ಅಶ್ಲೀಲ ಕಮೆಂಟ್ ಮಾಡುವವರಿಗೆ ಸಮಂತಾ ವಿನಮ್ರ ಮನವಿ
ಆನ್ಲೈನ್ ಟ್ರೋಲಿಂಗ್ ಎಂಬುದು ನಟಿಯರಿಗೆ ಬಿಡದೇ ಕಾಡುತ್ತಿರುವ ಗುಮ್ಮ. ಯಾವೊಬ್ಬ ನಟಿಯೂ ಈ ಆನ್ಲೈನ್ ಅಬ್ಯೂಸ್ (ನಿಂದನೆ)ಯಿಂದ ಹೊರತಾಗಿಲ್ಲ. ಅದರಲ್ಲೂ ನಟಿ, ಗ್ಲಾಮರಸ್ ಆಗಿ ಕಾಣಿಸಿಕೊಂಡರೆ, ವೈಯಕ್ತಿಕ ಜೀವನದಲ್ಲಿ ಏರು-ಪೇರಾಗಿದ್ದರೆ, ವಿಚ್ಛೇಧನ ಪಡೆದಿದ್ದರೆ ಕತೆ ಮುಗಿದಂತೆ. ಟ್ರೋಲರ್ಗಳು ಅವಾಚ್ಯವಾಗಿ ಕಮೆಂಟ್ಗಳನ್ನು ಹಾಕುತ್ತಾರೆ.
ಇತ್ತೀಚೆಗಷ್ಟೆ ನಟ ನಾಗಚೈತನ್ಯರಿಂದ ವಿಚ್ಛೇಧನ ಪಡೆದ ನಟಿ ಸಮಂತಾ ನೆಟ್ಟಿಗರಿಂದ ಕೆಟ್ಟ ಟ್ರೋಲಿಂಗ್ ಎದುರಿಸಿದವರು. ಟ್ರೋಲಿಗರ ವಿರುದ್ಧ, ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಸಮರಕ್ಕೆ ಸಹ ತಯಾರಾಗಿದ್ದರು. ಆದರೆ ಈಗ ಟ್ರೋಲಿಗರಿಗೆ ವಿನಮ್ರ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ಸಮಂತಾ, ''ಎಲ್ಲರನ್ನೂ ಯಾವುದೇ ಟೀಕೆ ಇಲ್ಲದೆ, ಪ್ರಶ್ನಾತೀತವಾಗಿ ಒಪ್ಪಿಕೊಂಡು ಬಿಡಿ ಎಂದು ನಾನು ಹೇಳುತ್ತಿಲ್ಲ. ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಾನು ಬೆಂಬಲಿಸುತ್ತೇನೆ. ಆದರೆ ಅಂಥಹವರಲ್ಲಿ ನನ್ನ ಭಿನ್ನಹವೆಂದರೆ ನಿಮ್ಮ ಅಭಿಪ್ರಾಯಗಳನ್ನು, ಟೀಕೆಗಳನ್ನು, ದೂರುಗಳನ್ನು 'ನಾಗರೀಕ ಭಾಷೆ'ಯಲ್ಲಿ ಮುಂದಿಡಿ ಅದರ ಹೊರತಾಗಿ ಅವಾಚ್ಯ ಭಾಷೆ ಬಳಸಬೇಡಿ'' ಎಂದಿದ್ದಾರೆ ಸಮಂತಾ.

ಸಮಂತಾ, ನಾಗ ಚೈತನ್ಯ ದೂರಾದಾಗ ವಿಚ್ಛೇಧನಕ್ಕೆ ಸಮಂತಾರೆ ಕಾರಣ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ದೂರಿದರು. ಸಮಂತಾ ಬಗ್ಗೆ ಕೆಟ್ಟ-ಕೆಟ್ಟ ಪೋಸ್ಟ್ಗಳು ಹರಿದಾಡಿದವು. ಸುಳ್ಳು ಸುದ್ದಿಗಳು ಹರಿದಾಡಿದವು. ಸಮಂತಾಗೆ ಅನೈತಿಕ ಸಂಬಂಧವಿದೆ, ಸಮಂತಾಗೆ ಮಗು ಪಡೆಯುವುದು ಇಷ್ಟವಿರಲಿಲ್ಲ ಇನ್ನೂ ಅನೇಕ ದೂರುಗಳು ಕೇಳಿ ಬಂದಿದ್ದವು. ಅದಕ್ಕೆಲ್ಲ ಸಾಮಾಜಿಕ ಜಾಲತಾಣದ ಮೂಲಕವೇ ಉತ್ತರ ನೀಡಿದ್ದ ಸಮಂತಾ, ''ಅವರು ಹೇಳಿದರು, ನನಗೆ ಅನೈತಿಕ ಸಂಬಂಧಗಳಿವೆಯೆಂದು, ನಾನು ಮಕ್ಕಳು ಬೇಡವೆಂದು ನಿರಾಕರಿಸಿದೆ ಎಂದಿದ್ದಾರೆ. . ನಾನು ಅವಕಾಶವಾದಿ, ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ಸಹ ಹೇಳಿದರು. ವಿಚ್ಛೇದನೆಯೇ ಒಂದು ನೋವಿನ ಪ್ರಕ್ರಿಯೆ. ನನ್ನನ್ನು ಒಂಟಿಯಾಗಿ ಬಿಟ್ಟು, ಸಮಯವೇ ಆ ನೋವನ್ನು ಮರೆಯುವಂತೆ ಮಾಡಿ. ನನ್ನ ಮೇಲೆ ಈ ಸತತ ವೈಯಕ್ತಿಕ ದಾಳಿ ತೀರ ನಿರ್ದಯದ್ದಾಗಿದೆ. ಅವರು ಹೇಳಿದ್ದನ್ನೆಲ್ಲ ನಾನು ಒಪ್ಪುವುದಿಲ್ಲ ಅಥವಾ ಹೇಳುತ್ತಲೇ ಇರಲು ಬಿಡುವುದಿಲ್ಲ. ನಿಮಗೆ ಶಕ್ತಿ ಯಿದ್ದರೆ ನನ್ನ ಆತ್ಮವಿಶ್ವಾಸ ಮುರಿದು ತೋರಿಸಿ'' ಎಂದು ಸವಾಲು ಹಾಕಿದ್ದರು.
ಆ ನಂತರ ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ, ಮಾನ ಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಿದ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸಮಂತಾ, ಸುಮನ್ ಟಿವಿ, ತೆಲುಗು ಪಾಪ್ಯುಲರ್ ಟಿವಿ, ಇನ್ನೂ ಕೆಲವು ಯೂಟ್ಯೂಬ್ ಚಾನೆಲ್ಗಳ ಜೊತೆಗೆ ವಕೀಲ ವೆಂಕಟ್ ರಾವ್ ಎಂಬುವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಎಲ್ಲ ಚಾನೆಲ್ಗಳು ಸಮಂತಾ ಬಗ್ಗೆ ಅಪ್ಲೋಡ್ ಮಾಡಲಾಗಿರುವ ಮಾನಹಾನಿಕಾರಕ ಕಂಟೆಂಟ್ ತೆಗೆಯುವ ಜೊತೆಗೆ ಸಮಂತಾರ ಕ್ಷಮೆ ಕೇಳಬೇಕು ಎಂದು ಆದೇಶಿಸಿತು.
ವಿವಾಹ ವಿಚ್ಛೇಧನದ ಬಳಿಕ ವೃತ್ತಿ ಜೀವನದಲ್ಲಿ ಹೊಸ ಪ್ರಯೋಗಗಳಲ್ಲಿ ಸಮಂತಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ. 'ಅರೇಂಜ್ಮೆಂಟ್ಸ್ ಆಫ್ ಲವ್' ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಬೈಸೆಕ್ಶ್ಯುಲ್ (ಗಂಡು-ಹೆಣ್ಣು ಇಬ್ಬರ ಬಗ್ಗೆಯೂ ಆಸಕ್ತಿ ಉಳ್ಳವರು) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಳಿಕ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಐಟಂ ಹಾಡಿನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಕುಣಿದಿದ್ದಾರೆ ಸಮಂತಾ. ಇದರ ಜೊತೆಗೆ 'ಶಾಕುಂತಲಾ' ಹೆಸರಿನ ಸಿನಿಮಾದಲ್ಲಿಯೂ ಸಮಂತಾ ನಟಿಸಿದ್ದು, ಇದೇ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಗಳು ಆರ್ಹಾ ಸಹ ಮೊದಲ ಬಾರಿಗೆ ನಟಿಸುತ್ತಿದ್ದಾರೆ.


Click it and Unblock the Notifications