ಮಗಳ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ ತಂದೆ
ಟಾಲಿವುಡ್ ನ ಖ್ಯಾತ ಜೋಡಿ, ಕ್ಯೂಟ್ ಕಪಲ್, ಸ್ಯಾಮ್-ಚೈ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ನಟಿ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ 3 ದಿನಗಳೇ ಕಳೆಯಿತು. ಆದರೂ ಈ ತಾರಾಜೋಡಿಯ ವಿಚ್ಛೇದನದ ಬಗ್ಗೆ ಇನ್ನು ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಇನ್ನು ನೆಚ್ಚಿನ ಜೋಡಿಯ ಡಿವೋರ್ಸ್ ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಳೆದ ಒಂದು ತಿಂಗಳಿಂದ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ವಿಚಾರ ಸದ್ದಿ ಮಾಡುತ್ತಿದ್ದು. ಆದರೆ ಈ ಬಗ್ಗೆ ಸಮಂತಾ ಅಥವಾ ನಾಗ ಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅಕ್ಟೋಬರ್ 2ರಂದು ವಿಚ್ಛೇದನ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. ಈ ಮೂಲಕ 3 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟರು.
ಇಬ್ಬರು ಬೇರೆ ಬೇರೆ ಆಗುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಕೇವಲ ಟಾಲಿವುಡ್ ಮಾತ್ರವಲ್ಲದೆ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಇನ್ನು ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು ವಿಚ್ಛೇದನ ಘೋಷಣೆ ಮಾಡಿದ ಬಳಿಕ ನಾಗ ಚೈತನ್ಯ ತಂದೆ ನಾಗಾರ್ಜುನ ಭಾರವಾದ ಹೃದಯದಿಂದ ಇದು ದುರದೃಷ್ಟಕರ ಎಂದು ಪೋಸ್ಟ್ ಮಾಡಿದ್ದರು. ಆದರೆ ಸಮಂತಾ ಮೇಲಿನ ಪ್ರೀತಿ, ಗೌರವ ಕಡಿಮೆಯಾಗಲ್ಲ ಎಂದು ಹೇಳಿದ್ದರು. ಆದರೆ ಸಮಂತಾ ತಂದೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಸಮಂತಾ ತಂದ ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ವಿಚ್ಛೇದನದ ಸುದ್ದಿ ಕೇಳಿ ಮನಸ್ಸು ಸ್ತಬ್ದವಾಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ..

ನನ್ನ ಮನಸ್ಸು ಸ್ತಬ್ದವಾಗಿದೆ
"ಅವರಿಬ್ಬರು ಬೇರೆ ಬೇರೆ ಆಗುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಕ್ಷಣದಿಂದ ನನ್ನ ಮನಸ್ಸು ಸ್ತಬ್ದವಾಗಿದೆ. ಈ ಸಮಯದಲ್ಲಿ ನನಗೆ ಏನು ತೋಚುತ್ತಿಲ್ಲ. ನಾನು ನನ್ನ ಮಗಳ ಬಳಿ ಈ ಬಗ್ಗೆ ಮಾತನಾಡುತ್ತೇನೆ. ವಿಚ್ಛೇದನ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಹೇಳುತ್ತೇನೆ. ಸದ್ಯದಲ್ಲೇ ಎಲ್ಲಾ ಸರಿಹೋಗುವ ವಿಶ್ವಾಸವಿದೆ " ಎಂದು ಸಮಂತಾ ತಂದೆ ಜೋಸೆಫ್ ಪ್ರಭು ಹೇಳಿದ್ದಾರೆ. ಸಮಂತಾ ತಂದೆಯ ಹೇಳಿಕೆಯ ಬಳಿಕ ಮಗಳ ಜೀವನದ ಬಗ್ಗೆ ತಂದೆಗೆ ಈ ಮೊದಲು ತಿಳಿದಿರಲಿಲ್ವಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು.

ನಿಖರ ಕಾರಣ ಬಹಿರಂಗವಾಗಿಲ್ಲ
ಇಬ್ಬರ ವಿಚ್ಛೇದನಕ್ಕೆ ನಿಖರವಾದ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈಗಾಗಲೇ ತರಹೇವಾರಿ ಕಥೆಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸ್ಯಾಮ್ ಅಥವಾ ಚೈ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ವಿಚ್ಛೇದನ ಘೋಷಿಸಿದ ಬಳಿಕ ಸಮಂತಾ ಸಹಜವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.

ವಿಚ್ಛೇದನದ ಬಗ್ಗೆ ಸ್ಯಾಮ್-ಚೈ ಪೋಸ್ಟ್
ವಿಚ್ಛೇದನ ನೀಡುವುದಾಗಿ ತಾರಾ ಜೋಡಿ ಒಂದೇ ಪೋಸ್ಟ್ ಶೇರ್ ಮಾಡಿದ್ದರು. "ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ" ಎಂದು ಬಹಿರಂಗ ಪಡಿಸಿದ್ದರು.

2017ರಲ್ಲಿ ಅದ್ದೂರಿ ಮದುವೆ
ಅಂದಹಾಗೆ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು 2017ರ ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದ ಪ್ರಕಾರ ಅದ್ದೂರಿಯಾಗಿ ಮದುವೆಯಾಗಿದ್ದರು. ಅಕ್ಟೋಬರ್ 7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಾಗಲೇ ಈ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.


Click it and Unblock the Notifications











