ಹಿಂದೂ ಸಂಪ್ರದಾಯದಂತೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ, 30 ಜನರ ಸಮ್ಮುಖದಲ್ಲಿ ನಡೆಯಿತು ಮದುವೆ
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು.
ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ. ಸಮಂತಾ ವಿಚಾರದಲ್ಲಿ ಆಗಿದ್ದು ಕೂಡ ಇದೆ. ಹೌದು, ನಾಗಚೈತನ್ಯ ಅವರಿಂದ ದೂರವಾದ ನಂತರ ಸಮಂತಾ ಏಕಾಂಗಿಯಾಗಿದ್ದರು. ಸಾಲದಕ್ಕೆ ಅನಾರೋಗ್ಯ ಬೇರೆ ಕಾಡುತ್ತಿತ್ತು.

ಇನ್ನು ಸಮಂತಾ ಅವರನ್ನು ಮರೆತು ಶೋಭಿತಾ ಜೊತೆ ನಾಗ ಚೈತನ್ಯ ಮದುವೆಯಾದ ನಂತರ ಹಲವರು ಸಮಂತಾ ಅವರನ್ನು ಕಂಡು ಮರುಕ ಪಟ್ಟಿದ್ದರು. ಸಮಂತಾ ಅವರ ಎರಡನೇ ಮದುವೆಯ ಕುರಿತು ಚಿಂತೆ ಮಾಡಲು ಶುರು ಮಾಡಿದ್ದರು.
ಇದೇ ಸಮಯದಲ್ಲಿ ಸಮಂತಾ ಅವರ ಬದುಕಿನಲ್ಲಿ ''ದಿ ಫ್ಯಾಮಿಲಿ ಮ್ಯಾನ್'' ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರ ಪ್ರವೇಶವೂ ಆಗಿತ್ತು. ಹಾಗಂತೆ.. ಹೀಗಂತೆ.. ಎಂದು ಇಬ್ಬರ ಸಂಬಂಧದ ಕುರಿತು ಚರ್ಚೆ ಕೂಡ ಶುರುವಾಯ್ತು. ಕೊನೆಗೆ ಹಲವರು ಅಂದುಕೊಂಡತೆಯೇ ಈಗ ಆಗಿದೆ. ಸಮಂತಾ ಎರಡನೇ ಮದುವೆ ಸರಳವಾಗಿ ಇಂದು ( ಡಿಸೆಂಬರ್ 1) ನೆರವೇರಿದೆ.

ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ''ಈಶ ಯೋಗ ಕೇಂದ್ರ''ದಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇನ್ನೂ ಸಮಂತಾ ಆಧ್ಯಾತ್ಮದತ್ತ ಒಲವು ಇರುವ ನಾಯಕಿ. ಸದ್ಗುರು ಜಗ್ಗಿ ವಾಸುದೇವನ್ ಅವರ ಅನುಯಾಯಿ. ಈ ಹಿಂದೆ ಮನಶಾಂತಿಗಾಗಿ ಸದ್ಗುರು ಸಮ್ಮುಖದಲ್ಲಿ ಧ್ಯಾನವನ್ನು ಸಮಂತಾ ಮಾಡಿದ್ದರು. ಇಶಾ ಫೌಂಡೇಶನ್ ಜೊತೆ ಸಮಂತಾ ಅವರಿಗೆ ಭಾವನಾತ್ಮಕ ಸಂಬಂಧ ಇದೆ. ಈ ಹಿನ್ನೆಲೆ ಹೊಸ ಬದುಕಿಗೆ ಇಶಾ ಯೋಗ ಕೇಂದ್ರದಲ್ಲಿಯೇ ಅಡಿಪಾಯವನ್ನು ಸಮಂತಾ ಹಾಕಿದ್ದಾರೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಸಮಂತಾ ಕ್ರಿಶ್ಚಿಯನ್ ಧರ್ಮದವರು. ಈ ಹಿಂದೆ ನಾಗಚೈತನ್ಯ ಜೊತೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಆ ನಂತರ ಮರು ದಿನ ಕ್ರೈಸ್ತ ಸಂಪ್ರದಾಯದಂತೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ರಾಜ್ ನಿಡಿಮೋರು ಜೊತೆ ಕೂಡ ಸದ್ಯ ಹಿಂದೂ ಸಂಪ್ರದಾಯದಂತೆ ಸಮಂತಾ ಮದುವೆಯಾಗಿದ್ದು ಕ್ರೈಸ್ತ ಸಂಪ್ರದಾಯದಂತೆ ಸಮಂತಾ ಮದುವೆಯಾಗುತ್ತಾರಾ ? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ನಡೆದ ಈ ಸರಳ ಮದುವೆಯ ಸಮಾರಂಭದಲ್ಲಿ 30 ಜನರು ಮಾತ್ರ ಭಾಗವಹಿಸಿದ್ದರು. ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಅವರಿಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ.. ಪಾರ್ವತಿ ಮೆನನ್.. ಸೇರಿ ಹಲವರು ಶುಭಾಶಯಗಳನ್ನು ಕೋರಿದ್ದಾರೆ. ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ಧಾರೆ. ಕೇವಲ ಒಂದು ಗಂಟೆಯಲ್ಲಿ ಸಮಂತಾ ಅವರ ಈ ಮದುವೆ ಫೋಟೊಗಳನ್ನು 1,900,668 ಕ್ಕೂ ಅಧಿಕ ಜನ ಮೆಚ್ಚಿಕೊಂಡಿದ್ದಾರೆ.
ಇನ್ನುಳಿದಂತೆ ಮದುವೆಗೂ ಮುನ್ನ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ತಮ್ಮ ಮನದ ನೋವನ್ನು ಹೊರ ಹಾಕಿದ್ದರು. ನಿಗೂಡಾರ್ಥದ ಪೋಸ್ಟ್ ಹಂಚಿಕೊಂಡಿದ್ದರು. "ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ" ಎಂಬ ಮೈಕೆಲ್ ಬ್ರೂಕ್ಸ್ ಅವರ ಸಾಲುಗಳನ್ನು ಬರೆದುಕೊಂಡಿದ್ದರು. ಸಮಂತಾ ಮತ್ತು ರಾಜ್ ನಿಡಿಮೋರು ಅವರ ಮದುವೆ ವದಂತಿಗಳಿಗೆ ಶ್ಯಾಮಿಲಿ ಡೇ ಅವರ ಈ ಪೋಸ್ಟ್ ಪುಷ್ಠಿಯನ್ನು ನೀಡಿತ್ತು. ಈಗ ಕೊನೆಗೂ ಸಮಂತಾ ಮತ್ತು ರಾಜ್ ನಿಡಿಮೋರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ನವ ಜೋಡಿಗೆ ನಿಮ್ಮ ಶುಭ ಹಾರೈಕೆ ಕೂಡ ಇರಲಿ.


Click it and Unblock the Notifications











