"ನಾವು ಗೆದ್ದಿದ್ದು ಒಂದೇ ಕಣ್ರೀ, ಆ ಸಿನಿಮಾ ನೋಡಿ, ಆ ರೇಂಜಿಗೆ ನಾವು ಬೆಳೆಯಬೇಕು": ವಿಜಯೇಂದ್ರ ಪ್ರಸಾದ್
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಆಸ್ಕರ್ ವೇದಿಕೆಯಲ್ಲಿ ಸಂಚಲನ ಸೃಷ್ಟಿಸಿದೆ. ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಮಾರ್ಚ್ 25ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ತಂಡ ಆಸ್ಕರ್ ಗೆದ್ದ ಬೆನ್ನಲ್ಲೇ ಸಿನಿಮಾ ಸೀಕ್ವೆಲ್ ಬಗ್ಗೆ ಅವರು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ತಮ್ಮ ಪುತ್ರ ರಾಜಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ವಿಜಯೇಂದ್ರ ಪ್ರಸಾದ್ ಕಥೆ ಒದಗಿಸುತ್ತಾರೆ. ಇದೀಗ 'RRR' ಚಿತ್ರಕ್ಕೆ ಆಸ್ಕರ್ ಸಿಕ್ಕಿರುವ ಸಂದರ್ಭದಲ್ಲಿ ವಿಜಯೇಂದ್ರ ಪ್ರಸಾದ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ನಮ್ಮ ಸಿನಿಮಾಗೆ ಆಸ್ಕರ್ ಸಿಕ್ಕಿದ್ದು ಸಂತಸ ತಂದಿದೆ. ಇದು ನಮ್ಮ ಮೇಲೆ ಅಥವಾ ನನ್ನ ಮೇಲೆ ಯಾವುದೇ ಒತ್ತಡ ತಂದಿಲ್ಲ. ಹೆಚ್ಚಿನ ಜವಾಬ್ದಾರಿ ತಂದಿದೆ. ಮತ್ತಷ್ಟು ಒಳ್ಳೆ ಸಿನಿಮಾಗಳು ಮಾಡಬೇಕು. ಒಮ್ಮೆ ಸಾಬೀತು ಮಾಡಿದ್ದೇವೆ. ಮತ್ತೆ ಅವಕಾಶ ಸಿಕ್ಕರೆ ಮತ್ತೆ ಮತ್ತೆ ಸಾಬೀತು ಮಾಡಿಕೊಳ್ಳಬೇಕು ಎನಿಸುತ್ತಿದೆ" ಎಂದಿದ್ದಾರೆ.

"ಆಸ್ಕರ್ನಲ್ಲಿ ಒಂದೇ ಒಂದು ಪ್ರಶಸ್ತಿ ಗೆದ್ದಿದ್ದೇವೆ ಅಷ್ಟೇ. ಇನ್ನು ಅದರಲ್ಲಿ ಸಾಕಷ್ಟು ವಿಭಾಗಗಳಿವೆ. ಅದರಲ್ಲಿ ಈಗ ಒಂದನ್ನು ಮಾತ್ರ ಗೆದ್ದಿದ್ದೇವೆ. 'ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್' ಸಿನಿಮಾ ನೋಡಿ ಹಲವು ವಿಭಾಗಗಳಲ್ಲಿ ಆಯ್ಕೆ ಆಗಿ 7 ಪ್ರಶಸ್ತಿಗಳನ್ನು ಗೆದ್ದಿದೆ. ಅದ್ಭುತ ಕಥೆ ಅಲ್ವಾ ಅದು. ಅವರ ಯಾವ ರೇಂಜಿಗೆ ಮಾಡಿದ್ದಾರೆ. ಆ ರೇಂಜಿಗೆ ನಾನು ಬೆಳೆಯಬೇಕು. 'RRR' ಚಿತ್ರದಲ್ಲೂ ರಾಮ್ಚರಣ್- ಜ್ಯೂ. ಎನ್ಟಿಆರ್ ಇಬ್ಬರು ನಟಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಈ ಆ ಸಿನಿಮಾ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ" ಎಂದು ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
ವಿಜಯೇಂದ್ರ ಪ್ರಸಾದ್ ತೆಲುಗು ಮಾತ್ರವಲ್ಲದೇ ಹಿಂದಿ ಹಾಗೂ ಕನ್ನಡ ಸಿನಿಮಾಗಳಿಗೂ ಕತೆ ಒದಗಿಸಿದ್ದಾರೆ. ಬಾಲಿವುಡ್ನ 'ಭಜರಂಗಿ ಭಾಯಿಜಾನ್' ಚಿತ್ರಕ್ಕೆ ಕಥೆ ಕೊಟ್ಟಿದ್ದರು. ಕನ್ನಡದಲ್ಲಿ ಶಿವಣ್ಣನ 'ಕುರುಬನ ರಾಣಿ', ವಿಷ್ಣುವರ್ಧನ್ ನಟನೆಯ 'ಅಪ್ಪಾಜಿ', ರವಿಚಂದ್ರನ್ ನಟನೆಯ 'ಪಾಂಡುರಂಗವಿಠಲ' ಸಿನಿಮಾಗಳಿಗೆ ಕಥೆ ಸಿದ್ಧಪಡಿಸಿದ್ದರು. 'RRR' ಬಾಲಿವುಡ್ನ 'ಸೀತ', 'ಅಪರಾಜಿತ ಅಯೋಧ್ಯ', 'ಪವನ ಪುತ್ರ ಭಾಯಿಜಾನ್' ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ.

ರಾಜಮೌಳಿ - ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕೂ ವಿಜಯೇಂದ್ರ ಪ್ರಸಾದ್ ಕಥೆ ಸಿದ್ಧಪಡಿಸುತ್ತಿದ್ದಾರೆ. ಹಾಲಿವುಡ್ ರೇಂಜ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದ್ದು ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











