ಹೂವಿನ ಹಾದಿಯಲ್ಲಿ 'ಅಮೃತವರ್ಷಿಣಿ' ಹೇಮಂತ್ ಸಿನಿಜರ್ನಿ: ಸಹಜ ನಟನೆಯಿಂದ ಮೋಡಿ ಮಾಡಿದ ಸುರಸುಂದರಾಂಗ
ತಮ್ಮ ಸಹಜ ಅಭಿನಯದಿಂದ ಮನೆ ಮಾತಾಗಿದ್ದ ನಟ ಶರತ್ ಬಾಬು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯದಿಂದ ಮೋಡಿ ಮಾಡಿದ್ದರು. ಆರಂಭದಲ್ಲಿ ಹೀರೊ ಆಗಿ, ವಿಲನ್ ಆಗಿ ನಟಿಸಿದ ಅವರು ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಗಮನ ಸೆಳೆದರು.
ಆಂಧ್ರದ(ಅಂದಿನ ಮದ್ರಾಸ್) ಶ್ರೀಕಾಕುಲಂನ ಅಮಲದಲವಸಲದಲ್ಲಿ 1951ರಲ್ಲಿ ಶರತ್ ಬಾಬು ಜನಿಸಿದ್ದರು. ಅವರ ಮೂಲ ಹೆಸರು ಸತ್ಯಂಬಾಬು ದೀಕ್ಷಿತುಲು. 1973ರಲ್ಲಿ 'ರಾಮರಾಜ್ಯಂ' ಎನ್ನುವ ತೆಲುಗು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮುಂದೆ ಕಮಲ್ ಹಾಸನ್ ನಟನೆಯ ತಮಿಳಿನ 'ನಿಳಲ್ ನಿಜಮಾಗಿರದು' ಚಿತ್ರದ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. 'ತುಳಸಿದಳ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದರು.

ಶರತ್ ಬಾಬು ತಂದೆ ಹೋಟೆಲ್ ಉದ್ಯಮಿ ಆಗಿದ್ದರು. ಮನೆ ಕಡೆ ಚೆನ್ನಾಗಿಯೇ ಇದ್ದರು. ಪೊಲೀಸ್ ಆಫೀಸರ್ ಆಗುವ ಕನಸು ಕಂಡಿದ್ದರು. ಆದರೆ ಕಾಲೇಜು ದಿನಗಳಲ್ಲಿ ದೃಷ್ಟಿ ಸಮಸ್ಯೆ ಆಗಿತ್ತು. ಹಾಗಾಗಿ ಪೊಲೀಸ್ ಇಲಾಖೆಗೆ ಸೇರೋದು ಕಷ್ಟ ಎಂದು ಗೊತ್ತಾಗಿ ಆ ಆಸೆಯನ್ನು ಕೈಬಿಟ್ಟರು. ಕಾಲೇಜಿನಲ್ಲಿ ಸ್ನೇಹಿತರೆಲ್ಲಾ ನೋಡೊಕೆ ಚೆನ್ನಾಗಿದ್ದೀಯಾ? ಥೇಟ್ ಹೀರೋ ತರ ಇದ್ದೀಯಾ? ಸಿನಿಮಾಗಳಲ್ಲಿ ಯಾಕೆ ನಟಿಸಬಾರದು ಎಂದು ಸಲಹೆ ಕೊಡುತ್ತಿದ್ದರಂತೆ. ಅವರ ತಾಯಿಗೂ ಇದೇ ಮಾತನನ್ನು ಹೇಳುತ್ತಿದ್ದರಂತೆ.
ಚಿತ್ರರಂಗಕ್ಕೆ ಹೋದರೆ ಮಗ ಹಾಳಾಗುತ್ತಾನೆ ಎಂದು ತಂದೆ ಒಪ್ಪಲಿಲ್ಲವಂತೆ. ಆದರೆ ತಾಯಿಯ ಪ್ರೋತ್ಸಾಹ ಇತ್ತು. ಆದರೆ ಶರತ್ ಬಾಬುಗೆ ಸಿನಿಮಾ ಸೆಳೆತ ಇತ್ತು. ಇದೇ ಸಮಯದಲ್ಲಿ ತೆಲುಗಿನ 'ರಾಮರಾಜ್ಯಂ' ಸಿನಿಮಾ ನಟ, ನಟಿಯರು ಬೇಕು ಎನ್ನುವ ಜಾಹಿರಾತು ನೋಡುತ್ತಾರೆ. ತಾಯಿಯ ಬಳಿ ಹಣ ಪಡೆದು ಚೆನ್ನೈಗೆ ಹೋಗಿ ಆಡಿಷನ್ ಕೊಡುತ್ತಾರೆ. ಆ ಚಿತ್ರಕ್ಕೆ ಆಯ್ಕೆ ಆದರು. ಮೊದಲ ಸಿನಿಮಾದಲ್ಲಿ ಹೀರೊ ಆಗಿ ನಟಿಸಿದರು. ಚಿತ್ರರಂಗಕ್ಕೆ ಬರೋಕೆ ಹೆಚ್ಚು ಕಷ್ಟ ಏನು ಆಗಲಿಲ್ಲ. ಅವರು ಕೂಡ ಅಷ್ಟು ಸುಲಭವಾಗಿ ಸಿನಿಮಾ ಹೀರೋ ಆಗ್ತೀನಿ ಎಂದು ಅಂದುಕೊಂಡಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕೆ. ಬಾಲಚಂದರ್ ನಿರ್ದೇಶನದ 'ನಿಳಲ್ ನಿಜಮಾಗಿರದು' ಸಿನಿಮಾ ಶರತ್ ಬಾಬುಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ಚಿತ್ರರಂಗದಲ್ಲಿ ಬ್ಯುಸಿಯಾದರು. 'ಮುಳ್ಳುಂ ಮಳರುಂ' ಚಿತ್ರದಲ್ಲಿ ರಜನಿಕಾಂತ್ ಜೊತೆ ಪೈಪೋಟಿಗೆ ಬಿದ್ದು ನಟಿಸಿದ್ದರು. ಶರತ್ ಬಾಬು ಬಣ್ಣ ಹಾಗೂ ಲುಕ್ ನೋಡಿ ಈತ ದಕ್ಷಿಣ ಭಾರತದ ನಟನಂತೆ ಇಲ್ಲ ಯೂರೋಪ್ ನಟನಂತೆ ಇದ್ದಾನೆ ಎಂದು ಚಿತ್ರರಂಗದಲ್ಲಿ ಹೇಳುತ್ತಿದ್ದರಂತೆ. ಆರಂಭದಲ್ಲಿ ಹೀರೊ, ವಿಲನ್ ಆಗಿ ನಟಿಸಿದ ಶರತ್ ಮುಂದೆ ನಾಯಕನ ಸ್ನೇಹಿತ, ಅಣ್ಣ, ತಮ್ಮ, ತಂದೆ, ನಾಯಕಿಯ ತಂದೆ ಹೀಗೆ ಪೋಷಕರ ಪಾತ್ರಗಳಲ್ಲಿ ನಟಿಸುತ್ತಾ ಹೋದರು.

ತೆಲುಗಿನ ಹಾಸ್ಯನಟಿ ರಮಪ್ರಭಾ ಜೊತೆ 1974ರಲ್ಲಿ ಶರತ್ ಬಾಬು ಮದುವೆ ನಡೆದಿತ್ತು. ತನಗಿಂತ 6 ವರ್ಷ ದೊಡ್ಡವರಾದ ರಮಪ್ರಭಾನ ಪ್ರೀತಿಸಿ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ 1988ರಲ್ಲಿ ದಂಪತಿ ವಿಚ್ಛೇದನ ಪಡೆದು ದೂರಾಗಿದ್ದರು. ಆ ನಂತರ ಶರತ್ ಬಾಬು ನನಗೆ ಮೋಸ ಮಾಡಿ ನನ್ನ ಆಸ್ತಿಯನ್ನು ಬರೆಸಿಕೊಂಡಿದ್ದಾನೆ ಎಂದು ರಮಪ್ರಭಾ ಆರೋಪಿಸಿದ್ದರು. 1990ರಲ್ಲಿ ಸ್ನೇಹಾ ನಂಬಿಯಾರ್ ಎಂಬುವವರನ್ನು ಶರತ್ ಬಾಬು 2ನೇ ಮದುವೆ ಆದರು.
ದಕ್ಷಿಣ ಭಾರತದ 4 ಭಾಷೆಗಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲೂ ಶರತ್ ಬಾಬು ನಟಿಸಿದ್ದಾರೆ. ಕನ್ನಡದ ಮಟ್ಟಿಗೆ ಶರತ್ ಬಾಬು ಅಂದಾಕ್ಷಣ ನೆನಪಾಗುವುದು 5 ಭಾಷೆಗಳಲ್ಲಿ ಬಣ್ಣ ಹಚ್ಚಿ ಸಕ್ಸಸ್ ಕಂಡರು. ಕನ್ನಡದಮಟ್ಟಿಗೆ ಶರತ್ ಬಾಬು ಅಂದಾಕ್ಷಣ ನೆನಪಾಗುವುದು ದಿನೇಶ್ ಬಾಬು ನಿರ್ದೇಶನದ ಅಮೃತವರ್ಷಿಣಿ ಸಿನಿಮಾ. 1997ರಲ್ಲಿ ಬಂದಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುಹಾಸಿನಿ, ರಮೇಶ್ ಅರವಿಂದ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಈ ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
ಚಿತ್ರದಲ್ಲಿ ಸುಹಾಸಿನಿ ಪತಿ ಹೇಮಂತ್ ಪಾತ್ರದಲ್ಲಿ ಶರತ್ ಬಾಬು ಸಹಜ ಅಭಿನಯದಿಂದ ಕನ್ನಡ ಸಿನಿರಸಿಕರ ಮನಗೆದ್ದರು. 'ಹೃದಯಾ ಹೃದಯಾ', 'ನೀಲಾ', 'ನಮ್ಮೆಜಮಾನ್ರು', 'ಬೃಂದಾವನ', 'ಆರ್ಯನ್' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಶರತ್ ಬಾಬು ಬಣ್ಣ ಹಚ್ಚಿದ್ದರು. ಇನ್ನು 8 ನಂದಿ ಅವಾರ್ಡ್ಸ್ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಇವರಿಗೆ ಸಿಕ್ಕಿತ್ತು.


Click it and Unblock the Notifications











