ಗಾಳಿ ಸುದ್ದಿಗಳಿಗೆ ದಿಟ್ಟ ಉತ್ತರ ಕೊಟ್ಟ ನಟಿ ಸಮಂತಾ
ನಟಿ ಸಮಂತಾ ಹಾಗೂ ನಾಗಚೈತನ್ಯ ಇತ್ತೀಚೆಗಷ್ಟೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಅಧಿಕೃತವಾಗಿ ವಿಚ್ಛೇಧನ ಘೋಷಿಸುವ ಮುನ್ನವೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ವಿಚ್ಛೇದನದ ಸುದ್ದಿಗಳು ಜೋರಾಗಿ ಹರಿದಾಡಿದ್ದವು.
ಇದೀಗ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಘೋಷಿಸಿದ ಬಳಿಕ ವಿಚ್ಛೇದನಕ್ಕೆ ಕಾರಣಗಳನ್ನು ಹುಡುಕುವ ಕಾರ್ಯವನ್ನು ಮಾಧ್ಯಮಗಳು, ಕೆಲವು ಯೂಟ್ಯೂಬ್ ಚಾನೆಲ್ಗಳು ಮಾಡುತ್ತಿದ್ದು, ಸಮಂತಾರನ್ನು ದೋಷಿಯನ್ನಾಗಿಸುವ ಯತ್ನದಲ್ಲಿ ನಿರತವಾಗಿವೆ.
ಸಮಂತಾ-ನಾಗ ಚೈತನ್ಯ ದಾಂಪತ್ಯ ಮುರಿದು ಬಿದ್ದುದ್ದಕ್ಕೆ ಕಾರಣಗಳ ಪಟ್ಟಿಯನ್ನೇ ಕೆಲವು ಮಾಧ್ಯಮಗಳು ನೀಡಿವೆ. ಯೂಟ್ಯೂಬ್ ಚಾನೆಲ್ಗಳಂತೂ ಮನಸಿಗೆ ಬಂದಂತೆ ಮಾಹಿತಿ ಹಂಚುತ್ತಿವೆ. ಈ ಎಲ್ಲದರ ಬಗ್ಗೆ ನಟಿ ಸಮಂತಾ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಹಲವು ಆರೋಪಗಳನ್ನು ನನ್ನ ಮೇಲೆ ಹೇರಿದರು: ಸಮಂತಾ
''ಅವರು ಹೇಳಿದರು, ನನಗೆ ಅನೈತಿಕ ಸಂಬಂಧಗಳಿವೆಯೆಂದು, ನಾನು ಮಕ್ಕಳು ಬೇಡವೆಂದು ನಿರಾಕರಿಸಿದೆ ಎಂದಿದ್ದಾರೆ. . ನಾನು ಅವಕಾಶವಾದಿ, ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ಸಹ ಹೇಳಿದರು. ವಿಚ್ಛೇದನೆಯೇ ಒಂದು ನೋವಿನ ಪ್ರಕ್ರಿಯೆ. ನನ್ನನ್ನು ಒಂಟಿಯಾಗಿ ಬಿಟ್ಟು, ಸಮಯವೇ ಆ ನೋವನ್ನು ಮರೆಯುವಂತೆ ಮಾಡಿ. ನನ್ನ ಮೇಲೆ ಈ ಸತತ ವೈಯಕ್ತಿಕ ದಾಳಿ ತೀರ ನಿರ್ದಯದ್ದಾಗಿದೆ. ಅವರು ಹೇಳಿದ್ದನ್ನೆಲ್ಲ ನಾನು ಒಪ್ಪುವುದಿಲ್ಲ ಅಥವಾ ಹೇಳುತ್ತಲೇ ಇರಲು ಬಿಡುವುದಿಲ್ಲ. ನಿಮಗೆ ಶಕ್ತಿ ಯಿದ್ದರೆ ನನ್ನ ಆತ್ಮವಿಶ್ವಾಸ ಮುರಿದು ತೋರಿಸಿ'' ಎಂದು ಸವಾಲು ಹಾಕಿದ್ದಾರೆ ಸಮಂತಾ.

ಬೆಂಬಲಿಸಿದವರಿಗೆ ಧನ್ಯವಾದ ಹೇಳಿರುವ ಸಮಂತಾ
''ರೂಮರ್ಗಳನ್ನು ನಂಬದೆ ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದವನ್ನೂ ಹೇಳಿರುವ ಸಮಂತಾ, ನನ್ನ ವೈಯಕ್ತಿಕ ಸಮಸ್ಯೆ ಬಗ್ಗೆ ಕಾಳಜಿವಹಿಸಿರುವ ನಿಮ್ಮ ನಡೆ ನನ್ನ ಮನಸ್ಸು ತುಂಬಿದೆ. ತೀವ್ರ ಸಹಾನುಭೂತಿ, ಕಾಳಜಿ ತೋರಿಸದ ಎಲ್ಲರಿಗೂ ಧನ್ಯವಾದ. ರೂಮರ್ಗಳ ನಡುವೆಯೂ ಅವುಗಳನ್ನು ಸುಳ್ಳೆಂದು ವಾದಿಸಿ, ನನ್ನನ್ನು ಡಿಫೆಂಡ್ ಮಾಡಿಕೊಂಡವರಿಗೆ ಧನ್ಯವಾದಗಳು'' ಎಂದಿದ್ದಾರೆ ಸಮಂತಾ.

ಸಮಂತಾ ಟ್ವೀಟ್ಗೆ ಹಲವು ಪ್ರತಿಕ್ರಿಯೆ
ಸಮಂತಾ ಮಾಡಿರುವ ಟ್ವೀಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 'ನೀವು ಧೈರ್ಯವಾಗಿರಿ, ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ' ಎಂದು ಧೈರ್ಯ ತುಂಬಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಸಮಂತಾರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಟ್ವೀಟ್ನಲ್ಲಿ ಬರೆದಿರುವ ಸಾಲುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಮಂತಾ ಈ ಟ್ವೀಟ್ ಅನ್ನು ನಾಗ ಚೈತನ್ಯ ಕುಟುಂಬದ ಬಗ್ಗೆ ಮಾಡಿದ್ದಾರೆಯೇ ಅಥವಾ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಬಗ್ಗೆ ಮಾಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಮಾಧ್ಯಮಗಳು ಹಾಗೂ ಟ್ರೋಲ್ಗಳನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಮಂತಾ ಮಾಡಿದ್ದಾರೆ ಎನ್ನಲಾಗಿದೆ.

ಹತ್ತು ವರ್ಷದ ಸಂಬಂಧಕ್ಕೆ ತಿಲಾಂಜಲಿ ಇಟ್ಟ ಜೋಡಿ
ಸಮಂತಾ ಹಾಗೂ ನಾಗಚೈತನ್ಯ ನಾಲ್ಕು ವರ್ಷದ ದಾಂಪತ್ಯಕ್ಕೆ ಇತ್ತೀಚೆಗಷ್ಟೆ ಅಂತ್ಯ ಹಾಡಿದ್ದಾರೆ. ''ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ'' ಎಂದು ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಸಮಂತಾ ಹಾಗೂ ನಾಗಚೈತನ್ಯ ಮದುವೆಗೆ ಮುನ್ನ ಆರು ವರ್ಷಗಳ ಪ್ರೀತಿಯಲ್ಲಿದ್ದರು. ಅಲ್ಲಿಗೆ ಹತ್ತು ವರ್ಷದ ಸಂಬಂಧಕ್ಕೆ ಇವರಿಬ್ಬರೂ ತಿಲಾಂಜಲಿ ಇಟ್ಟಿದ್ದಾರೆ.


Click it and Unblock the Notifications











