ಯೂಟ್ಯೂಬ್ ಚಾನೆಲ್ ವಿರುದ್ಧ ಸಮಂತಾ ಮಾನನಷ್ಟ ಮೊಕದ್ದಮೆ: ಕೋರ್ಟ್ ಗರಂ
ತಮ್ಮ ಖಾಸಗಿ ಜೀವನ ಕುರಿತಂತೆ ಸುಳ್ಳು ಸುದ್ದಿಗಳು ಹಾಗೂ ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಿದ ಕೆಲವು ಯೂಟ್ಯೂಬ್ ಚಾನೆಲ್ಗಳ ವಿರುದ್ಧ ನಟಿ ಸಮಂತಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ಸಮಂತಾರ ಮೊಕದ್ದಮೆ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸುಮನ್ ಟಿವಿ, ತೆಲುಗು ಪಾಪ್ಯುಲರ್ ಟಿವಿ, ಇನ್ನೂ ಕೆಲವು ಯೂಟ್ಯೂಬ್ ಚಾನೆಲ್ಗಳ ಜೊತೆಗೆ ಡಾಕ್ಟರ್ ವೆಂಕಟ್ ರಾವ್ ಎಂಬುವರ ವಿರುದ್ಧ 50 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ನಟಿ ಸಮಂತಾ ದಾಖಲಿಸಿದ್ದರು.
ಅರ್ಜಿ ವಿಚಾರಣೆಯನ್ನು ಶೀಘ್ರವಾಗಿ ಮಾಡಬೇಕೆಂದು ಸಮಂತಾ ಪರ ವಕೀಲರು ಮನವಿ ಮಾಡಿದ್ದರು. ಹೈದರಾಬಾದ್ನ ಕುಕ್ಕಟಪಲ್ಲಿ ಕೆಳನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾಯಾಧೀಶರು ಸಮಂತಾರ ಮೊಕದ್ದಮೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

''ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆ ನಂತರ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ'' ಎಂದಿದ್ದಾರೆ. ಈ ರೀತಿ ದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುವ ಬದಲಿಗೆ ಕ್ಷಮಾಪಣೆ ಕೇಳಿದ್ದರೆ ಆಗುತ್ತಿತ್ತು'' ಎಂದಿದ್ದಾರೆ ನ್ಯಾಯಾಧೀಶರು.
ಇತ್ತೀಚೆಗಷ್ಟೆ ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಈ ವಿಚ್ಛೇಧನಕ್ಕೆ ಸಮಂತಾ ಅವರೇ ಕಾರಣವೆಂದು ಹಲವು ಯೂಟ್ಯೂಬ್ ಚಾನೆಲ್ಗಳು, ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಸಮಂತಾಗೆ ಮಕ್ಕಳು ಪಡೆಯಲು ಇಷ್ಟವಿರಲಿಲ್ಲ, ಸಮಂತಾ, ಅಕ್ಕಿನೇನಿ ಕುಟುಂಬದಲ್ಲಿ ಬಿರುಕು ಮೂಡಿಸಲು ಯತ್ನಿಸಿದರು ಎಂಬುದರಿಂದ ಹಿಡಿದು ಸಮಂತಾಗೆ ಅಕ್ರಮ ಸಂಬಂಧವಿತ್ತು, ಹಾಗಾಗಿ ನಾಗ ಚೈತನ್ಯ ವಿಚ್ಛೇಧನ ನೀಡಿದರು ಎಂಬುವ ವರೆಗೆ ಹಲವು ಗಾಳಿ ಸುದ್ದಿಗಳು ಹರಿದಾಡಿದವು.
ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಮಂತಾ, ''ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಸಮಂತಾ, ''ಅವರು ಹೇಳಿದರು, ನನಗೆ ಅನೈತಿಕ ಸಂಬಂಧಗಳಿವೆಯೆಂದು, ನಾನು ಮಕ್ಕಳು ಬೇಡವೆಂದು ನಿರಾಕರಿಸಿದೆ ಎಂದಿದ್ದಾರೆ. . ನಾನು ಅವಕಾಶವಾದಿ, ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ಸಹ ಹೇಳಿದರು. ವಿಚ್ಛೇದನೆಯೇ ಒಂದು ನೋವಿನ ಪ್ರಕ್ರಿಯೆ. ನನ್ನನ್ನು ಒಂಟಿಯಾಗಿ ಬಿಟ್ಟು, ಸಮಯವೇ ಆ ನೋವನ್ನು ಮರೆಯುವಂತೆ ಮಾಡಿ. ನನ್ನ ಮೇಲೆ ಈ ಸತತ ವೈಯಕ್ತಿಕ ದಾಳಿ ತೀರ ನಿರ್ದಯದ್ದಾಗಿದೆ. ಅವರು ಹೇಳಿದ್ದನ್ನೆಲ್ಲ ನಾನು ಒಪ್ಪುವುದಿಲ್ಲ ಅಥವಾ ಹೇಳುತ್ತಲೇ ಇರಲು ಬಿಡುವುದಿಲ್ಲ. ನಿಮಗೆ ಶಕ್ತಿ ಯಿದ್ದರೆ ನನ್ನ ಆತ್ಮವಿಶ್ವಾಸ ಮುರಿದು ತೋರಿಸಿ'' ಎಂದು ಸವಾಲು ಹಾಕಿದ್ದರು.


Click it and Unblock the Notifications











