾಜ್ ''ಮಾ ಇಂಟಿ ಬಂಗಾರಂ" ಚಿತ್ರದ ಬಿಡುಗಡೆಯನ್ನು ಮುಂದೂಡಿದ್ಧಾರೆ ಎಂದು ''ಫಿಲ್ಮ್ ಫೇರ್'' ವರದಿ ಮಾಡಿದೆ. ಮೇ15ರಿಂದ ಮುಂದಕ್ಕೋದ ''ಮಾ ಇಂಟಿ ಬಂಗಾರಂ'' ಎಲ್ಲವೂ ಅಂದುಕೊಂಡತೆ ಆದರೆ ಜೂನ್ 19ರಂದು ತೆರೆಗೆ ಬರುವ ಸಾಧ್ಯತೆ ಇದೆ.
''ಮಾ ಇಂಟಿ ಬಂಗಾರಂ''ನಲ್ಲಿ ಕನ್ನಡ ಕಲಾವಿದರು
ಅಂದ್ಹಾಗೇ ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಈ ಹಿಂದೆ ಸಮಂತಾಗೆ ''ಓಹ್ ಬೇಬಿ'' ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನ ಇದೆ. ''ಕಾಂತಾರ''ದ ಕುಲಶೇಖರ ಗುಲ್ಶನ್ ದೇವಯ್ಯ ಕೂಡ ಈ ಚಿತ್ರದಲ್ಲಿದ್ಧಾರೆ. ಇಷ್ಟೇ ಅಲ್ಲ ನಮ್ಮ ಕನ್ನಡದ ದಿಗಂತ್ ಕೂಡ ''ಮಾ ಇಂಟಿ ಬಂಗಾರಂ''ನಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ಧಾರೆ. ಇನ್ನು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ.
ಸದ್ಯ ''ಮಾ ಇಂಟಿ ಬಂಗಾರಂ'' ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾಗಿದ್ದು ಜೂನ್ 19ರಂದು ಚಿತ್ರ ತೆರೆಗೆ ಬರುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications